ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆ ಪ್ರಚಂಡ ಸುಳ್ಳುಗಾರ ಬಿರುದು ನೀಡಬೇಕು : ಮುನಿಯಾಲು ಉದಯ ಶೆಟ್ಟಿ

Prasthutha|

ಉಡುಪಿ : ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣದಲ್ಲಿ ಭ್ರಷ್ಟಾಚಾರ ಎಸಗಿ ತನ್ನ ಭ್ರಷ್ಟಾಚಾರವನ್ನು ಮರೆಮಾಚಲು ಕಾಂಗ್ರೆಸ್ ವಿರುದ್ಧ ಆರೋಪ ಹೊರಿಸುತ್ತಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆ ಪ್ರಚಂಡ ಸುಳ್ಳುಗಾರ ಬಿರುದು ನೀಡಬೇಕು ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ವ್ಯಂಗ್ಯವಾಡಿದರು.

- Advertisement -

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಸುಳ್ಳು ಆರೋಪ ಮಾಡಿರುವ ಕಾರ್ಕಳ ಶಾಸಕರು ಕಾಂಗ್ರೆಸ್ ಮೇಲೆ ಆರೋಪ ಹೊರಿಸುವ ಮೂಲಕ ತನ್ನ ಭ್ರಷ್ಟಾಚಾರವನ್ನು ಮರೆಮಾಚುತ್ತಿದ್ದಾರೆ, ಅವರಂತೆ ಸುಳ್ಳು ಹೇಳುವ ಶಾಸಕ ದೇಶದಲ್ಲಿ ಬೇರೆ ಯಾರೂ ಸಿಗಲಿಕ್ಕಿಲ್ಲ ಎಂದು ಕುಟುಕಿದರು. ಕಾರ್ಕಳದ ಶಾಸಕರು ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಲ್ಲಿ ಜನರನ್ನು ಮರಳು ಮಾಡಿ ತನ್ನ ಅಭಿವೃದ್ಧಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. .

ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣದಲ್ಲಿ ಸಾರ್ವಜನಿಕರ ಹಣ ಲೂಟಿಯಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠವೇ ಅಭಿಪ್ರಾಯ ವ್ಯಕ್ತಪಡಿಸಿದೆ, ಪ್ರತಿಮೆಯ ಮೇಲ್ಬಾಗ ನಕಲಿ ಎಂಬುದು ಬಯಲಾಗಿದೆ, ಇದರಿಂದ ಕಾರ್ಕಳ ಶಾಸಕರ ನಿಜ ಬಣ್ಣ ಬಯಲಾಗಿದೆ. ಹೀಗಿದ್ದರೂ ಶಾಸಕರು ಸುಳ್ಳು ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

- Advertisement -

ತನ್ನ ರಾಜಕೀಯ ಲಾಭಕ್ಕಾಗಿ ಪರಶುರಾಮ ಥೀಮ್ ಪಾರ್ಕ್ ಹೆಸರಲ್ಲಿ ಜನರ ಭಾವನೆ ಜತೆ ಚೆಲ್ಲಾಟ ಆಡಿದವರನ್ನು ಸಮಾಜ ಬಹಿಷ್ಕರಿಸಬೇಕು, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧರ್ಮವಿರೋಧಿ ಜನಪ್ರತಿನಿಧಿಯನ್ನು ಸಮಾಜ ಬಹಿಷ್ಕರಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಗ್ಯಾರಂಟಿ ಎಂದು ಎಚ್ಚರಿಸಿದರು. ಕಾರ್ಕಳದ ಶಾಸಕರ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆದು ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.


ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್, ವಿನಯ ಕುಮಾರ್ ಕಬ್ಯಾಡಿ, ಕೆ.ಕೃಷ್ಣಮೂರ್ತಿ ಆಚಾರ್ಯ, ಯೋಗೀಶ್ ಇನ್ನಾ ಉಪಸ್ಥಿತರಿದ್ದರು.



Join Whatsapp