ಬಿಜೆಪಿಗೆ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇದ್ದರೆ ಶೇ.50 ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ; ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಸವಾಲು

Prasthutha|

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ತಮ್ಮ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಹಿಂದುಳಿದವರು, ದಲಿತರ ಬಗ್ಗೆ ಕಾಳಜಿ ಇರುವುದು ನಿಜವೇ ಆದರೆ ಶೇ.50ರಷ್ಟು ನಿಗದಿ ಮಾಡಿರುವ ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

- Advertisement -


ಕೋಲಾರದಲ್ಲಿ ನಡೆದ ಜೈ ಭಾರತ ಸಮಾವೇಶದಲ್ಲಿ ಭಾಗವಹಿಸಿ ಭಾನುವಾರ ಮಾತನಾಡಿದ ರಾಹುಲ್ ಗಾಂಧಿ ಅವರು, ‘ಮೋದಿ ಅವರ ಸರ್ಕಾರದಲ್ಲಿ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳ ಪೈಕಿ ಕೇವಲ 7% ಮಾತ್ರ ಹಿಂದುಳಿದವರು, ದಲಿತರು ಇದ್ದಾರೆ. ಇದು ಮೋದಿ ಅವರ ಕಾಳಜಿಯೇ? ಯುಪಿಎ ಸರ್ಕಾರ 2011ರಲ್ಲಿ ಜಾತಿ ಗಣತಿ ಮಾಡಿಸಿದ್ದು, ಅದರ ಪ್ರಕಾರ ದೇಶದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತರ ಜನಸಂಖ್ಯೆ ಎಷ್ಟಿದೆ? ಎಂದು ಬಹಿರಂಗಪಡಿಸಲಿ.

ಜತೆಗೆ ಅದರ ಅನುಗುಣವಾಗಿ ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಆಯಾ ಸಮುದಾಯಗಳಿಗೆ ಅಧಿಕಾರ ನೀಡಲಿ. ಇಲ್ಲದಿದ್ದರೆ ಈ ಸರ್ಕಾರ ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ದ್ರೋಹ ಮಾಡಿದಂತೆ’ ಎಂದು ರಾಹುಲ್ ಗಾಂಧಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದರು. ಉಳಿದಂತೆ ರಾಹುಲ್ ಗಾಂಧಿ ಅವರು ಹೇಳಿದ್ದಿಷ್ಟು;
ಇಲ್ಲಿ ಮುಂದಿನ ಕೆಲ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ.

- Advertisement -

ಈ ಸರ್ಕಾರ ರಾಜ್ಯದ ಯುವಕರು, ಮಹಿಳೆಯರು, ಬಡವರಿಗಾಗಿ ಏನು ಮಾಡಲಿದೆ ಎಂದು ಹೇಳುತ್ತೇನೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಚುನಾವಣೆ ನಂತರ ಜನರಿಗೆ ಯಾವ ಕಾರ್ಯಕ್ರಮ ನೀಡಬಹುದು ಎಂದು ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ನನ್ನನ್ನು ಕೇಳಿದರು. ಆಗ ನಾನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಎರಡು ಮೂರು ಭರವಸೆಗಳನ್ನು ಜಾರಿಗೆ ತರಬೇಕು. ಈ ಯೋಜನೆ ಜಾರಿ ಮಾಡಲು ವರ್ಷಾನುಗಟ್ಟಲೆ ಕಾಲಹರಣ ಮಾಡಬಾರದು. ಸರ್ಕಾರ ಬಂದ ಕೂಡಲೇ ಅವುಗಳನ್ನು ಅನುಷ್ಠಾನಕ್ಕೆ ತರಲು ಸೂಚಿಸಿದೆ. ಇದನ್ನು ನಾನು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೇಳಬಯಸುತ್ತೇನೆ.


