ಕಲ್ಲಡ್ಕ: ನಿಧಾನಗತಿಯ ಕಾಮಗಾರಿಯಿಂದ ಸಂಚಾರಕ್ಕೆ ಸಂಚಕಾರ, ಶೀಘ್ರ ಮುಗಿಸಲು SDPI ಮನವಿ

Prasthutha|

ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ಮಧ್ಯದ ಕಲ್ಲಡ್ಕ ಎಂಬಲ್ಲಿ ಹೆದ್ದಾರಿಯ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಕಾಮಗಾರಿ ಮುಗಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಲ್ಲಡ್ಕ ಬ್ಲಾಕ್ ಸಮಿತಿ ಅಧ್ಯಕ್ಷರಾದ ಯಾಸಿರ್ ಕಲ್ಲಡ್ಕ ನೇತೃತ್ವದಲ್ಲಿ ಎಸ್ ಡಿ ಪಿ ಐ ಗೋಳ್ತಮಜಲು ಗ್ರಾಮ ಸಮಿತಿಯ ವತಿಯಿಂದ KNR ಅಧಿಕಾರಿಯವರಿಗೆ ಮತ್ತು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

- Advertisement -

ನಿಧಾನ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ತೀವ್ರ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಓವರ್ ಬ್ರಿಡ್ಜ್ ನ ಕಾರ್ಯವೈಖರಿಯೂ ಕೂಡಾ ಬಹಳ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಕಾರಣದಿಂದ ಸರ್ವಿಸ್ ರಸ್ತೆಯು ಅಸ್ತವ್ಯಸ್ತಗೊಂಡು ವಾಹನ ಸಂಚರಿಸಲು ಅಸಾಧ್ಯವುಂಟಾಗಿದೆ. ಈ ಸರ್ವಿಸ್ ರಸ್ತೆಯು ಮೂಲಕ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು, ವಾಹನ ಸವಾರರು, ಪಾದಚಾರಿಗಳು ನಿತ್ಯ ಓಡಾಡುತ್ತಿದ್ದು , ರಸ್ತೆಯ ಕಾಮಗಾರಿಯ ದುರವಸ್ಥೆಯಿಂದಾಗಿ ಅಪಾಯಕಾರಿ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ. ಎರಡು ವರ್ಷಗಳಿಂದ ಹೆದ್ದಾರಿ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು ,ಸಮರ್ಪಕವಾದ ಪರ್ಯಾಯ ಡಾಮರು ರಸ್ತೆ ಇಲ್ಲದಿರುವುದರಿಂದ ಜನರು ನಡೆದಾಡಲು ಕೂಡ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ಹತ್ತರಿಂದ ಹದಿನೈದು ವಾಹನ ಅಪಘಾತಗಳು ನಡೆಯುತ್ತಿದೆ. ಈ ದುರವಸ್ಥೆಯ ಮಧ್ಯೆಯೂ ಸಂಚಾರಿ ಪೊಲೀಸರ ಅಸಮರ್ಪಕ ತಪಾಸಣೆಯೂ ನಡೆಯುತ್ತಿದ್ದು, ವಾಹನ ಸವಾರರು ತೀವ್ರ ಕಿರುಕುಳ ಅನುಭವಿಸುವಂತಾಗಿದೆ. ಒಂದು ವರ್ಷದಿಂದ ಕಾಮಗಾರಿ ಗುತ್ತಿಗೆದಾರರಿಗೆ ಈ ವಿಷಯವಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದು, ಈ ಕೂಡಲೇ ಸೂಕ್ತ ಪರ್ಯಾಯ ಡಾಮರು ರಸ್ತೆ ಕಲ್ಪಿಸಬೇಕಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಆದಷ್ಟು ಶೀಘ್ರವಾಗಿ ಅಸ್ತವ್ಯಸ್ತಗೊಂಡಿರುವ ಸರ್ವಿಸ್ ರಸ್ತೆಗೆ ಡಾಮಾರು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಮತ್ತು ಆದಷ್ಟು ಬೇಗ ಫ್ಲೈ ಓವರ್ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದ್ದು, ತಪ್ಪಿದ್ದಲ್ಲಿ ಪಕ್ಷದ ವತಿಯಿಂದ ಸಾರ್ವಜನಿಕರನ್ನು ಸೇರಿಸಿ ಬೃಹತ್ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಲಾಯಿತು.

- Advertisement -

ನಿಯೋಗದಲ್ಲಿ SDPI ಗೊಳ್ತಮಜಲು ಗ್ರಾಮ ಸಮಿತಿ ಅಧ್ಯಕ್ಷ ಹಮೀದ್ ಅಲಿ, ಗ್ರಾಮ ಪಂಚಾಯತ್ ಸದಸ್ಯರ ಯೂಸುಫ್ ಹೈದರ್, ಇಕ್ಬಾಲ್ ಕೆ. ಸಿ. ರೋಡ್, ಗ್ರಾಮ ಸಮಿತಿ ಸದಸ್ಯರಾದ ಸಿದ್ದೀಕ್ ಪನಾಮ ಮತ್ತು ಜವಾಜ್ ಕಲ್ಲಡ್ಕ ಉಪಸ್ಥಿತರಿದ್ದರು.

Join Whatsapp