ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

Prasthutha|

ಕಲಬುರಗಿ: ನಗರದ ಕೇಂದ್ರೀಯ ಬಸ್ ಎದುರಿನ ವಿದ್ಯಾನಗರದಲ್ಲಿ ರಾತ್ರಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

- Advertisement -

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಮೆರವಣಿಗೆ ವೇಳೆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಈ ಘಟನೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಜೇವರ್ಗಿ ರಸ್ತೆಯ ರಾಷ್ಟ್ರಪತಿ ಚೌಕ್‌ನಲ್ಲಿ ನಡೆದಿದೆ.

ಆಕಾಶ್ (26) ಹತ್ಯೆಗೀಡಾದ ಯುವಕ. ಕಲಬುರಗಿಯ ಅಶೋಕ್ ನಗರ ಬಡಾವಣೆ ನಿವಾಸಿ ಆಂಜನೇಯ ಎನ್ನುವವರ ಪುತ್ರ ಎಂದು ತಿಳಿದು ಬಂದಿದೆ.

- Advertisement -

ಆಕಾಶ್ ಸ್ನೇಹಿತ ನವೀನ್ ಎಂಬಾತನೇ ಕೊಲೆ ಮಾಡಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಕಾಶ ಮತ್ತು ನವೀನ್ ಈ ಹಿಂದೆಯೂ ಗಲಾಟೆ ಮಾಡಿಕೊಳ್ಳುತ್ತಾ ಮತ್ತೆ ಒಟ್ಟಿಗೆ ಓಡಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಸ್ಥಳದಲ್ಲಿ ಇದ್ದವರು ಇಬ್ಬರನ್ನೂ ಬಿಡಿಸಿ ಕಳುಹಿಸಿದ್ದರು. ರಾತ್ರಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಯ ವೇಳೆ ರಾಷ್ಟ್ರಪತಿ ಚೌಕ್‌ನಲ್ಲಿ ಆಕಾಶ ಡ್ಯಾನ್ಸ್‌ ಮಾಡುತ್ತಿದ್ದ ವೇಳೆ ಹಿಂದುಗಡೆಯಿಂದ ಬಂದ ನವೀನ್ ಆಕಾಶ್ ಬೆನ್ನಿಗೆ ಮಾರಕಾಸ್ತ್ರಗಳಿಂದ ಹಲವಾರು ಬಾರಿ ಇರಿದು ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳದಲ್ಲಿ ಇದ್ದವರು ತಕ್ಷಣವೇ ಮುಂದಾಗಿರಲಿಲ್ಲ ಎನ್ನಲಾಗಿದೆ. ಬಳಿಕ ಸಾರ್ವಜನಿಕರು ಆಸ್ಪತ್ರೆಗೆ ಕೊರೆದೊಯ್ದುರೂ ಆಕಾಶ್ ಬದುಕಿ ಉಳಿಯಲಿಲ್ಲ.

Join Whatsapp