ನಾವು ಕರ್ನಾಟಕ ಜನರಿಗೆ 4 ಗ್ಯಾರಂಟಿ ಯೋಜನೆ ನೀಡಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ ನೀಡುವುದು. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ. ಅನ್ನಭಾಗ್ಯದ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ನೀಡಲಾಗುವುದು. ಇನ್ನು ಯುವನಿಧಿ ಯೇಜನೆ ಮೂಲಕ ಪ್ರತಿ ತಿಂಗಳು ನಿರುದ್ಯೋಗ ಪಧವೀದರರಿಗೆ 3 ಸಾವಿರ, ಡಿಪ್ಲೋಮಾ ಪದವಿಧರರಿಗೆ 1500 ನೀಡಲಾಗುವುದು. ಈ ಭರವಸೆಗಳು ಸರ್ಕಾರ ಬಂದ ಮೊದಲ ದಿನ ಹಾಗೂ ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡಬೇಕು ಎಂದು ಸೂಚಿಸುತ್ತೇನೆ.

ರಾಜ್ಯದ ಕಾಂಗ್ರೆಸ್ ಪಕ್ಷ ಜನರಿಗೆ ನೇರ ಸಂದೇಶ ರವಾನಿಸಬೇಕು. ಪ್ರಧಾನಮಂತ್ರಿಗಳಿಗೆ ಸಂದೇಶ ರವಾನೆಯಾಗಬೇಕು. ಪ್ರಧಾನಮಂತ್ರಿಗಳು ಅದಾನಿಯಂತಹ ಉದ್ಯಮಿಗಳಿಗೆ ಸಾವಿರಾರು ಕೋಟಿ ಹಣ ನೀಡುವುದಾದರೆ, ನಾವು ಕೂಡ ದೇಶದ ಜನರಿಗೆ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಿದೆ. ನೀವು ಹೃದಯಪೂರ್ವಕವಾಗಿ ಅಧಾನಿ ಅವರಿಗೆ ನೆರವು ನೀಡಿದರೆ, ನಾವು ಬಡ ಜನರು, ರೈತರು, ಮಹಿಳೆಯರು, ಯುವಕರಿಗೆ ಸಹಾಯ ಮಾಡುತ್ತೇವೆ. ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? 40% ಕಮಿಷನ್ ತಿಂದಿದ್ದಾರೆ.

ಕೆಲಸ ಆಗಬೇಕಾದರೆ ರಾಜ್ಯದ ಜನರ ಲೂಟಿ ಮಾಡಿದೆ. ಅವರು ಮಾಡಿರುವ ಎಲ್ಲ ಕೆಲಸಕ್ಕೂ 40% ಕಮಿಷನ್ ತಿಂದಿದ್ದಾರೆ. ಈ ವಿಚಾರ ನನ್ನ ಆರೋಪವಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಈ ಆರೋಪ ಮಾಡಿದ್ದಾರೆ. ಪ್ರಧಾನಮಂತ್ರಿಗಳು ಈ ಪತ್ರಕ್ಕೆ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ. ಅವರ ಮೌನ ಈ ಸರ್ಕಾರ 40% ಸರ್ಕಾರ ಎಂದು ಒಪ್ಪಿಕೊಂಡಂತಾಗಿದೆ. ರುಪ್ಸಾ ಸಂಸ್ಥೆ ಪತ್ರ, ಪಿಎಸ್’ಐ ಹಗರಣ, ಸಹಾಯಕ ಪ್ರಾಧ್ಯಾಪಕರು, ಇಂಜಿನಿಯರ್ ನೇಮಕಾತಿ ಅಕ್ರಮಗಳು ನಿಮ್ಮ ಕಣ್ಣ ಮುಂದೆ ಇವೆ.


ನಾನು ಸಂಸತ್ತಿನಲ್ಲಿ ಅಧಾನಿ ಅವರ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ನನ್ನ ಮೈಕ್ ಆಫ್ ಮಾಡಿದ್ದರು. ನಾನು ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧವೇನು ಎಂದು ಕೇಳಿದೆ. ನಾನು ಸಂಸತ್ತಿನಲ್ಲಿ ಮೋದಿ ಅವರು ಹಾಗೂ ಅದಾನಿ ಅವರ ವಿಮಾನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚಿತ್ರ ತೋರಿಸಿದೆ. ನಿಮ್ಮ ನಡುವಿನ ಸಂಬಂಧವೇನು ಎಂದು ಕೇಳಿದೆ. ದೇಶದ ವಿಮಾನನಿಲ್ದಾಣಗಳು ಅದಾನಿಗೆ ನೀಡುತ್ತಿದ್ದು, ಇದಕ್ಕಾಗಿ ನಿಯಮ ಬದಲಾಯಿಸಿದ್ದು ಯಾಕೆ? ಎಂದು ಕೇಳಿದೆ. ಈ ಹಿಂದೆ ವಿಮಾನ ನಿಲ್ಧಾಣವನ್ನು ಅನುಭವಿಗಳಿಗೆ ನೀಡಬೇಕು ಎಂಬ ನಿಯಮವಿತ್ತು, ಆದರೆ ಅದಾನಿ ಅವರಿಗೆ ಅನುಭವವಿಲ್ಲದಿದ್ದರೂ ಅವರಿಗೆ ವಿಮಾನ ನಿಲ್ದಾಣ ನೀಡುತ್ತಿರುವುದೇಕೆ? ಎಂದು ರಾಹುಲ್ ಪ್ರಶ್ನಿಸಿದರು.


