ಪೆರು ಸ್ವಾತಂತ್ರ್ಯೋತ್ಸವ ದ್ವಿಶತಮಾನೋತ್ಸವದ ಸ್ಮರಣಾರ್ಥ ಬೆಂಗಳೂರಿನಲ್ಲಿ ಮಾಹಿತಿ ಕೇಂದ್ರ ಆರಂಭ

Prasthutha|

ಬೆಂಗಳೂರು, ಜು.29: ಪೆರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ರಾಷ್ಟ್ರೀಯ ದಿನ ಮತ್ತು 200 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.

- Advertisement -


ಸ್ವಾತಂತ್ರ್ಯ ಪಡೆದು 200 ವರ್ಷಗಳಾದ ಹಿನ್ನೆಲೆಯಲ್ಲಿ ಪೆರು ದೇಶದಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಇದರ ಅಂಗವಾಗಿ ಬೆಂಗಳೂರಿನಲ್ಲಿಯೂ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬೆಂಗಳೂರಿನಲ್ಲಿ, ದ್ವಿಶತಮಾನೋತ್ಸವದ ಸ್ಮರಣಾರ್ಥ ಘನತೆವೆತ್ತ ಕಾನ್ಸುಲ್ ವಿಕ್ರಮ್ ವಿಶ್ವನಾಥ್ ಅವರು ಮಾಹಿತಿ ಕೇಂದ್ರವೊಂದನ್ನು ತೆರೆದಿದ್ದಾರೆ. ಈ ಕೇಂದ್ರವು ಉಭಯ ದೇಶಗಳನ್ನು ಮತ್ತಷ್ಟು ಹತ್ತಿರ ತರಲಿದೆ. ಮಾತ್ರವಲ್ಲ ಪ್ರವಾಸೋದ್ಯಮ, ವ್ಯಾಪಾರ ಮತ್ತು ಹೂಡಿಕೆಯ ಉತ್ತೇಜನಕ್ಕೆ ಸಹಾಯ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.


ಭಾರತ ಮತ್ತು ಪೆರು ಎರಡೂ ಹಳೆಯ ನಾಗರಿಕತೆಯ ದೇಶಗಳಾಗಿದ್ದು, ಆಧುನಿಕ ಕಾಲದಲ್ಲಿ ಆಳವಾದ ಸಂಬಂಧ ಹೊಂದಿದೆ. ಪೆರು ಹಲವಾರು ಪ್ರಾಚೀನ ಸಂಸ್ಕೃತಿಗಳು ಮತ್ತು ನಾಗರಿಕತೆಯ ತೊಟ್ಟಿಲುಗಳಿಗೆ ನೆಲೆಯಾಗಿರುವ ಪೆರು ದೇಶದ ಇತಿಹಾಸವು ಕ್ರಿ.ಪೂ 10 ನೇ ಸಹಸ್ರಮಾನಕ್ಕೂ ಹಿಂದಿನದ್ದಾಗಿದೆ. ಮಿಲಿಟರಿ ಕಾರ್ಯಾಚರಣೆಗಳ ನಂತರ 1821 ರಲ್ಲಿ ಪೆರು ಸ್ಪ್ಯಾನಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಗಳಿಸಿತು. ಸ್ವಾತಂತ್ರ್ಯದ ಎರಡು ಶತಮಾನಗಳನ್ನು ಆಚರಿಸುವ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಪೆರು ಕೂಡ ಒಂದಾಗಿದೆ.

- Advertisement -


“ಇದು ನಮ್ಮ ಇತಿಹಾಸದಲ್ಲಿ ಒಂದು ಮಹತ್ವದ ಸಂದರ್ಭವಾಗಿದೆ ಮತ್ತು ಸರ್ಕಾರಕ್ಕೆ, ಬೆಂಗಳೂರಿನ ಜನರಿಗೆ ಮತ್ತು ಈ ಸುಂದರ ನಗರದಲ್ಲಿ ವಾಸಿಸುವ ನನ್ನ ಸಹವರ್ತಿ ಪೆರುವಿಯನ್ನರಿಗೆ ನನ್ನ ಹೃತ್ಪೂರ್ವಕ ಮತ್ತು ಆತ್ಮೀಯ ಶುಭಾಶಯಗಳನ್ನು ತಿಳಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ ಎಂದು ಭಾರತದಲ್ಲಿರುವ ಪೆರುವಿನ ರಾಯಭಾರಿ ಕಾರ್ಲೋಸ್ ರಾಫೆಲ್ ಪೊಲೊ ಈ ಸಂದರ್ಭದಲ್ಲಿ ಹೇಳಿದರು.


ಪೆರು ಮತ್ತು ಭಾರತವು ಪ್ರಾಚೀನ ಕಾಲದಿಂದಲೂ ಸೌಹಾರ್ದಯುತ ಸಂಬಂಧ ಹೊಂದಿವೆ. ಆಧುನಿಕ ಕಾಲದಲ್ಲೂ ಉಭಯ ದೇಶಗಳ ನಡುವಿನ ನಿಕಟ ಸಂಬಂಧ ವೃದ್ಧಿಗೊಳ್ಳುತ್ತಲೇ ಇದೆ ಎಂದು ರಾಯಭಾರಿ ಹೇಳಿದರು.
ಉಭಯ ದೇಶಗಳ ನಡುವಿನ ಜನರ ಸಂಬಂಧ ಕೂಡ ಹೆಚ್ಚಾಗುತ್ತಿದೆ. ಕಳೆದ ಒಂದು ದಶಕದಲ್ಲಿ ವ್ಯಾಪಾರ ಸಂಬಂಧಗಳು ಮತ್ತು ದ್ವಿಪಕ್ಷೀಯವಾಗಿ ಮತ್ತು ಬಹುಪಕ್ಷೀಯವಾಗಿ ಸಂಬಂಧ ಕೂಡ ಹೆಚ್ಚಾಗಿದೆ ಎಂದು ಅವರು ಹೇಳಿದರು.

Join Whatsapp