ಕನ್ನಡ ನಾಡು-ನುಡಿ ಪರಂಪರೆಯ ಉಳಿವಿಗೆ ಅಗತ್ಯವಾದ ಎಲ್ಲಾ ಯೋಜನೆಗಳ ಅನುಷ್ಠಾನ : ಸಚಿವ ಶಿವರಾಜ್ ಎಸ್. ತಂಗಡಗಿ

Prasthutha|

ಬೆಂಗಳೂರು : ಕನ್ನಡ ಭಾಷೆಯ ಅಸ್ಮಿತೆಯನ್ನು ಕಾಪಾಡಲು ಹಾಗೂ ಕನ್ನಡ ನಾಡು-ನುಡಿ-ಪರಂಪರೆಯ ಉಳಿವಿಗೆ ಅಗತ್ಯವಾದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದ್ದಾರೆ.

- Advertisement -

ಅವರು ಕನ್ನಡ ಭವನದಲ್ಲಿರುವ ಅಂತರಂಗ ಸಭಾ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರ ವ್ಯಾಪ್ತಿಗೆ ಬರುವ ಇಲಾಖೆಗಳ ಮುಖ್ಯಸ್ಥರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಇಲಾಖೆ ಹಾಗೂ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ವಿಧಾನಮಂಡಲದಲ್ಲಿ ಅನುಮೋದನೆಗೊಂಡ ವಿಧೇಯಕಕ್ಕೆ ಸಂಬಂಧಿಸಿದಂತೆ ಕಾಯ್ದೆ ಹಾಗೂ ನಿಯಮಗಳನ್ನು ರೂಪಿಸುವ ಕೆಲಸಕ್ಕೆ ವೇಗ ನೀಡಬೇಕೆಂದು ಸೂಚಿಸಿದರು. ಕಾಲಮಿತಿಯಲ್ಲಿ ಕಾಯ್ದೆಗಳು ರೂಪುಗೊಳ್ಳಬೇಕೆಂದು ತಿಳಿಸಿದರು.

- Advertisement -

ಜಿಲ್ಲಾ ಮಟ್ಟದಲ್ಲಿ ಆಯೋಜಿಸುತ್ತಿರುವ ವಿವಿಧ ಉತ್ಸವಗಳನ್ನು ಇನ್ನೂ ಹೆಚ್ಚು ಆಕರ್ಷಣೀಯವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಆಯೋಜಿಸಲು ರೂಪುರೇಷೆ ಸಿದ್ಧಪಡಿಸಬೇಕೆಂದು ಹೇಳಿದರು. ಪ್ರತೀ ಜಿಲ್ಲೆಯ ಜೀವಂತಿಕೆ ಉಳಿಸುವಂತಹ ಕಾರ್ಯಕ್ರಮವಾಗಬೇಕು. ಅದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಇಲಾಖೆಯ ಸಹಯೋಗವನ್ನು ಪಡೆಯುವುದರ ಮೂಲಕ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಹೆಚ್ಚಿಸಬಹುದೆಂದು ಸಲಹೆ ನೀಡಿದರು.

ಖಾಸಗೀ ಸಂಸ್ಥೆಗಳಲ್ಲಿ ಹಾಗೂ ಖಾಸಗೀ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸುವುದರ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರ ಮತ್ತು ಇಲಾಖೆಗಳು ಪರಿಶೀಲನೆ ನಡೆಸಬೇಕು. ಕನ್ನಡಿಗರಿಗೆ ಉದ್ಯೋಗವಕಾಶವನ್ನು ದೊರಕಿಸಬೇಕಾದ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಚ್ಚು ಶ್ರಮ ವಹಿಸಬೇಕು. ಅದಕ್ಕೆ ಸರ್ಕಾರದಿಂದ ಬೇಕಾದ ಕಾನೂನಾತ್ಮಕ ನೆರವನ್ನು ಒದಗಿಸಲು ಶೀಘ್ರದಲ್ಲಿ ಸಂಬಂಧಪಟ್ಟವರ ಸಭೆ ಕರೆಯಲಾಗುವುದೆಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲು ಕ್ರಮವಹಿಸಲಾಗುವುದು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಬದ್ಧತೆಯಿಂದ ಕೆಲಸ ಮಾಡಬೇಕಿದೆ. ಇಲಾಖೆಯ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರಮಹತ್ವದ್ದು, ಇದರಲ್ಲಿ ಯಾವುದೇ ಲೋಪವಾದರೂ ಅದನ್ನು ತಾವು ಸಹಿಸುವುದಿಲ್ಲವೆಂದು ಅವರು ಎಚ್ಚರಿಕೆ ನೀಡಿದರು.

ಹಾರ ತುರಾಯಿ ಬದಲು ಪುಸ್ತಕ ನೀಡಿ:

ತಮ್ಮನ್ನು ಭೇಟಿ ಮಾಡಲು ಬರುವ ಯಾರೇ ಆದರೂ ಹಾರ ತುರಾಯಿ, ಶಾಲು, ಪೇಟ ಇತ್ಯಾದಿಗಳಿಂದ ಸನ್ಮಾನ ಮಾಡುವುದನ್ನು ನಾನು ಬಯಸುವುದಿಲ್ಲ .ಅದರ ಬದಲಾಗಿ ಒಂದು ಒಳ್ಳೆಯ ಸಾಹಿತ್ಯ ಕೃತಿಯನ್ನು ಕೊಟ್ಟರೆ ಅದು ನನಗೆ ನೀಡಬಹುದಾದ ಉತ್ತಮ ಕೊಡುಗೆಯಾಗುತ್ತದೆ . ಇದರಿಂದ ಪುಸ್ತಕ ಪ್ರಕಾಶಕರಿಗೆ, ಮಾರಾಟಗಾರರಿಗೆ ಹಾಗೂ ಸಾಹಿತಿಗಳಿಗೆ ನೆರವಾಗುವುದಲ್ಲದೆ ಪುಸ್ತಕಕೋದ್ಯಮದ ಬೆಳವಣಿಗೆಗೂ ಅನುಕೂಲವಾಗುತ್ತದೆ. ಈ ರೀತಿ ನನಗೆ ನೀಡಲಾಗುವ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಿ ಓದುವ ಆಸಕ್ತಿ ಉಳ್ಳ ಮಕ್ಕಳಿಗೆ ಅದನ್ನು ನೀಡಲು ಬಯಸುತ್ತೇನೆ .ಅಥವಾ ಆಸಕ್ತ ಶಾಲಾ, ಕಾಲೇಜಿನ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡುತ್ತೇನೆ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎನ್. ಮಂಜುಳಾ, ಎಲಾಖೆಯ ನಿರ್ದೇಶಕರಾದ ವಿಶ್ವನಾಥ ಪಿ. ಹಿರೇಮಠ ಸೇರಿದಂತೆ ವಿವಿಧ ಪ್ರಾಧಿಕಾರಗಳ ಹಾಗೂ ಅಕಾಡೆಮಿಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Join Whatsapp