ಮುಂಬೈ ವಿಮಾನ ನಿಲ್ದಾಣ ಅದಾನಿಗೆ ಕೊಟ್ಟರು. ಈ ವಿಮಾನ ನಿರ್ಮಾಣ ಮಾಡಿದವರ ವಿರುದ್ಧ ಇಡಿ ಐಟಿ ದಾಳಿ ಮಾಡಿಸಿ ಅವರಿಂದ ಕಿತ್ತು ಅದಾನಿಗೆ ಕೊಟ್ಟಿದ್ದಾರೆ. ಪ್ರಧಾನಿ ಆಸ್ಟ್ರೇಲಿಯಾದ ವೇದಿಕೆಯಲ್ಲಿ ಅದಾನಿ ಹಾಗೂ ಎಸ್ಬಿಐ ಅಧಿಕಾರಿಗಳು ಕೂತಿದ್ದರು. ನಂತರ ಸಾವಿರಾರು ಕೋಟಿ ಹಣವನ್ನು ಎಸ್ಬಿಐ ನಿಂದ ಅದಾನಿ ಅವರಿಗೆ ಸಾಲ ಸಿಗುತ್ತದೆ. ಯಾವ ಅಧಿಕಾರದಿಂದ ಈ ಸಾಲ ಕೊಟ್ಟರು. ಶ್ರೀಲಂಕಾ ಬಂದರಿನ ಅಧ್ಯಕ್ಷರ ಪ್ರಕಾರ ಲಂಕಾದ ಬಂದರುಗಳನ್ನು ಅದಾನಿ ಅವರಿಗೆ ನೀಡಲು ಮೋದಿ ಅವರು ಹೇಳಿದ್ದರು ಎಂದಿದ್ದಾರೆ. ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಮಾಡಿದ ಬೆನ್ನಲ್ಲೇ ಅದಾನಿ ಅವರಿಗೆ ಬಾಂಗ್ಲಾದೇಶದಲ್ಲಿ ಗುತ್ತಿಗೆ ಸಿಗುತ್ತದೆ. ಪ್ರಧಾನಿ ಇಸ್ರೇಲ್ ಪ್ರವಾಸ ಮಾಡಿದ ನಂತರ ಅಲ್ಲಿಯೂ ಅದಾನಿ ಅವರಿಗೆ ಬಂದರು ಹಾಗೂ ರಕ್ಷಣಾ ವಲಯದ ಗುತ್ತಿಗೆಯನ್ನು ಕೊಡಿಸುತ್ತಾರೆ.

ಹೀಗಾಗಿ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಬೋನಾಮಿ ಕಂಪನಿಗಳು ಯಾರದ್ದು, ಇದರಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಕೇಳಿದೆ. ನಂತರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ತನ್ನು ನಡೆಯಲು ಬಿಡಲಿಲ್ಲ. ಸರ್ಕಾರದ ಸಂಸದರೇ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದರು. ನಂತರ ಬಿಜೆಪಿ ಮಂತ್ರಿಗಳು ನನ್ನ ವಿರುದ್ಧ ಸುಳ್ಳು ಹೇಳಿದರು. ಸಂಸತ್ತಿನ ನಿಯಮದ ಪ್ರಕಾರ ಒಬ್ಬ ಸದಸ್ಯ ಮತ್ತೊಬ್ಬ ಸದಸ್ಯನ ಬಗ್ಗೆ ಮಾತನಾಡಿದಾಗ ಆತನಿಗೆ ಮಾತನಾಡಲು ಅವಕಾಶ ನೀಡಬೇಕು. ಹೀಗಾಗಿ ನನ್ನ ಮೇಲಿನ ಆರೋಪದ ಬಗ್ಗೆ ಮಾತನಾಡಲು ಸ್ಪೀಕರ್ ಅವರಿಗೆ 2 ಬಾರಿ ಪತ್ರ ಬರೆದೆ. ಆದರೆ ಅವಕಾಶ ನೀಡಲಿಲ್ಲ.

