ಮಂಗಳೂರು ವಿದ್ಯಾರ್ಥಿನಿಗೆ ಇಂಜಿನಿಯರಿಂಗ್ ಬದಲು ದಂತವೈದ್ಯಕೀಯ ಶಿಕ್ಷಣ ಮುಂದುವರಿಸಲು ಹೈಕೋರ್ಟ್ ಅಸ್ತು

Prasthutha|

ಮಂಗಳೂರು: ಇಂಜಿನಿಯರಿಂಗ್ ಕೋರ್ಸ್ ಬದಲು ದಂತವೈದ್ಯಕೀಯ ಕೋರ್ಸ್ ಸೇರಿದ್ದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆದೇಶವನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ವಿದ್ಯಾರ್ಥಿನಿ ದಂತ ವೈದ್ಯಕೀಯ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ, ಮಾತ್ರವಲ್ಲ ಅದೇ ಕೋರ್ಸ್ ಮುಂದುವರಿಸಲು ಅವಕಾಶ ಕಲ್ಪಿಸಿ ಮಹತ್ವದ ತೀರ್ಪು ನೀಡಿದೆ.

- Advertisement -

ಶ್ರೀನಿವಾಸ ಡೆಂಟಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ನಿಧಿ ಶೆಟ್ಟಿಗಾರ್ ಅವರಿಗೆ ಹೈಕೋರ್ಟ್ ನ್ಯಾಯ ಒದಗಿಸಿಕೊಟ್ಟಿದೆ.

ನಿಧಿ ಅವರು ದ್ವಿತೀಯ ಪಿಯುಸಿ ಬಳಿಕ ಸಿಇಟಿ ಪರೀಕ್ಷೆಗೆ ಬರೆದು ಇಂಜಿನಿಯರ್ ಕೋರ್ಸ್ ಗಾಗಿ ಹೆಸರು ನೋಂದಾಯಿಸಿದ್ದರು. ಮಾತ್ರವಲ್ಲ ಸಿಇಟಿಯಲ್ಲಿ ಇಂಜಿನಿಯರಿಂಗ್ ಕೋರ್ಸ್ ಗೆ ಅರ್ಹತೆ ಗಳಿಸಿದ್ದರು. ಬಳಿಕ ಮನಸ್ಸು ಬದಲಿಸಿ ಇಂಜಿನಿಯರಿಂಗ್ ಬೇಡ ದಂತ ವೈದ್ಯಕೀಯಕ್ಕೆ ಹೋಗುತ್ತೇನೆ ಎಂದು ತೀರ್ಮಾನಿಸಿ ನೀಟ್ ಪರೀಕ್ಷೆ ಬರೆದು, ನೀಟ್ ಕೌನ್ಸಿಲಿಂಗ್ ನಲ್ಲಿ ಅರ್ಹತೆ ಪಡೆದರು.

- Advertisement -

ಅದರಂತೆ ಮಂಗಳೂರಿನ ಶ್ರೀನಿವಾಸ ದಂತ ವೈದ್ಯಕೀಯ ಕಾಲೇಜಿನಲ್ಲಿ ಹೆಸರು ನೋಂದಾಯಿಸಿ ತರಗತಿಗೆ ಹಾಜರಾಗಿದ್ದರು. ಈ ಮಧ್ಯೆ ಪರೀಕ್ಷೆ ಮೊದಲು ಇಂಜಿನಿಯರಿಂಗ್ ನಲ್ಲಿ ಹೆಸರು ನೋಂದಾಯಿಸಿದ್ದೀರಿ ಅದರಲ್ಲೇ ಮುಂದುವರಿಯಬೇಕು,

ದಂತವೈದ್ಯಕೀಯ ಪರೀಕ್ಷೆಗೆ ಹಾಲ್ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ರಾಜೀವ್ ಗಾಂಧಿ ವಿವಿ ಆಕೆಗೆ ಹಾಲ್ ಟಿಕೆಟ್ ನೀಡಲು ನಿರಾಕರಿಸಿತು.

ಇದರಿಂದ ಕಂಗಾಲಾದ ವಿದ್ಯಾರ್ಥಿನಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ವಕೀಲ ರವೀಂದ್ರ ಕಾಮತ್ ಅವರು ವಿದ್ಯಾರ್ಥಿನಿ ಪರವಾಗಿ ವಾದ ಮಂಡಿಸಿದ್ದರು. ಮಧ್ಯಂತರ ತೀರ್ಪು ನೀಡಿದ ನ್ಯಾಯಾಲಯ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆಯಲು ಈ ಹಿಂದೆ ಅವಕಾಶ ಕಲ್ಪಿಸಿತ್ತು.

ನ್ಯಾಯಮೂರ್ತಿ ಅಲೋಕ್ ಅರಾದೆ ಮತ್ತು ನ್ಯಾಯಮೂರ್ತಿ ಅನಂತ್ ಹೆಗಡೆ ಅವರ ಪೀಠ ರಾಜೀವ್ ಗಾಂಧಿ ವಿವಿ ಮತ್ತು ಅರ್ಜಿದಾರರ ವಾದ ವಿವಾದವನ್ನು ಆಲಿಸಿ ಸೋಮವಾರ ಅರ್ಜಿದಾರರ ಪರ ತೀರ್ಪು ನೀಡಿದ್ದಾರೆ.

ಇಂಜಿನಿಯರಿಂಗ್ ಗೆ ಹೆಸರು ನೋಂದಾಯಿಸಿದ್ದರೂ ದಂತ ವೈದ್ಯಕೀಯಕ್ಕೆ ತಡೆ ನೀಡುವಂತಿಲ್ಲ. ವಿದ್ಯಾರ್ಥಿನಿಗೆ ದಂತ ವೈದ್ಯಕೀಯ ಶಿಕ್ಷಣ ಮುಂದುವರಿಸುವ ಎಲ್ಲಾ ಅರ್ಹತೆ ಇದೆ ಎಂದು ತೀರ್ಪು ನೀಡಿದೆ.

ರಾಜೀವ್ ಗಾಂಧಿ ವಿವಿಯ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ನಾಳೆಯಿಂದ ಆರಂಭಗೊಳ್ಳುವ ದಂತ ವೈದ್ಯಕೀಯ ಪರೀಕ್ಷೆಯನ್ನು ಅರ್ಜಿದಾರರು ಬರೆಯಬಹದು. ವಿದ್ಯಾವಿದ್ಯಾಲಯ ಕೂಡ ಹಿಂದಿನ ಫಲಿತಾಂಶ ಪ್ರಕಟಿಸಬಹುದು ಎಂದು ತೀರ್ಪು ನೀಡಿದೆ.

Join Whatsapp