ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ: ಮಾಜಿ ಸಚಿವ ಕಿಮ್ಮನೆ ರತ್ನಾಕರ ಸ್ಪಷ್ಟನೆ

Prasthutha|

ಬೆಂಗಳೂರು: ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಮಾಧ್ಯಮಗಳ ವರದಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಸ್ಪಷ್ಟನೆ ನೀಡಿದ್ದಾರೆ. ಈ ಅಕ್ರಮದ ವಿಚಾರವಾಗಿ ಸಂಪೂರ್ಣವಾಗಿ ದಾಖಲೆ ಒದಗಿಸುವಂತೆ ನಾನು ಇಲಾಖೆಗೆ ಪತ್ರ ಬರೆದಿದ್ದು, ಅದಕ್ಕೆ ಪಾವತಿಸಬೇಕಾದ ಶುಲ್ಕ ಪಾವತಿಸಿದ್ದೇನೆ. ಯಾರೇ ದಾಖಲೆ ತಿರುಚಿ, ನಕಲಿ ದಾಖಲೆ ಮೂಲಕ ನೇಮಕಾತಿ ಆಗಿದ್ದರೆ, ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇಲಾಖೆಯಲ್ಲಿನ ಅಧಿಕಾರಿಗಳ ಸಹಾಯ ಇಲ್ಲದೆ ಈ ರೀತಿ ಅಕ್ರಮ ಮಾಡಲು ಸಾಧ್ಯವಿಲ್ಲ. ನಕಲಿ ದಾಖಲೆ ಸಲ್ಲಿಸಿರುವವರು ಹಾಗೂ ಅಭ್ಯರ್ಥಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಪೂರೈಸಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಈ ನೇಮಕಾತಿ ವಿಚಾರ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯುವುದಕ್ಕಾಗಿ ಮಾತ್ರ ನಮ್ಮ ವ್ಯಾಪ್ತಿಗೆ ಬರುತ್ತದೆಯೇ ಹೊರತು ಅದನ್ನು ಹೊರತುಪಡಿಸಿ ನೇಮಕಾತಿ ಪ್ರಕ್ರಿಯೆ ನಮ್ಮ ಹಂತಕ್ಕೆ ಬರುವುದಿಲ್ಲ ಎಂದು ಮಾಜಿ ಸಚಿವರು ಸ್ಪಷ್ಟಪಡಿಸಿದ್ದಾರೆ.

- Advertisement -

ಈ ನೇಮಕಾತಿ ಎರಡು ಬಾರಿ ನಡೆದಿದ್ದು, ಏಪ್ರಿಲ್ 02, 2012ರಲ್ಲಿ ಮೊದಲ ನೇಮಕಾತಿ ಪ್ರಕ್ರಿಯೆ ಆರಂಭವಾಗಿ, ಡಿ.26, 2012ರಲ್ಲಿ ಮುಕ್ತಾಯವಾಗಿದೆ. ಆಗ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿಕ್ಷಣ ಸಚಿವರಾಗಿದ್ದರು. ನನ್ನ ಅವಧಿಯಲ್ಲಿ 2015ರಲ್ಲಿ ನೇಮಕಾತಿ ಆಗಿದ್ದು, ಇದರ ಪ್ರಕ್ರಿಯೆ ಜೂನ್ 15ರಂದು ನೇಮಕಾತಿ ಪ್ರಕ್ರಿಯೆ ಅಂತ್ಯವಾಗಿತ್ತು. ಈ ನೇಮಕಾತಿಯಲ್ಲಿ ಸಚಿವರು, ಶಾಸಕರು ಭಾಗಿಯಾಗಿರುವ ಬಗ್ಗೆ ವರದಿ ಬಂದಿಲ್ಲ. ಆದರೆ ಈ ರೀತಿ ನೇಮಕಾತಿಯಲ್ಲಿ ಹಗರಣ ಆಗಿದೆ ಎಂದು ಮಾಧ್ಯಮದಲ್ಲಿ ಬಂದಾಗ ಸಾರ್ವಜನಿಕರ ಮುಂದೆ ನಮ್ಮ ಸಚಿವಾಲಯದ ಅಧಿಕಾರ ವ್ಯಾಪ್ತಿಯನ್ನು ತಿಳಿಸುವುದು ಉತ್ತಮ. ಆಗ ಜನರಿಗೆ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ಕಿಮ್ಮನೆ ಹೇಳಿದರು.