ನಂತರ ಸ್ಪೀಕರ್ ಅವರ ಕಚೇರಿಗೆ ಹೋಗಿ ಉತ್ತರ ನೀಡಲು ಅವಕಾಶ ನೀಡಿ ಎಂದು ಕೇಳಿದೆ. ಆದರೆ ಅವರು ನಗುತ್ತಾ ನಾನು ಏನು ಮಾಡಲು ಸಾಧ್ಯವಿಲ್ಲ ಎಂದರು. ನೀವು ಸ್ಪೀಕರ್ ಆಗಿದ್ದು, ನೀವು ಅವಕಾಶ ನೀಡುವ ಅಧಿಕಾರವಿದೆ, ಆದರೂ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಕೇಳಿದೆ. ಪುನಃ ನಗುತ್ತಾ ನನ್ನತ್ತ ನೋಡಿದರು. ಅವರಿಗೆ ನಾನು ಸಂಸತ್ತಿನಲ್ಲಿ ಅದಾನಿ ಅವರ ಬಗ್ಗೆ ಪ್ರಸ್ತಾಪ ಮಾಡುವುದು ಬೇಕಾಗಿಲ್ಲ. ನಂತರ ನನ್ನನ್ನು ಸಂಸತ್ತಿನಿಂದ ಅನರ್ಹರನ್ನಾಗಿ ಮಾಡುತ್ತಾರೆ.

ಇದರಿಂದ ಅವರು ಹೆದರಿಸಬಹುದು ಎಂದು ಭಾವಿಸಿರಬಹುದು. ಆದರೆ ನಾನು ಇದಕ್ಕೆಲ್ಲಾ ಹೆದರುವವನಲ್ಲ. ನಾನು ಮತ್ತೆ ಮತ್ತೆ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧ ಹಾಗೂ ಅದಾನಿ ಅವರ ಬೇನಾಮಿ ಕಂಪನಿಗಳಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಈಗಲೂ ಪ್ರಶ್ನೆ ಮಾಡುತ್ತೇನೆ. ಈ ಪ್ರಶ್ನೆಗೆ ಉತ್ತರ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇನೆ. ನೀವು ನನ್ನನ್ನು ಅನ್ರಹರನ್ನಾಗಿ ಮಾಡಿರಿ, ಜೈಲಿಗೆ ಹಾಕಿರಿ ನನಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ಸವಾಲು ಹಾಕಿದರು.


ಅದಾನಿ ಅವರು ಮೋದಿ ಅವರಿಗೆ ಭ್ರಷ್ಟಾಚಾರದ ಮಾದರಿಯಾಗಿದ್ದಾರೆ. ಒಬ್ಬ ವ್ಯಕ್ತಿ ದೇಶದ ಎಲ್ಲಾ ಮೂಲಸೌಕರ್ಯ ಕ್ಷೇತ್ರದ ಸಂಪತ್ತನ್ನು ಪಡೆಯುತ್ತಾನೆ ಇದು 21ನೇ ಶತಮಾನದ ಇತಿಹಾಸ. ಸಾವಿರಾರು ಕೋಟಿ ಹಣ ಮಾಯಾ ಮಂತ್ರದಂತೆ ಅವರ ಖಾತೆಗೆ ಬರುತ್ತದೆ.ಅದಾನಿ ಅವರ ರಕ್ಷಣಾ ಸಂಸ್ಥೆಯ ನಕಲಿ ಕಂಪನಿಯಲ್ಲಿ ಚೀನಾದ ವ್ಯಕ್ತಿ ನಿರ್ದೇಶಕರಾಗಿದ್ದಾರೆ. ಈತನನ್ನು ಯಾರು, ಯಾಕೆ ಕೂರಿಸಿದ್ದಾರೆ ಎಂಬುದರ ಬಗ್ಗೆ ಯಾರೂ ತನಿಖೆ ಮಾಡುತ್ತಿಲ್ಲ. ಕೇವಲ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ ಎಂದು ಕುಟುಕಿದರು.


