ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕಕ್ಕೆ ಬಿಜೆಪಿ ಬೆಂಕಿ ಹಚ್ಚಿದರೆ, ಕಾಂಗ್ರೆಸ್ ಪೆಟ್ರೋಲ್ ಸುರಿಯುತ್ತಿದೆ: ಹೆಚ್ ಡಿ ಕೆ ಟೀಕೆ

Prasthutha|

ಹರಿಹರ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ರೈತರ ಅಭಿವೃದ್ಧಿ ಸೇರಿ ಪಂಚರತ್ನ ಯೋಜನೆ ಜಾರಿಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

- Advertisement -

ಜನತಾ ಜಲಧಾರೆ ರಥಯಾತ್ರೆಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಉಚಿತ ಶಿಕ್ಷಣ, ಆರೋಗ್ಯ, ರೈತರ ಉನ್ನತಿ, ಯುವಜನತೆಗೆ ಸ್ವ ಉದ್ಯೋಗ, ಪ್ರತಿ ಕುಟುಂಬಕ್ಕೂ ಸ್ವಂತ ಮನೆ ಸೌಕರ್ಯ ಒದಗಿಸುವ ಪಂಚರತ್ನ ಯೋಜನೆಯನ್ನು ಪಕ್ಷ ರೂಪಿಸಿದೆ’ ಎಂದು ಹೇಳಿದರು.

‘ಎಚ್.ಡಿ. ದೇವೇಗೌಡರು ಪ್ರಧಾನಿಯಾದ ಅವಧಿ ಹೊರತುಪಡಿಸಿ, ಯಾವ ಕೇಂದ್ರ ಸರ್ಕಾರವೂ ರಾಜ್ಯದ ನೀರಾವರಿಗೆ ಪುಡಿಗಾಸು ನೀಡಿಲ್ಲ. ತರಳಬಾಳು ಶ್ರೀ ಆಶಯದಂತೆ ಭದ್ರಾ ಮೇಲ್ದಂಡೆ ಯೋಜನೆಗೆ 2006ರಲ್ಲಿ ನಾನು ಮುಖ್ಯಮಂತ್ರಿ ಇದ್ದಾಗ ಸಚಿವ ಸಂಪುಟ ಒಪ್ಪಿಗೆ ನೀಡಲಾಯಿತು. ಜಗಳೂರಿನಲ್ಲಿ ಆ ಯೋಜನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು’ ಎಂದರು.

- Advertisement -

‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಪಿಎಸ್ಐ ಹುದ್ದೆಗೆ 70 – 80 ಲಕ್ಷ, ಉಪವಿಭಾಗಾಧಿಕಾರಿ ಹುದ್ದೆಗೆ 1 ಕೋಟಿ ಹಣ ನೀಡಬೇಕಿದೆ. ಹಣ ನೀಡಿ ನೌಕರಿ ಪಡೆಯುತ್ತಿದ್ದಾರೆ. ಇಂಥದ್ದನ್ನೆಲ್ಲಾ ಸಂಪೂರ್ಣ ಮಟ್ಟ ಹಾಕಬೇಕೆಂದರೆ ರಾಜಿಯಾಗದೇ, ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಸರ್ಕಾರ ತರುವುದು ನಿಮ್ಮ ಕೈಲಿದೆ’ ಎಂದು

ಹೇಳಿದರು.

‘ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ, ಆದರೆ ಈ ತೋಟಕ್ಕೆ ಬೆಂಕಿ ಬಿದ್ದಿದೆ. ಬಿಜೆಪಿ ಬೆಂಕಿ ಹಚ್ಚಿದರೆ, ಕಾಂಗ್ರೆಸ್ ಪೆಟ್ರೋಲ್ ಸುರಿಯುತ್ತಿದೆ. ಇಬ್ಬರಿಗೂ ಶಾಂತಿ ಬೇಕಾಗಿಲ್ಲ. ವ್ಯಾಪಾರ ವಹಿವಾಟುಗಳಲ್ಲಿ ಹಿಂದೂ ಮುಸಲ್ಮಾನರ ನಡುವೆ ಪರಸ್ಪರ ಸಹಕಾರ ಅನಿವಾರ್ಯ. ಆದರೆ ಬಿಜೆಪಿ ಅಧಿಕಾರಕ್ಕಾಗಿ ಅಮಾಯಕ ಯುವಕರಿಗೆ ಧರ್ಮದ ಅಮಲು ಏರಿಸುತ್ತಿದೆ’ ಎಂದು ಕಿಡಿ ಕಾರಿದರು.

Join Whatsapp