ಈ ನೇಮಕಾತಿ ಹಗರಣ ಇಲಾಖೆಯ ಕಾರ್ಯದರ್ಶಿಗಳಿಗಿಂತ ಕೆಳ ಹಂತದಲ್ಲಿ ನಡೆದಿದೆ. ಶಿಕ್ಷಣ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ ಇವೆ, ಅವುಗಳ ಮಂಜೂರಾತಿಗಾಗಿ ಇಲಾಖೆ ಆಯುಕ್ತರು ಹಾಗೂ ಕಾರ್ಯದರ್ಶಿಗಳ ಮೂಲಕ ಸಚಿವಾಲಯಕ್ಕೆ ಪ್ರಸ್ತಾವನೆ ಬರುತ್ತದೆ. ನಂತರ ಅವುಗಳನ್ನು ಆರ್ಥಿಕ ಇಲಾಖೆಗೆ ಕಳುಹಿಸಿದ ನಂತರ ಮುಖ್ಯಮಂತ್ರಿಗಳು, ಸಚಿವರ ಜತೆ ಚರ್ಚಿಸಿ ಎಷ್ಟು ಜನರ ನೇಮಕಾತಿಗೆ ಅವಕಾಶ ಮಾಡಿಕೊಡಬೇಕು ಎಂದು ನಿರ್ಧರಿಸಲಾಗುತ್ತದೆ. ನಂತರ ಈ ವಿಚಾರ ಜಂಟಿ ಆಯುಕ್ತರ ಬಳಿ ಹೋಗುತ್ತದೆ. ನಂತರದ ನೇಮಕಾತಿ ಪ್ರಕ್ರಿಯೆ ಸಚಿವರು ಹಾಗೂ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರುವುದಿಲ್ಲ. ಜಂಟಿ ಆಯುಕ್ತರು ಹಾಗೂ ವಲಯ ಮಟ್ಟದ ಅಧಿಕಾರಿಗಳ ವ್ಯಾಪ್ತಿಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ ಎಂದು ಮಾಜಿ ಸಚಿವರು ಹೇಳಿದ್ದಾರೆ.

