ಕನ್ಹಯ್ಯಾ ಕುಮಾರ್ ಈಶಾನ್ಯ ದೆಹಲಿ ಕ್ಷೇತ್ರದಿಂದ ಸ್ಪರ್ಧೆ

Prasthutha|

ನವದೆಹಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ 10 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯುವ ನಾಯಕ ಕನ್ಹಯ್ಯಾ ಕುಮಾರ್ ಅವರನ್ನು ಈಶಾನ್ಯ ದೆಹಲಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಅವರು ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಸ್ಪರ್ಧಿಸಲಿದ್ದಾರೆ.

- Advertisement -

37 ವರ್ಷದ ಕನ್ಹಯ್ಯಾ ಕುಮಾರ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಮತ್ತು ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ (AISF) ನಾಯಕರಾಗಿ ಸೇವೆ ಸಲ್ಲಿಸಿದ್ದರು.  ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 28 ಸೆಪ್ಟೆಂಬರ್ 2021 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ್ದಾರೆ.

ಪಂಜಾಬಿನ ಜಲಂಧರ್-ಎಸ್‌ಸಿ ಲೋಕಸಭಾ ಸ್ಥಾನದಿಂದ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಅವರಿಗೆ ಟಿಕೆಟ್ ನೀಡಿದೆ. ಹಿರಿಯ ರಾಜಕಾರಣಿ ಜೆಪಿ ಅಗರ್ವಾಲ್ ಅವರನ್ನು ಚಾಂದಿನಿ ಚೌಕ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. ವಾಯವ್ಯ ದೆಹಲಿ ಲೋಕಸಭಾ ಸ್ಥಾನಕ್ಕೆ ಪಕ್ಷವು ಮಾಜಿ ಸಂಸದ ಉದಿತ್ ರಾಜ್ ಹೆಸರನ್ನು ಘೋಷಿಸಿದೆ.

- Advertisement -

ಪಂಜಾಬ್‌ನ ಅಮೃತಸರದಿಂದ ತನ್ನ ಹಾಲಿ ಸಂಸದರಾದ ಗುರ್ಜಿತ್ ಸಿಂಗ್ ಔಜ್ಲಾ ಮತ್ತು ಫತೇಘರ್ ಸಾಹಿಬ್ (SC) ಲೋಕಸಭಾ ಸ್ಥಾನದಿಂದ ಅಮರ್ ಸಿಂಗ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಮಾಜಿ ಸಂಸದ ಧರ್ವೀರ್ ಗಾಂಧಿ ಅವರು ಪಟಿಯಾಲ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆಮ್ ಆದ್ಮಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಕೆಲವೇ ದಿನಗಳಲ್ಲಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

ಅಖಿಲ ಭಾರತ ಕಿಸಾನ್ ವಿಭಾಗದ ಮುಖ್ಯಸ್ಥ ಸುಖಪಾಲ್ ಸಿಂಗ್ ಖೈರಾ ಅವರನ್ನು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಮತ್ತು ಜೀತ್ ಮೊಹಿಂದರ್ ಸಿಂಗ್ ಸಿಧು ಅವರನ್ನು ಬಟಿಂಡಾ ಲೋಕಸಭಾ ಕ್ಷೇತ್ರದಿಂದ ನಾಮನಿರ್ದೇಶನ ಮಾಡಿದೆ.

ಉತ್ತರ ಪ್ರದೇಶದ ಅಲಹಾಬಾದ್ ಲೋಕಸಭಾ ಕ್ಷೇತ್ರದಿಂದ ಉಜ್ವಲ್ ರೇವ್ತಿ ರಮಣ್ ಸಿಂಗ್ ಅವರ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ. ಒಡಿಶಾ ವಿಧಾನಸಭಾ ಚುನಾವಣೆಗೆ 75 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದೆ.

Join Whatsapp