ನಾನು ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡುತ್ತೇನೆ ಎಂದು ಸುಳ್ಳು ಹೇಳುತ್ತೇನೆ. ಹಿಂದುಳಿದವರು, ದಲಿತರ ಬಗ್ಗೆ ಮಾತನಾಡಿದರೆ ಅವರ ದೊಡ್ಡ ಸವಾಲು ಏನು? ಯಾರ ಜನಸಂಖ್ಯೆ ಹೆಚ್ಚಾಗಿದೆ? ಮೋದಿ ಅವರ ಸರ್ಕಾರದಲ್ಲಿರುವ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೋಡಿದರೆ ಕೇವಲ ಶೇ.7ರಷ್ಟು ಮಂದಿ ಮಾತ್ರ ದಲಿತರು, ಹಿಂದುಳಿದವರು, ಆದಿವಾಸಿಗಳು ಇದ್ದಾರೆ.

ಭಾರತದಲ್ಲಿ ಎಷ್ಟು ಜನ ಓಬಿಸಿ, ದಲಿತರು, ಆದಿವಾಸಿಗಳಿದ್ದಾರೆ? ಸಂಪತ್ತು, ಅಧಿಕಾರ ಹಂಚಿಕೆ ವಿಚಾರ ಮಾತನಾಡುವುದಾದರೆ ಯಾರಿಗೆ ಹೆಚ್ಚಿನ ಪಾಲು ಸಿಗಬೇಕು. ನಿಮ್ಮ ಸರ್ಕಾರದಲ್ಲಿ ಕೇವಲ ಶೇ.7ರಷ್ಟು ಮಾತ್ರ ಒಬಿಸಿ ಹಾಗೂ ದಲಿತರು ಇರುವುದೇಕೆ ಎಂದು ಉತ್ತರಿಸಿ ಎಂದು ಹೇಳಿದರು.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೋದಿ ಅವರು ಅದಾನಿಯಂತಹವರಿಗೆ ನೆರವು ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದ ರೈತರು, ಕಾರ್ಮಿಕರು ಸಣ್ಣ ಉದ್ಯಮಿಗಳಿಗೆ ನರವು ನೀಡುತ್ತದೆ. ಮೋದಿ ಸರ್ಕಾರ ಕೋಟ್ಯಾಧಿಪತಿಗಳಿಗೆ ಮಾತ್ರ ಬ್ಯಾಂಕುಗಳ ಬಾಗಿಲನ್ನು ತೆಗೆದಿದ್ದು, ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗಾಗಿ ಬ್ಯಾಂಕುಗಳ ಬಾಗಿಲು ತೆಗೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರು, ಬಡವರು, ಕಾರ್ಮಿಕರ ಸರ್ಕಾರವಾಗಲಿದೆ.

ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿರುವುದು ಸಂತೋಷದ ವಿಚಾರ. ಕಾಂಗ್ರೆಸ್ ಪಕ್ಷ ಇಲ್ಲಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಬೇಕಾಗಿದೆ. ಒಂದು ಮಾತು ನೆನಪಿನಲ್ಲಿಡಿ.

ಬಿಜೆಪಿ ಸರ್ಕಾರ 40% ಕಮಿಷನ್ ಹಣದಲ್ಲಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಾರೆ. ನಿಮ್ಮಿಂದ ಕದ್ದ ಹಣದಲ್ಲಿ ಸರ್ಕಾರ ಬೀಳಿಸಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಾರೆ. ಹೀಗಾಗಿ ನೀವು ಕನಿಷ್ಠ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಆಗ ಬಿಜೆಪಿಗೆ ಭ್ರಷ್ಟಾಚಾರ ಮಾಡಲು ಅವಕಾಶ ತಪ್ಪಿಸಬಹುದು ಎಂದು ರಾಹುಲ್ ಗಾಂಧಿ ಹೇಳಿದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖಂಡರಾದ ಸಲೀಂ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.

Join Whatsapp