ಕಲ್ಲಡ್ಕ ಭಟ್ ಹೇಳಿಕೆ ಕೋಮು ಪ್ರಚೋದಿತ, ಕಾನೂನು ಕ್ರಮ ಕೈಗೊಳ್ಳಬೇಕು: ಕೆ.ಅಶ್ರಫ್

Prasthutha|

ಮಂಗಳೂರು: ಮೈಸೂರಿನಲ್ಲಿ ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಮ್ ಮಹಿಳೆಯರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಕೋಮು ಪ್ರಚೋದನಕಾರಿ ಆಗಿದೆ. ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮೇಯರ್ ಕೆ. ಅಶ್ರಫ್ ಹೇಳಿದ್ದಾರೆ.

- Advertisement -

ಪ್ರಭಾಕರ ಭಟ್ ಅಶ್ಲೀಲವಾಗಿ ಹೇಳಿಕೆ ನೀಡುವ ಮೂಲಕ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ , ಮತೀಯ ಉದ್ವಿಗ್ನತೆ ಸೃಷ್ಟಿಸುವ ಮತ್ತು ಮತೀಯ ಗಲಭೆಗಳನ್ನು ಹುಟ್ಟು ಹಾಕುವ ಯತ್ನ ಮಾಡಿರುತ್ತಾರೆ ಎಂದ ಅಶ್ರಫ್, ಪೊಲೀಸರು, ಸರಕಾರ ಮತ್ತು ಜಿಲ್ಲಾಡಳಿತ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಪ್ರಕರಣ ದಾಖಲು ಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಸರ್ಕಾರ ಮತ್ತು ಪೊಲೀಸರೇ ಹೊಣೆ. ಕಲ್ಲಡ್ಕ ಭಟ್ಟರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಲಾಗಿದೆ ಎಂದು ಅಶ್ರಫ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

ಪೊಲೀಸ್ ದೂರು ನೀಡಿದ ನಿಯೋಗದಲ್ಲಿ ಅಬ್ದುಲ್ ಜಲೀಲ್,ಅಶ್ರಫ್ ಬದ್ರಿಯಾ, ಸಾಲಿಹ್ ಬಜ್ಪೆ, ಹಿದಾಯತ್ ಮಾರಿಪಲ್ಲ,ಹಿದಾಯತ್ ಕೃಷ್ಣಾಪುರ,ಮೊಹಮ್ಮದ್ ಹನೀಫ್.ಯು, ವಿ.ಏಚ್. ಕರೀಮ್, ಸೋಶಿಯಲ್ ಫಾರೂಕ್ ಮತ್ತಿತರು ಉಪಸ್ಥಿತರಿದ್ದರು ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರೂ ಆದ ಕೆ. ಅಶ್ರಫ್ ಮಾಹಿತಿ ನೀಡಿದ್ದಾರೆ.

Join Whatsapp