ರಾಜ್ಯಕ್ಕೆ ನ್ಯಾಯ ಕೊಡಿಸಿದರೆ ನಾನೇ ಬೊಮ್ಮಾಯಿ ಅವರನ್ನು ರಾಜಾಹುಲಿ ಎಂದು ಕರೆಯುತ್ತೇನೆ: ಸಿದ್ದರಾಮಯ್ಯ

Prasthutha|

ಮುಖ್ಯಮಂತ್ರಿ ಬೊಮ್ಮಾಯಿಯವರು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿಯವರ ಎದುರು ಧೈರ್ಯದಿಂದ ಹೇಳಿ ರಾಜ್ಯಕ್ಕೆ ನ್ಯಾಯ ಕೊಡಿಸಿದರೆ ನಾನು ‘ನಾಯಿ ಮರಿ’ ಎಂದು ಹೇಳಿರುವುದನ್ನು ವಾಪಸು ಪಡೆದು ಅವರಿಗೆ ‘ರಾಜಾ ಹುಲಿ’ ಎನ್ನುವ ಬಿರುದು ಕೊಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ.

- Advertisement -

ಕಾರ್ಪೋರೇಟ್ ತೆರಿಗೆ, ಸುಂಕ, ಪೆಟ್ರೋಲ್-ಡೀಸೆಲ್ ತೆರಿಗೆ, ಜಿಎಸ್ ಟಿ ಮೂಲಕ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತಿರುವ ಹಣ ಸುಮಾರು ರೂ.3.50 ಲಕ್ಷ ಕೋಟಿ, ರಾಜ್ಯಕ್ಕೆ ವಾಪಸು ಬರುವುದು ರೂ.50,000 ಕೋಟಿಗಿಂತಲೂ ಕಡಿಮೆ. ಈ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್ ಇದೆಯೇ?
ಮನಮೋಹನ್ ಸಿಂಗ್ ಸರ್ಕಾರ 2019ರಲ್ಲಿ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ನೀಡಿರುವ ಪಾಲು ರೂ.39,000 ಕೋಟಿ, ಕಳೆದ ವರ್ಷ ರಾಜ್ಯಕ್ಕೆ ಬಂದಿರುವ ಹಣ ರೂ.29,000 ಕೋಟಿ. ಬಜೆಟ್ ಗಾತ್ರ ಹೆಚ್ಚಿದೆ, ತೆರಿಗೆ ಸಂಗ್ರಹ ಹೆಚ್ಚಿದೆ, ರಾಜ್ಯದ ಪಾಲು ಕಡಿಮೆಯಾಗಿದೆ ಯಾಕೆ?

ಕಳೆದ ವರ್ಷ ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ಜಿಎಸ್‌ಟಿ ಪರಿಹಾರದಿಂದ ಬಂದಿರುವ ಹಣ ರೂ.30,000 ಕೋಟಿ, ಈ ವರ್ಷ ಕೇಂದ್ರ ನೀಡಿರುವುದು ರೂ.20,106 ಕೋಟಿ. ವರ್ಷದಿಂದ ವರ್ಷಕ್ಕೆ ರಾಜ್ಯದ ಪಾಲು ಕಡಿಮೆಯಾಗುತ್ತಿರುವುದು ಯಾಕೆ ಮುಖ್ಯಮಂತ್ರಿಗಳೇ?
2017ರಿಂದ ಮೇಕೆದಾಟು, 2020ರಿಂದ ಮಹದಾಯಿ ಮತ್ತು 2021ರಿಂದ ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ. ಮಹದಾಯಿ ಬಗ್ಗೆ ಇತ್ತೀಚೆಗೆ ಅನುಮತಿ ನೀಡಲಾಗಿದೆ ಎಂದು ಹೇಳುತ್ತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದರ ವಿರುದ್ದ ದನಿ ಎತ್ತುವವರು ಯಾರು?

- Advertisement -

ರಾಜ್ಯದ ವಿಮಾನ ನಿಲ್ದಾಣ, ಬಂದರುಗಳು ಅದಾನಿ ಕಂಪೆನಿಗೆ ಮಾರಾಟ ಮಾಡಲಾಗುತ್ತಿದೆ. ರಾಯಚೂರು ಉಷ್ಣವಿದ್ಯುತ್ ಸ್ಥಾವರವೂ ಅದೇ ಸಾಲಿಗೆ ಸೇರಲಿದೆ, ಈಗ ರಾಜ್ಯದ ನಂದಿನಿ ಡೇರಿ ಮೇಲೆ ಕಣ್ಣು ಬಿದ್ದಿದೆ. ರಾಜ್ಯದಲ್ಲಿರುವುದು ಜನರ ಸರ್ಕಾರವೇ? ಕೇಂದ್ರದ ಏಜಂಟ್ ಸರ್ಕಾರವೇ?
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನದ ಆಶ್ವಾಸನೆಯಷ್ಟೇ ಲಾಭ, ಈ ವರೆಗೆ ಪೈಸೆ ಹಣ ನೀಡಿಲ್ಲ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳೆಲ್ಲವೂ ಕೇಂದ್ರ ಅನುದಾನ ಬಿಡುಗಡೆ ಮಾಡದೆ ಇರುವ ಕಾರಣಕ್ಕೆ ಕುಂಟುತ್ತಾ ಸಾಗಿದೆ. ಇದನ್ನು ಪ್ರಶ್ನಿಸುವ ಶಕ್ತಿ ಯಾರಿಗಿದೆ? ಎಂದು ಪ್ರಶ್ನಿಸಿದ್ದಾರೆ.

Join Whatsapp