ಪಕ್ಷದಿಂದ ಹೊರಗೆ ಕಾಲಿಟ್ಟವರ ಬಗ್ಗೆ ಚಿಂತೆ ಇಲ್ಲ | HDK

Prasthutha|

ಬೆಂಗಳೂರು : ಪಕ್ಷದಿಂದ ಹೊರಗೆ ಕಾಲಿಟ್ಟಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ. ಹೋಗಬೇಕು ಎಂದುಕೊಂಡವರು ಹೋಗಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದರು.ಅಲ್ಲದೆ, ಕಳೆದ ಬಾರಿಯ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಸೆಳೆಯುವ ಕೆಲಸ ಕೆಲವರಿಂದ ಆಗುತ್ತಿದೆ. ಹೀಗಾಗಿ ನಾನು ಅಂತ ಕೆಲ ಅಭ್ಯರ್ಥಿಗಳನ್ನು ಕಾರ್ಯಾಗಾರಕ್ಕೆ ಕರೆದಿಲ್ಲ. ಅಂಥ ಕಡೆಯಲ್ಲ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

- Advertisement -

ಬಿಡದಿ ಫಾರ್ಮ್ ಹೌಸ್ ನಲ್ಲಿ ಆಯೋಜಿಸಲಾಗಿದ್ದ ಜನತಾ ಪರ್ವ 1.O ಹಾಗೂ ಮಿಷನ್ 123ಗಾಗಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಕಾರ್ಯಾಗಾರದ ಮೊದಲ ದಿನದ ಅಂತ್ಯದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು.ಪಕ್ಷ ಬಿಡಬೇಕು ಅಂದುಕೊಂಡವರಿಗೆ ಅದೊಂದು ನೆಪ ಅಷ್ಟೇ. ನಾನು ಯಾರನ್ನೂ ಕಡೆಗಣಿಸಿಲ್ಲ. ಜನ ಸಾಮಾನ್ಯರ ಕಷ್ಟವನ್ನೇ ಕೇಳುವವನು ನಾನು. ನಮ್ಮ ಶಾಸಕರ ಕಷ್ಟ ಕೇಳಲ್ವಾ..? ಪಕ್ಷ ಬಿಡಬೇಕು ಅಂದುಕೊಂಡವರು ನೀಡುವ ಸಬೂಬು ಇದು ಅಷ್ಟೆ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.ಪಕ್ಷ ಬಲವಾಗುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಇಂಥ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಮಯ ಇದಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಹೈಟೆಕ್ ತರಬೇತಿ, ವಿನೂತನ ತರಬೇತಿ:

- Advertisement -

ನಾಲ್ಕು ದಿನಗಳ ಕಾರ್ಯಗಾರದಲ್ಲಿ ಪಕ್ಷದ ಸಂಘಟನೆ ಹಾಗೂ ಬೆಳವಣಿಗೆ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ಹಲವಾರು ಆಯಾಮಗಳಲ್ಲಿ ತರಬೇತಿ ಕೊಡುವ ಕಾರ್ಯಕ್ರಮ ಇದಾಗಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಸರ್ಕಾರ ತರಬೇಕಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಕಾರ್ಯಗಾರದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ  ದೇವೇಗೌಡರು ತಮ್ಮ ಸುಧೀರ್ಘ ರಾಜಕೀಯದ ದಾರಿಯ ಬಗ್ಗೆಯೂ ಮಾತನಾಡಿದ್ದಾರೆ. ಇದು ಮುಂದಿನ ಚುನಾವಣೆ ಅಭ್ಯರ್ಥಿಗಳಿಗೆ ದಾರಿದೀಪವಾಗಲಿದೆ. ಅವರು ನಡೆದು ಬಂದ ದಾರಿ ಬಗ್ಗೆ ಹೇಳಿದ್ದಾರೆ ಇಂದು ಅವರು ತಿಳಿಸಿದರು.

ದೇಶದಲ್ಲಿ ಇರುವ ಚುನಾವಣೆ ಪದ್ದತಿ ಬದಲಾಗಿದ್ದು, ಜಾತ್ಯಾತೀತ ಜನತಾದಳಕ್ಕೆ ಇರುವ ಅವಕಾಶಗಳನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳ ನಡವಳಿಕೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಪಕ್ಷದ ಸಂಘಟನೆಗೆ ಹೊಸ ರೀತಿಯಾಗಿ ಸಜ್ಜಾಗುತ್ತಿದ್ದೇವೆ. ಆಧುನಿಕ ಟೆಕ್ನಾಲಜಿಯನ್ನು ಬಳಸಿಕೊಳ್ಳುತ್ತಿದೆ. ಮುಂದಿನ ಚುನಾವಣೆಗೆ ಸಕಲ ರೀತಿಯ ಸಿದ್ದತೆಗಳು ಆಗಿವೆ ಎಂದರು ಹೆಚ್.ಡಿ.ಕುಮಾರಸ್ವಾಮಿ ಅವರು.

ಅಭ್ಯರ್ಥಿಗಳಿಗೆ ಪ್ರಶ್ನಾವಳಿ:ಮೊದಲ ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ  ಅಭ್ಯರ್ಥಿಗಲೆಲ್ಲರಿಗೂ ಪ್ರಶ್ನಾವಳಿಯ ಕಿರು ಹೊತ್ತಿಗೆ ನೀಡಲಾಗಿತ್ತು. ಪ್ರತಿಯೊಬ್ಬರು ಆಸಕ್ತಿಯಿಂದ ಬರೆದಿದ್ದಾರೆ. ಅವರವರ ಕ್ಷೇತ್ರಗಳಿಗೆ ಯಾವ ರೀತಿ ಹೊತ್ತು ಕೊಟ್ಟಿದ್ದಾರೆ. ಅವರಿಗಿರುವ ಅಡೆತಡೆಗಳು ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಉತ್ತರ ನೀಡಿದ್ದಾರೆ. ಒಟ್ಟು 61 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅಭ್ಯರ್ಥಿಗಳಾಗಿ ಏನು ಸಿದ್ದತೆ ಮಾಡಿಕೊಂಡಿದ್ದಾರೆ ಅನ್ನೋದನ್ನು ಅವರು ಬರೆದಿದ್ದಾರೆ ಎಂದು ಕುಮಾರಸ್ವಾಮಿ ಅವರು ವಿವರಿಸಿದರು.

ನಾಳೆಯ ದಿನದ ಕಾರ್ಯಗಾರದಲ್ಲಿ ಪಂಚರತ್ನ  ಕಾರ್ಯಕ್ರಮದ ಬಗ್ಗೆ ಜನತೆ ಮುಂದೆ ತೆಗೆದುಕೊಂಡು ಹೋಗುವುದು ಹೇಗೆ? ಮಿಷನ್ 123 ಪ್ಲಸ್ ಗೆ ಏನು ಮಾಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಕಾರ್ಯಕ್ರಮ ಇರಲಿದೆ ಎಂದು ಅವರು ಹೇಳಿದರು.ಚುನಾವಣೆಗೆ 18 ತಿಂಗಳು ಬಾಕಿ ಇದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಗೆ ಕ್ರಮ ವಹಿಸಲಾಗಿದೆ. ಈ ಸಮಯದಲ್ಲಿ ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡುವೆ ಎಂದು ಹೆಚ್ ಡಿಕೆ ತಿಳಿಸಿದರು.

Join Whatsapp