ಕೇಂದ್ರ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್‌ನಂತೆ ಬಳಸುತ್ತಿದೆ: ಜೆಡಿಎಸ್ ಆಕ್ರೋಶ

Prasthutha|

ಬೆಂಗಳೂರು: ಕೇಂದ್ರ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್‌ನಂತೆ ಬಳಸುತ್ತಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ನಮ್ಮ ಕರುನಾಡು ಬರಗಾಲ, ಪ್ರವಾಹದಿಂದ ತತ್ತರಿಸಿದಾಗೆಲ್ಲ ‘ಮಾಯವಾಗುವ’ ಪ್ರಧಾನಿಯವರು, ಚುನಾವಣೆ ಹತ್ತಿರ ಬಂದ ತಕ್ಷಣ ಪ್ರತ್ಯಕ್ಷರಾಗುತ್ತಾರೆ. ಇಡೀ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ ಪ್ರಮುಖ ರಾಜ್ಯಗಳಲ್ಲೊಂದಾದ ಕರ್ನಾಟಕದ ಸಮಸ್ಯೆಗಳಿಗೆ ಕುರುಡಾಗಿ ವರ್ತಿಸುವವರು, ಈಗ ಮತ ಕೇಳಲು ಯಾವ ಮುಖ ಹೊತ್ತು ಬರುತ್ತಾರೆ? ಎಂದು ಪ್ರಶ್ನಿಸಿದೆ.

ಆದಾಯ ಮತ್ತು ಕಾರ್ಪೋರೆಟ್ ತೆರಿಗೆ, ಜಿಎಸ್‌’ಟಿಗಳನ್ನು ಕೇಂದ್ರದ ಖಜಾನೆಗೆ ಭರ್ತಿಯಾಗಿ ತುಂಬಿಸಿಕೊಳ್ಳಲು ಮಾತ್ರ ಕರ್ನಾಟಕ ಬೇಕು ಎನ್ನುವ ಹಾಗಾಗಿದೆ. ನಮ್ಮಿಂದ ಸಂಗ್ರಹವಾದ ತೆರಿಗೆಯಲ್ಲಿ ಕನಿಷ್ಠ ಪಾಲು ಸಿಗುವುದೇ ಕನಸಾಗಿದೆ. ಇನ್ನೂ ಸಮಪಾಲು ದೂರದ ವಿಷಯ. ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಕರ್ನಾಟಕವು ಸೇರಿದಂತೆ ಎಲ್ಲ ರಾಜ್ಯಗಳ‌ ಪ್ರಾದೇಶಿಕತೆಯ ಕತ್ತು‌ಹಿಸುಕುವ ಕುತಂತ್ರದ ರಾಜಕೀಯ ಮುಂದುವರಿದಿದೆ. ರಾಜ್ಯಗಳ ಅಧಿಕಾರವನ್ನೆಲ್ಲ ಮೊಟಕುಗೊಳಿಸಿದ್ದಾಯ್ತು. ಈಗ, ಚುನಾವಣೆ ಹತ್ತಿರ ಬಂದಿದೆ ಎಂಬ ಕಾರಣಕ್ಕೆ ಕೆಲವು ಯೋಜನೆಗಳ‌ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿಯವರೆ, ನಿಮ್ಮ ಮುಖವಾಡ ಕಳಚಿ ಬಹಳ ದಿನಗಳಾಗಿವೆ ಎಂದು ಹೇಳಿದೆ.

ಇನ್ನೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಮತ್ತು 25 ಸಂಸದರು‌ ತಮ್ಮ ಬೆನ್ನೆಲುಬನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ರಾಜ್ಯದ ಜನತೆ ಅವರಿಗೆ ಮುಖ್ಯವೇ ಅಲ್ಲ. ಏನಿದ್ದರೂ ಮೋದಿಯವರ ಭಜನೆ ಮತ್ತು ಮುಖಸ್ತುತಿ ರಾಜಕಾರಣವಷ್ಟೆ! ಅವರೆಲ್ಲರೂ ಮೋದಿಯವರ ಹೆಸರಿನಲ್ಲಿ ಅಧಿಕಾರ ಪಡೆಯುವ ಹುಚ್ಚು ಭ್ರಮೆಯಲ್ಲಿದ್ದಾರೆ. ಮೋದಿಯವರು ಬಂದ ದಿನ ರೆಕ್ಕೆ ಬಲಿತ ಹಕ್ಕಿಯಂತೆ ಆಡುವುದು ಮಾತ್ರ ಇಲ್ಲಿನ ಬಿಜೆಪಿ ಸರ್ಕಾರಕ್ಕೆ ಗೊತ್ತಿರುವುದು! ಇಂತಹ ಬೃಹತ್ ನಾಟಕ ಮಂಡಳಿಯ ಯಾವ ಪ್ರದರ್ಶನವೂ ಇನ್ನು ಕರ್ನಾಟಕದಲ್ಲಿ ನಡೆಯುವುದಿಲ್ಲ. ನಿಮ್ಮಂತಹ ಮುಖೇಡಿ ರಾಜಕಾರಣಿಗಳು ಹಾಗೂ ನಿಮ್ಮನ್ನು ತೊಗಲು ಗೊಂಬೆಗಳನ್ನಾಗಿ ಮಾಡಿರುವ ದೆಹಲಿ ದೊರೆಗಳನ್ನು ರಾಜ್ಯ ತಿರಸ್ಕರಿಸಲಿದೆ ಎಂದು ಜನತಾದಳ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರವಂತೂ ನಪುಂಸಕವಾಗಿರುವುದು ದಿಟ. ಬರಡು ಭೂಮಿಯಂತೆ ಯಾವ ಪ್ರಯೋಜನವು ಇಲ್ಲದ ರಾಜ್ಯ ಸರ್ಕಾರವಿದು. ಸಾರ್ವಜನಿಕರ ಹಣ ಬಾಚುವ, ದೋಚುವುದಷ್ಟೆ ಇವರ ಕಾಯಕ. ಒಟ್ಟಿನಲ್ಲಿ, ಕೇಂದ್ರದ ತಾಳಕ್ಕೆ ಕುಣಿಯುತ್ತಾ, ರಾಜ್ಯದ ನೆಮ್ಮದಿ ಕಸಿಯುವ ಕೀಚಕ ಸರ್ಕಾರವನ್ನು ಜನರು ಕಿತ್ತೊಗೆಯುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಅದು ಹೇಳಿದೆ.

Join Whatsapp