ಕಡಬ ಆ್ಯಸಿಡ್ ದಾಳಿ: ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಪತ್ತೆ

Prasthutha|

►ಕಡಬ ಪೇಟೆಯ ಅಂಗಡಿಯಲ್ಲಿ ಆ್ಯಸಿಡ್ ಖರೀದಿ

- Advertisement -

ಕಡಬ: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬಿನ್ ಕೃತ್ಯ ಎಸಗಲೆಂದು ಭಾನುವಾರ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದಾನೆ. ಬಳಿಕ ಕಡಬಕ್ಕೆ ಬಂದಿದ್ದ ಆತನ ಚಲನವಲನ ಅಲ್ಲಿನ ಬೇಕರಿಯೊಂದರ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.


ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕು ನಿವಾಸಿ ಅಬಿನ್ ಭಾನುವಾರ ಮಧ್ಯಾಹ್ನ ರೈಲಿನ ಮೂಲಕ ರಾತ್ರಿ ಮಂಗಳೂರು ರೈಲು ನಿಲ್ದಾಣ ತಲುಪಿದ್ದ. ಅಲ್ಲಿಯೇ ಬೆಳಿಗ್ಗೆಯವರೆಗೆ ಕಾಲ ಕಳೆದು ಬಳಿಕ ಮಂಗಳೂರಿನಿಂದ ಬಸ್ ನಲ್ಲಿ ಕಡಬಕ್ಕೆ ಆಗಮಿಸಿದ್ದ. ಬೆಳಗ್ಗೆ 7.30ರ ಸುಮಾರಿಗೆ ಕಡಬ ಪೇಟೆಯ ಅಂಗಡಿಯೊಂದರಲ್ಲಿ ರಬ್ಬರ್ ಬೆಳೆಗಾರರು ಬಳಸುವ ಆ್ಯಸಿಡ್ ಖರೀದಿಸಿದ್ದ ಎನ್ನಲಾಗಿದೆ.
ಬಸ್ ನಿಲ್ದಾಣದ ಬಳಿ ಇದ್ದ ಬೇಕರಿಯಲ್ಲಿ ತನ್ನಲ್ಲಿದ್ದ ಎರಡು ಮೊಬೈಲ್ ಫೋನ್ ಗಳನ್ನು ಚಾರ್ಜ್ ಗಿಟ್ಟಿದ್ದ ಎನ್ನಲಾಗಿದೆ. ಈ ವೇಳೆ ಆರೋಪಿ ಕಪ್ಪು ಫ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -


ಇನ್ನು ಬೇಕರಿಯಲ್ಲಿ ಫೋನ್ ಗಳನ್ನು ಚಾರ್ಜ್ ಗೆ ಇಟ್ಟ ಆರೋಪಿ ಅಬಿನ್ ಅಲ್ಲೇ ಒಂದು ಬ್ಯಾಗ್ ಬಿಟ್ಟಿದ್ದಾನೆ. ಆ ಬಳಿಕ ಬ್ಯಾಗಿನಿಂದ ಯಾವುದೋ ವಸ್ತುವನ್ನು ಪ್ಯಾಂಟ್ ಜೇಬಿಗೆ ಹಾಕಿ ಅಲ್ಲಿಂದ ಹೊರನಡೆಯುತ್ತಾನೆ. ಇದು ಆ್ಯಸಿಡ್ ಬಾಟಲ್ ಎನ್ನಲಾಗಿದೆ. ಆತ ತಹಶಿಲ್ದಾರ್ ಕಚೇರಿ ಸಮೀಪದಲ್ಲಿರುವ ಕಟ್ಟಡವೊಂದರಲ್ಲಿ ಕಾಲೇಜು ಸಮವಸ್ತ್ರ ಧರಿಸಿರಬೇಕು ಎಂದು ಅನುಮಾನಿಸಲಾಗಿದೆ. ಈ ಬಗ್ಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಎಸ್’ಪಿ ಹೇಳಿದ್ದೇನು?
ಕಡಬ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ದಕ್ಷಿಣ ಕನ್ನಡ ಎಸ್.ಪಿ ರಿಷ್ಯಂತ್ ಅವರು, ಆರೋಪಿ ಅಬಿನ್ ಮೂಲತಃ ಕೇರಳದ ಮಲಪ್ಪುರಂ’ನವನು, ಹುಡುಗಿಯ ತಾಯಿಯ ಮನೆಯ ಪಕ್ಜದಲ್ಲೇ ಆರೋಪಿಯ ಮನೆ ಇದೆ, ಅಲ್ಲಿ ಇಬ್ಬರಿಗೆ ಪರಿಚಯ ಆಗಿದೆ ಅನಿಸುತ್ತೆ, ಮೇಲ್ನೋಟದಲ್ಲಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಆ್ಯಸಿಡ್ ದಾಳಿ ಮಾಡಿರಬಹುದು ಅನಿಸುತ್ತೆ, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದರು.

Join Whatsapp