- Advertisement -

100 ಹುದ್ದೆ ಖಾಲಿ ಇದ್ದರೆ ಆನ್ ಲೈನ್ ನಲ್ಲಿ ಆಹ್ವಾನ ನೀಡಲಾಗುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಶೀಲಿಸಿ 1:2 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನ ನೀಡಲಾಗುತ್ತದೆ. ಸಂದರ್ಶನ ಅಂತಿಮವಾದಾಗ 100 ಹುದ್ದೆ ಇದ್ದರೆ 110 ಅಭ್ಯರ್ಥಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಆಯ್ಕೆಯಾದ ಮೊದಲ 100 ಅಭ್ಯರ್ಥಿಗಳಲ್ಲಿ ಯಾರಾದರೂ ಮೃತಪಟ್ಟರೆ, ಹುದ್ದೆಗೆ ಬಾರದೇ ಇದ್ದರೆ, ಅಥವಾ ಬೇರೆ ಹುದ್ದೆಗೆ ಹೋದರೆ ಈ ಹೆಚ್ಚುವರಿ 10 ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಅವರನ್ನು ಜೈಲಿಗೆ ಹಾಕಬೇಕು. ನಮ್ಮ ಅವಧಿಯಲ್ಲಿ ವರ್ಗಾವಣೆಗೆ ನಕಲಿ ಆರೋಗ್ಯ ಪ್ರಮಾಣಪತ್ರ ಸಲ್ಲಿಸಿದ್ದರು. ಆಗ ನಾನು ಅವರನ್ನು ಅಮಾನತುಗೊಳಿಸಲು ಮುಂದಾದಾಗ ಅವರು ಕುಟುಂಬ ಸಮೇತರಾಗಿ ನನ್ನ ಮನೆ ಮುಂದೆ ಪ್ರತಿಭಟನೆ ಮಾಡಿದ್ದರು. ಆದರೆ ಇಲ್ಲಿ ಅರ್ಹತೆ ಇಲ್ಲದೆ ನೇಮಕಾತಿ ಪಡೆಯುವುದಾಗಿದ್ದು, ಇದು ಮಹಾಪರಾಧ. ನೇಮಕಾತಿ ಅಧಿಕಾರಿಗಳ ಸಹಕಾರ ಇಲ್ಲದೆ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಅವರಿಗೂ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ಸರ್ಕಾರ ಅವಧಿಯಲ್ಲಾಗಲಿ, ನಮ್ಮ ಸರ್ಕಾರದ ಅವಧಿಯಲ್ಲಾಗಲಿ ಈ ಅಕ್ರಮ ಮುಖ್ಯಮಂತ್ರಿಗಳಾಗಲಿ ಅಥವಾ ಆಗಿನ ಕಾಲದ ಸಚಿವರ ಮಟ್ಟದಲ್ಲಿ ಈ ಅಕ್ರಮ ನಡೆದಿಲ್ಲ ಎಂಬ ಸ್ಪಷ್ಟನೆ ನೀಡಲು ಬಯಸುತ್ತೇನೆ. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದಿರುವ ಅಕ್ರಮ. ಒಂದು ವೇಳೆ ಇದರಲ್ಲಿ ನಮ್ಮ ಹಸ್ತಕ್ಷೇಪ ಇದ್ದರೆ ಅದರ ಬಗ್ಗೆ ಆರೋಪ ಮಾಡಿ ಸಾಕ್ಷಿಗಳನ್ನು ನೀಡಲಿ. ನಮ್ಮ ವಿರುದ್ಧ ನೇರ ಆರೋಪ ಇದ್ದರೆ ನಾನು ಅದಕ್ಕೆ ಪ್ರತಿಕ್ರಿಯೆ ನೀಡುತ್ತೇನೆ. ಆದರೆ ಲೋಕಾರೂಢಿಯಾಗಿ ಮಾಡುವ ಆರೋಪಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರಾ ಎಂಬ ಪ್ರಶ್ನೆಗೆ, ‘ಬಿಜೆಪಿಯವರು ತಾವು ವಿರೋಧ ಪಕ್ಷದಲ್ಲಿದ್ದೇವೆ ಎಂದು ಗೊಂದಲದಲ್ಲಿದ್ದಾರೆ. ಹೀಗಾಗಿ ಅವರು ಪ್ರತಿಯೊಂದಕ್ಕೂ ಸಿದ್ದರಾಮಯ್ಯ ಅವರು ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಇವರು ತಮ್ಮ ಆಡಳಿತದಲ್ಲಿನ ಅಕ್ರಮದ ಬಗ್ಗೆ ಸ್ಪಷ್ಟನೆ ನೀಡಬೇಕೆ ಹೊರತು, ಹಳೆಯ ವಿಚಾರವನ್ನು ಕೆದಕುವುದಲ್ಲ. ನಮ್ಮ ಆಡಳಿತ ಇಷ್ಟವಾಗಿಲ್ಲ ಎಂದು ಜನ ನಮ್ಮನ್ನು ಸೋಲಿಸಿದ್ದಾರೆ. ಹೀಗಾಗಿ ಇವರು ತಮ್ಮ ಕಾಲದಲ್ಲಿನ ಲೋಪಗಳಿಗೆ ಹಿಂದಿನ ಕಾಲದಲ್ಲೂ ಲೋಪ ಆಗಿತ್ತು ಎಂದು ಹೇಳುವುದು ಸಮಂಜಸವೇ? ನಮ್ಮ ಸರ್ಕಾರದ ಅವಧಿಯಲ್ಲಿ ಅಕ್ಕಿ ಜತೆಗೆ, ಬೇಳೆ, ಇತರೆ ಕಾಳು, ಅಡುಗೆ ಎಣ್ಣೆ ನೀಡುತ್ತಿದ್ದರು. ಆದರೆ ಈಗ ಅವುಗಳನ್ನು ಕಡಿತಗೊಳಿಸಿದ್ದಾರೆ. ವಸತಿ ನಿವೇಶನದಲ್ಲಿನ ವಿಫಲ, ಬೆಲೆ ಏರಿಕೆ, ರೈತರ ಸಮಸ್ಯೆ ವಿಚಾರವಾಗಿ ಸರ್ಕಾರ ಉತ್ತರ ನೀಡಬೇಕು. ಇಂದು ಜನ ಕೇಳುತ್ತಿರುವುದು ಉದ್ಯೋಗ. ಅದನ್ನು ಕೇಳಿದ ತಕ್ಷಣ ಇವರು ಜಾತಿ ಧರ್ಮದ ಬಗ್ಗೆ ಮಾತನಾಡುತ್ತಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವ ಕಾರ್ಯಕ್ರಮ ನೀಡಿದೆ ಎಂದು ಹೇಳಬೇಕು. ಸಿದ್ದರಾಮಯ್ಯ ಅವರ ಕಾಲದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಯಾವುದೇ ಭದ್ರತೆ ಇಲ್ಲದೆ ಎಸ್ಸಿ ಎಸ್ಟಿ ಸಮುದಾಯದವನು 50 ಲಕ್ಷದವರೆಗಿನ ಟೆಂಡರ್ ಕರೆಯಬಹುದಿತ್ತು. ಇಂತಹ ಯಾವುದಾದರೂ ಕಾರ್ಯಕ್ರಮ ಇವರು ಮಾಡಿದ್ದರೆ ಹೇಳಲಿ. ಇವರ ಸಿದ್ಧಾಂತದ ಪ್ರಕಾರ ಹರಿಜನರು ಹಿಂದುಗಳಲ್ಲ ಎಂದು ಹೇಳುತ್ತದೆ’ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಅವಧಿಯಲ್ಲಿ ಈ ಅಕ್ರಮ ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ ಎಂಬ ಪ್ರಶ್ನೆಗೆ, ‘ಈ ಅಕ್ರಮವನ್ನು ಇವರು ಕಂಡುಹಿಡಿದಿಲ್ಲ. ಅನ್ಯಾಯಕ್ಕೆ ಒಳಗಾದವರು, ಮಾಹಿತಿ ಕಲೆಹಾಕಿ ದೂರು ನೀಡಿ ಅಕ್ರಮ ಈಗ ಬೆಳಕಿಗೆ ಬಂದಿದ್ದು, ನಮ್ಮ ಅವಧಿಯಲ್ಲಿ ಇದು ಬೆಳಕಿಗೆ ಬಂದಿರಲಿಲ್ಲ. ಪಿಎಸ್ ಐ ನೇಮಕಾತಿ ಅಕ್ರಮಕ್ಕೂ ಈ ನೇಮಕಾತಿ ಅಖ್ರಮಕ್ಕೂ ಬಹಳ ವ್ಯತ್ಯಾಸವಿದ್ದು, ಒಂದಕ್ಕೊಂದು ಹೋಲಿಕೆ ಮಾಡಬಾರದು. ಬಿಜೆಪಿ ಶಾಸಕರೇ ಈ ನೇಮಕಾತಿಯಲ್ಲಿ 15 ಲಕ್ಷ ಹಣ ಪಡೆದು ಅದನ್ನು ಸರ್ಕಾರಕ್ಕೆ ನೀಡಿರುವುದಾಗಿ ತಿಳಿಸಿದ್ದಾರೆ. ಈ ಸರ್ಕಾರ ಎಂದರೆ ಯಾರು? ಹೀಗಾಗಿ ಪಿಎಸ್ಐ ಅಕ್ರಮ ನ್ಯಾಯಾಂಗ ತನಿಖೆ ಆಗಬೇಕು. ಆಗ ನ್ಯಾಯ ಸಿಗುತ್ತದೆ. ಈ ನೇಮಕಾತಿ ಹಗರಣದಲ್ಲಿ ಯಾ ತನಿಖೆ ಮಾಡಿದರೂ ನಮಗೆ ಸ್ವಾಗತ. ನಮ್ಮ ಪ್ರಕರಣದಲ್ಲಿ ನಂದಿತಾ ಅವರ ಸಾವಿನ ಪ್ರಕರಣದಲ್ಲಿ ಆತ್ಮಹತ್ಯೆ ಪ್ರಕರಣವನ್ನು ತಿರುಚಿ ಕೋಮುಗಲಭೆ ಸೃಷ್ಟಿಸಿದ್ದರು. ಆಗ ಅರಗ ಜ್ಞಾನೇಂದ್ರ ಅವರು ಸಬಿಐ ತನಿಖೆ ಆಗಬೇಕು ಎಂದಿದ್ದರು. ಈಗ ಅವರು ಬೇಕಾದರೆ ಮರುತನಿಖೆ ಮಾಡಲಿ. ನಾವು ತಪ್ಪು ಮಾಡಿಲ್ಲ ಎಂದಾದರೆ ನಾವ್ಯಾಕೆ ಹೆದರಬೇಕು. ವಿನಯ್ ಕುಲಕರ್ಣಿ ಅವರ ಮೇಲೆ ಪ್ರಕರಣ ಇಲ್ಲದಿದ್ದರೂ ಈಗ ಮರು ತನಿಖೆ ಮಾಡಿ ಹಾಕಿದ್ದಾರೆ. ಅದೇ ರೀತಿ ನಂದಿತಾ ಅವರ ಪ್ರಕರಣವನ್ನು ತನಿಖೆ ಮಾಡಲಿ’ ಎಂದು ತಿಳಿಸಿದರು

Join Whatsapp