ಕಾವೂರು: ಮುಸ್ಲಿಮ್ ಸಹೋದರರಿಬ್ಬರ ಕೊಲೆ ಯತ್ನ

Prasthutha|

20ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳಿಂದ ಕೃತ್ಯ

- Advertisement -

ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಸಹೋದರರಿಬ್ಬರ ಮೇಲೆ 20ಕ್ಕೂ ಅಧಿಕ ಮಂದಿಯಿದ್ದ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಶನಿವಾರ ಸಂಜೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಹೋದರರಾದ ಅಝೀಮ್ (15) ಹಾಗೂ ಆಶಿಕ್ (19) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಭಾಷ್ ಯಾನೆ ಚರಣ್, ಪದ್ಮನಾಭ ಯಾನೆ ಪಮ್ಮ, ಶಿವು, ಲೋಕೇಶ್ ಸೇರಿದಂತೆ 20ಕ್ಕೂ ಅಧಿಕ ಮಂದಿಯ ತಂಡ ಮಾರಕಾಸ್ತ್ರಗಳಿಂದ ನನ್ನ ಹಾಗೂ ನನ್ನ ಸಹೋದರದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಅಝೀಮ್ ಕಾವೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


ಶನಿವಾರ ಸಂಜೆ ಅಝೀಮ್ ಗೆ ಪರಿಚಯದವನೇ ಆದ ಸುಭಾಷ್ ಕೆಟ್ಟದಾಗಿ ಬೈದಿದ್ದಾನೆ. ಈ ವಿಷಯವನ್ನು ಸ್ನೇಹಿತ ಗೌತಮ್ ಎಂಬಾತ ಅಝೀಮ್ ಗೆ ಕರೆ ಮಾಡಿ ತಿಳಿಸಿದ್ದಾನೆ. ಈ ಬಗ್ಗೆ ವಿಚಾರಿಸಲು ಸುಭಾಷ್ ಗೆ ಕರೆ ಮಾಡಿದಾಗ ಅಝೀಮ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸುಭಾಷ್, ಧೈರ್ಯವಿದ್ದರೆ ರಾಘವೇಂದ್ರ ಮಠದ ಗುಡ್ಡೆ ಮೈದಾನದ ಬಳಿ ಬರುವಂತೆ ಸವಾಲು ಹಾಕಿದ್ದಾನೆ.
ಈ ವಿಷಯವನ್ನು ಅಝೀಮ್ ತನ್ನ ಸಹೋದರ ಆಶಿಕ್ ಗೆ ತಿಳಿಸಿದ್ದಾನೆ. ಆಶಿಕ್ ಸಹೋದರನನ್ನು ಕರೆದುಕೊಂಡು ರಾಘವೇಂದ್ರ ಮಠದ ಬಳಿ ತೆರಳಿದಾಗ 20ಕ್ಕೂ ಅಧಿಕ ಮಂದಿಯ ತಂಡ ದೊಣ್ಣೆ, ಕಲ್ಲು, ಹೆಲ್ಮೆಟ್, ವಿಕೆಟ್ ಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಅವರಿಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸರಿಗೆ ದೂರು ನೀಡಲಾಗಿದೆ.

Join Whatsapp