ಐಟಿ ಸಿಟಿ ಬೆಂಗಳೂರನ್ನು ಭಾರತದ ಬೈಸಿಕಲ್ ಸಿಟಿಯನ್ನಾಗಿಸಲು ಪ್ರಯತ್ನ: ಸಚಿವ ಡಾ.ನಾರಾಯಣಗೌಡ

Prasthutha|

ಬೆಂಗಳೂರು: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಎನ್ ಎಸ್ಎಸ್ ಸಹಯೋಗದೊಂದಿಗೆ ವಿಶ್ವ ಸೈಕಲ್ ದಿನಾಚರಣೆ ಪ್ರಯುಕ್ತ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸೈಕಲ್ ರಾಲಿ ಆಯೋಜಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಡಾ.ನಾರಾಯಣಗೌಡ ಅವರು, ವಿಧಾನಸೌಧದ ಮುಂಭಾಗದಲ್ಲಿ ನಾಳೆ ಸಚಿವರಾದ ಡಾ.ಅಶ್ವಥ್ ನಾರಾಯಣ್ ಅವರು, ಮುರುಗೇಶ್ ನಿರಾಣಿಯವರು ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

- Advertisement -


ಸೈಕಲ್ ಬಳಕೆಯಿಂದ ಆರೋಗ್ಯದಲ್ಲಾಗುವ ಉತ್ತಮ ಬದಲಾವಣೆಗಳ ಕುರಿತು ಜನರಿಗೆ ತಿಳಿಸುವುದಕ್ಕಾಗಿ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಸೈಕಲ್ ಬಳಸುವಂತೆ ಪ್ರೇರೇಪಿಸುವ ಸಲುವಾಗಿ ವಿಶ್ವ ಬೈಸಿಕಲ್ ದಿನಾಚರಣೆಯನ್ನು ಆಯೋಜಿಸಲಾಗುತ್ತಿದೆ. ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಎನ್ ಎಸ್ಎಸ್ ಸಹಯೋಗದೊಂದಿಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಸೈಕಲ್ ರಾಲಿ ಕೂಡ ಆಯೋಜಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

ಸೈಕಲ್ ಬಳಕೆ ಹೆಚ್ಚಿಸಿದ್ದಷ್ಟು ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಹಾಗೂ ಮನುಷ್ಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ ಟ್ರಾಫಿಕ್ ಸಮಸ್ಯೆಯನ್ನು ಕೂಡ ಕಡಿಮೆಗೊಳಿಸಬಹುದು. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್ ಬಳಸಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ಕರೆ ನೀಡಿದರು.

- Advertisement -


ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ಜಾಥಾ ನಡೆಯಲಿದೆ. ನಮ್ಮ ಕರ್ನಾಟಕದ 7 ಐತಿಹಾಸಿಕ ಸ್ಥಳಗಳಾದ ಹಂಪಿ, ಬೇಲೂರು, ರಾಣಿ ಅಬ್ಬಕ್ಕ ಕೋಟೆ, ಗೋಲ್ ಗುಂಬಜ್, ಮೈಸೂರು ಅರಮನೆ, ಮಲ್ಪೆ ಮತ್ತು ಮಡಿಕೇರಿ ಕೋಟೆಗಳಲ್ಲಿ ಬೈಸಿಕಲ್ ಜಾಥಾವನ್ನು ಆಯೋಜಿಸಲಾಗಿದೆ. ನಮ್ಮ-ನಿಮ್ಮ ಸೈಕಲ್ ಫೌಂಡೇಷನ್, ಇವರು ಸ್ಟಾರ್ಟ್ ಅಪ್ ಸೆಲ್, ಬೆಂಗಳೂರು ಇವರ ಸಹಯೋಗದಲ್ಲಿ “ಲೀಡ್ ಬೆಂಗಳೂರು ರೈಡ್-2022″ ಆಯೋಜಿಸುತ್ತಿದ್ದು ಇದರಲ್ಲಿ ಜರ್ಮನಿಯ ವಿವಿಧ ಕಂಪನಿಗಳ CEOಗಳು ಭಾಗವಹಿಸುತ್ತಿದ್ದಾರೆ. ಇದರ ಜೊತೆಗೆ ಸುಮಾರು 200 ಸೈಕ್ಲಿಸ್ಟ್ ಗಳು ಪಾಲ್ಗೊಳ್ಳಲಿದ್ದಾರೆ. ಜರ್ಮನಿ ರಾಷ್ಟ್ರದ ವಿವಿಧ ಕಂಪನಿಗಳ ಕಾರ್ಯನಿರ್ವಾಹಕರ ತಂಡವು ಈ ಪ್ರಮುಖ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು, ಇವರು ಭಾರತ ಮತ್ತು ಜರ್ಮನಿ ದೇಶಗಳ ನಡುವಣ ಸೈಕಲ್ ಸಂಸ್ಕೃತಿಗೆ ಸಾಕ್ಷಿಯಾಗಲಿದ್ದಾರೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

Join Whatsapp