ಬಿಜೆಪಿಯ ‘ಆಪರೇಶನ್’ ಭೀತಿಯಲ್ಲಿ ಜಾರ್ಖಂಡ್ ಸರಕಾರ

Prasthutha|

ರಾಜ್ಯಬಿಟ್ಟು ತೆರಳದಂತೆ ತನ್ನ ಶಾಸಕರಿಗೆ ಎಚ್ಚರಿಕೆ ನೀಡಿದ ಕಾಂಗ್ರೆಸ್

- Advertisement -

ರಾಂಚಿ: ಜಾರ್ಖಂಡ್ ಸರಕಾರವನ್ನು ಬಿಜೆಪಿ ಉರುಳಿಸಬಹುದು ಎಂಬ ಭೀತಿಯಲ್ಲಿ ಇದೀಗ ಅಲ್ಲಿನ ಆಡಳಿತ ಪಕ್ಷಗಳ ಪೈಕಿ ಅತಿ ಹೆಚ್ಚು ಸದಸ್ಯರಿರುವ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ಜಾಗೃತಗೊಂಡಿದ್ದು, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೇನ್ ಮನೆಯಲ್ಲಿ ನಡೆದ ಸಭೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಎಲ್ಲ ಎಂಎಲ್‍ಎಗಳಿಗೆ ಸೂಚಿಸಲಾಗಿದೆ.


ಈ ನಡುವೆ ಜಾರ್ಖಂಡ್‍ನ ತನ್ನ ಎಲ್ಲಾ ವಿಧಾನ ಸಭಾ ಸದಸ್ಯರನ್ನು ಕಾಂಗ್ರೆಸ್ ರಾಂಚಿಗೆ ಕರೆಸಿಕೊಂಡಿದ್ದು, ಆಗಸ್ಟ್ 24ರ ತನಕ ರಾಜ್ಯ ಬಿಟ್ಟುಹೋಗದಂತೆ ಸೂಚಿಸಿದೆ. ಅಲ್ಲದೇ ಯಾವುದೇ ಸಂದರ್ಭದಲ್ಲೂ ರಾಂಚಿಗೆ ಮತ್ತೆ ಬರಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.

- Advertisement -


ಕೆಲ ತಿಂಗಳುಗಳ ಹಿಂದೆ ಜಾರ್ಖಂಡ್‍ನ ಕಾಂಗ್ರೆಸ್ ಎಂಎಲ್‍ಎಗಳನ್ನು ಪಶ್ಚಿಮ ಬಂಗಾಳದಲ್ಲಿ ಹಣದೊಂದಿಗೆ ಬಂಧಿಸಿದಾಗಲೇ ಸರಕಾರ ಉರುಳಿಸುವ ಭೀತಿಯ ಅರಿವಾಗಿತ್ತು. ಪ್ರತೀ ಎಂಎಲ್‍ಎ ಗೂ ತಲಾ 10 ಕೋಟಿ ರೂ ನೀಡಿ ಸರಕಾರವನ್ನು ಉರುಳಿಸುವ ಪ್ಲಾನ್ ನಡೆದಿದ್ದು, ಇದರ ಚುಕ್ಕಾಣಿಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ವಹಿಸಿದ್ದರು ಎಂದು ಹೇಳಲಾಗುತ್ತದೆ.


81 ಸದಸ್ಯ ಬಲದ ಜಾರ್ಖಂಡ್ ವಿಧಾನ ಸಭೆಯಲ್ಲಿ ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ಮೈತ್ರಿಗೆ ಬಹುಮತದೊಂದಿಗೆ ಸರಕಾರ ರಚಿಸಿದೆ. ಎನ್‍ಡಿಎಗೆ 30 ಸದಸ್ಯ ಬಲವಿದ್ದು, ಇನ್ನು 11 ಮಂದಿಯ ಬೆಂಬಲ ದೊರೆತರ ಪ್ರಸ್ತುತ ಸರಕಾರವನ್ನು ಉರುಳಿಸಬಹುದಾಗಿದ್ದು, ರಾಷ್ಟ್ರಪತಿ ಚುನಾವಣೆ ವೇಳೆ ದ್ರೌಪದಿ ಮರ್ಮುವಿಗೆ ಮತ ಹಾಕಿದ 9 ಎಂಎಲ್‍ಎಗಳ ಜೊತೆ ಕೆಲ ಪಕ್ಷೇತರ ಸದಸ್ಯರನ್ನು ಸೇರಿಸಿಕೊಂಡು ಸರಾಕಾರ ರಚಿಸಬಹುದೆಂಬ ಲೆಕ್ಕಾಚರದಲ್ಲಿದೆ ಬಿಜೆಪಿ.
ಆರ್ಥಿಕ ಒಪ್ಪಂದವನ್ನು ತನ್ನ ಸ್ವಯಂ ಹೆಸರಿನಲ್ಲಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಹೇಮಂತ್ ಸೂರೇನ್‍ರನ್ನು ಅಯೋಗ್ಯ ಮಾಡಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಈ ದೂರಿನ ವಿಚಾರಣೆ ಪೂರ್ತಿಗೊಳಿಸಿರುವ ಆಯೋಗ ಯಾವುದೇ ಸಂದರ್ಭದಲ್ಲೂ ತನ್ನ ನಿಲುವು ಪ್ರಕಟಿಸಬಹುದು. ಪ್ರಕರಣ ಸಂಬಂಧ, ಇಡಿ ಮತ್ತು ಸಿಬಿಐ ವಿಚಾರಣೆ ಮುಂದುವರಿಸಿದೆ. ಇದು ಕೂಡಾ ಸರಕಾರವನ್ನು ಅಸ್ಥಿರಗೊಳಿಸಲು ಸಹಕರಿಸಬಹುದು ಎಂಬ ಲೆಕ್ಕಾಚಾರವೂ ಬಿಜೆಪಿಗೆ ಇದೆ.

Join Whatsapp