ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕ ರಂಗಾಯಣದಲ್ಲಿ ಅಸಹ್ಯವಾಗಿ ತಿರುಚಿ ಪ್ರದರ್ಶನ| ದೂರು ದಾಖಲು

Prasthutha|

ಮೈಸೂರು: : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ ಅವರ ‘ಸಾಂಬಶಿವ ಪ್ರಹಸನ’ ನಾಟಕವನ್ನು ತಿರುಚಿ ಪ್ರದರ್ಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಕಂಬಾರರು ಮೈಸೂರು ಪೊಲೀಸ್ ಕಮಿಷನರ್ ಗೆ ಪತ್ರ ಬರೆದಿದ್ದಾರೆ.

- Advertisement -

ಚಂದ್ರಶೇಖರ ಕಂಬಾರ ಅವರ ‘ಸಾಂಬಶಿವ ಪ್ರಹಸನ’ ನಾಟಕವನ್ನು ತಿರುಚಿ, ಸಿದ್ದರಾಮಯ್ಯನವರನ್ನು ಅವಹೇಳನ ಮಾಡುವ ರೀತಿ ಮೈಸೂರು ರಂಗಾಯಣದಲ್ಲಿ ನಾಟಕ ಪ್ರದರ್ಶಿಸಲಾಗಿದೆ.
“ಈ ರೀತಿ ನಾಟಕವನ್ನು ತಿರುಚಿದವರು ಮತ್ತು ನಾಟಕ ಪ್ರದರ್ಶಿಸಲು ಅವಕಾಶ ನೀಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು” ಎಂದು ಕಂಬಾರರು ಮೈಸೂರು ಪೊಲೀಸ್ ಕಮಿಷನರ್ ಗೆ ಪತ್ರ ಬರೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಂಬಾರರು, ”ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ, ಸಾಂಬಶಿವ ಪ್ರಹಸನವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬ ವಿಷಾದವಾಗಿದೆ. ಮೊದಲನೆಯದಾಗಿ ನನ್ನ ನಾಟಕ ಪ್ರದರ್ಶಿಸುವುದಕ್ಕೆ ನನ್ನ ಅನುಮತಿ ಕೇಳಲೇ ಬೇಕಾಗಿತ್ತು. ಆದರೆ ಇವರು ಕೇಳಿಲ್ಲ. ರಂಗಾಯಣವಾದರೂ ನನ್ನ ಅನುಮತಿ ಇಲ್ಲದ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ವಿಷಾದಕರ” ಎಂದು ಟೀಕಿಸಿದ್ದಾರೆ.

- Advertisement -

“ಎರಡನೆಯದಾಗಿ, ನನ್ನ ಯಾವುದೇ ನಾಟಕಗಳಲ್ಲಿ ವ್ಯಕ್ತಿಗಳ ನಿಂದನೆ ಇರುವುದು ಸಾಧ್ಯವಿಲ್ಲ. ಅನುಮತಿ ಇಲ್ಲದೇ ನಾಟಕವನ್ನು ಪ್ರದರ್ಶಿಸಿದ್ದಕ್ಕೆ, ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೂ ಮತ್ತು ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೂ ಈ ಅಹಿತಕರ ವಾತಾವರಣಕ್ಕೆ ಕಾರಣರಾದ, ಸಂಬಂಧಪಟ್ಟ ಎಲ್ಲರ ಮೇಲೂ, ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಕೋರಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವನ್ನು ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ‘ನಾಗರತ್ನಮ್ಮ’ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಶನಿವಾರ ಪ್ರದರ್ಶಿಸುತ್ತಿದ್ದರು. ಈ ನಾಟಕದಲ್ಲಿ ಕೆಲವು ಅಂಶಗಳನ್ನು ತಿರುಚಿ ಸಿದ್ದರಾಮಯ್ಯನವರನ್ನು ಹೀಯಾಳಿಸಲಾಗಿದೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನೂ ಗೇಲಿ ಮಾಡಲಾಗಿದೆ ಎಂದು ಇಲ್ಲಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಶಾದಿ ಭಾಗ್ಯ’ಗಳನ್ನು ಕೊಟ್ಟು ಜನರನ್ನು ಅವರು ಸೋಂಬೇರಿಗಳನ್ನಾಗಿ ಮಾಡಿದರು. ಅದೇ ರೀತಿ ‘ಕಳ್ಳತನ ಭಾಗ್ಯ’ವನ್ನು ನೀಡಬೇಕಾಗಿತ್ತು ಎನ್ನುವ ಸಂಭಾಷಣೆಯನ್ನು ರಂಗದ ಮೇಲೆ ಪ್ರಸ್ತುತಪಡಿಸಲಾಗಿತ್ತು. ಕಾರ್ಯಕ್ರಮಗಳಲ್ಲಿ ನಿದ್ರೆ ಹೊಡೆಯುವುದು, ಗೊರಕೆ ಹೊಡೆದು ಅವರಿಂದ ರಾಜ್ಯವೇ ಹಾಳಾಗಿದೆ. ನಿಮಗೆ ಈ ಭಾರಿ ಬಾದಾಮಿಯೂ ಕೂಡ ಸಿಗುವುದಿಲ್ಲ ಎಂದು ಸೇವಕನ ಪಾತ್ರಧಾರಿಯಿಂದ ನಾಟಕದಲ್ಲಿ ಹೇಳಿಸಲಾಗಿದೆ ಎಂದು ದೂರಿದ್ದಾರೆ.

ನಾಟಕದ ವೇಳೆಯೇ ಪ್ರತಿಭಟನೆ

ನಾಟಕ ಪ್ರದರ್ಶನವಾಗುತ್ತಿದ್ದ ಸಂದರ್ಭದಲ್ಲಿಯೇ ಪ್ರೇಕ್ಷಕರಿಂದ ಆಕ್ಷೇಪ ವ್ಯಕ್ತವಾಗಿದೆ. ಮೋಹನ್ ಎನ್ನುವವರು ಪ್ರದರ್ಶನದ ವೇಳೆಯೇ ಎದ್ದು ನಿಂತು, “ಭಾಗ್ಯಗಳನ್ನು ನೀಡಿ ಸೋಮಾರಿ ಮಾಡುತ್ತಿದ್ದೀರಿ, ಬರೀ ನಿದ್ದೆ ಮಾಡುತ್ತಿದ್ದೀರಿ ಎಂದೆಲ್ಲ ಹೇಳಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡುತ್ತಿದ್ದೀರಿ. ಮೂಲ ನಾಟಕದಲ್ಲಿ ಹೀಗಿದೆಯೇ? ದುರುದ್ದೇಶಪೂರ್ವಕವಾಗಿ ನಾಟಕ ರೂಪಿಸಿದ್ದೀರಿ. ಐವತ್ತು ರೂಪಾಯಿ ಕೊಟ್ಟು ಬಂದಿರುವ ಕಲಾಭಿಮಾನಿ ನಾನು. ನನ್ನ ಪ್ರಶ್ನೆಗೆ ಉತ್ತರಿಸಬೇಕು” ಎಂದು ಒತ್ತಾಯಿಸಿದ್ದರು.

Join Whatsapp