‘ಕಂಗನಾಗೆ ಹೊಡೆದ ಮಹಿಳೆಗೆ ನಾನು ಕೆಲಸ ಕೊಡ್ತೀನಿ’: ಗಾಯಕ ವಿಶಾಲ್ ದದ್ಲಾನಿ

Prasthutha|

ನವದೆಹಲಿ: ನಟಿ, ಸಂಸದೆ ಕಂಗನಾ ರಣಾವತ್ ಅವರಿಗೆ ಚಂಡಿಗಢ ವಿಮಾನ ನಿಲ್ದಾಣದಲ್ಲಿ ಕೆನ್ನೆಗೆ ಬಾರಿಸಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರಿಗೆ ಉದ್ಯೋಗ ನೀಡಲು ಜಯಪ್ರಿಯ ಗಾಯಕ ವಿಶಾಲ್ ದದ್ಲಾನಿ ಮುಂದೆ ಬಂದಿದ್ದಾರೆ.

- Advertisement -


ಗಾಯಕ ವಿಶಾಲ್ ದದ್ಲಾನಿ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿಯ ಸಿಟ್ಟು ಏನು ಎಂಬುದು ನನಗೆ ಚೆನ್ನಾಗಿ ಅರ್ಥ ಆಗುತ್ತದೆ. ಕುಲ್ವಿಂದರ್ ಕೌರ್ ವಿರುದ್ಧ ಸಿಐಎಸ್ ಎಫ್ ನವರು ಏನಾದರೂ ಕ್ರಮ ಕೈಗೊಂಡರೆ, ಅವರಿಗಾಗಿ ನನ್ನಲ್ಲಿ ಉದ್ಯೋಗ ಕಾದಿರುತ್ತದೆ ಎಂಬುದನ್ನು ನಾನು ಖಚಿತಪಡಿಸುತ್ತೇನೆ. ಜೈ ಹಿಂದ್, ಜೈ ಜವಾನ್, ಕೈ ಕಿಸಾನ್’ ಎಂದು ವಿಶಾಲ್ ದದ್ಲಾನಿ ಬರೆದುಕೊಂಡಿದ್ದಾರೆ. ‘ಸ್ಕ್ಯಾನ್ ಮಾಡಲು ಕಂಗನಾ ಅವರಿಗೆ ತಮ್ಮ ಫೋನ್ ನೀಡಲು ಸೂಚಿಸಲಾಯಿತು. ಆದರೆ ಈಗ ತಾನು ಸಂಸದೆ ಎಂಬ ಕಾರಣಕ್ಕೆ ಅವರು ಫೋನ್ ನೀಡಲು ನಿರಾಕರಿಸಿದರು. ಅಲ್ಲಿಂದ ವಾಗ್ವಾದ ಶುರುವಾಯಿತು. ಕುಲ್ವಿಂದರ್ ಕೌರ್ ಅವರನ್ನು ಕೆಲಸದಿಂದ ತೆಗೆದುಹಾಕಿದರೆ ಯಾರಾದರೂ ಅವರನ್ನು ನನ್ನ ಸಂಪರ್ಕಕ್ಕೆ ತನ್ನಿ. ಅವರಿಗೆ ಉತ್ತಮ ಉದ್ಯೋಗ ನೀಡುತ್ತೇನೆ’ ಎಂದು ವಿಶಾಲ್ ದದ್ಲಾನಿ ಭರವಸೆ ನೀಡಿದ್ದಾರೆ.



Join Whatsapp