ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ : ‘ಪದ್ಮಶ್ರೀ’ ಹಾಜಬ್ಬ ಸ್ಪಷ್ಟನೆ

Prasthutha|

ಮಂಗಳೂರು: “ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ. ನನಗೆ ರಾಜಕೀಯ ಆಕಾಂಕ್ಷೆಗಳೂ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನನ್ನ ಊರಿನ ಬಡಮಕ್ಕಳ ಸಲುವಾಗಿ ಕೆಲಸ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ರಾಜಕೀಯ ಕಾರ್ಯಕ್ರಮಗಳಿಗೆ ಕರೆಯಬೇಡಿ” ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ‘ಅಕ್ಷರ ಸಂತ’ ಹಾಜಬ್ಬನವರು ಮನವಿ ಮಾಡಿದ್ದಾರೆ.

- Advertisement -

“ನನಗೆ ಯಾವುದೇ ವಿವಾದಗಳಲ್ಲಿ ಒಳಗೊಳ್ಳಲು ಇಷ್ಟವಿಲ್ಲ. ಆಗಸ್ಟ್ 14 ರಂದು ಬಿಜೆಪಿ ನಾಯಕರೊಬ್ಬರ ಆಹ್ವಾನದ ಮೇರೆಗೆ ಬೆಂಗಳೂರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದು ನಿಜ. ಆದರೆ ಅದು ಸರ್ಕಾರದ ಸ್ವಾತಂತ್ರ್ಯ ಉತ್ಸವದ ಕಾರ್ಯಕ್ರಮ ಎಂದು ತಪ್ಪಾಗಿ ಭಾವಿಸಿ ಹೋಗಿದ್ದೆ. ಅಲ್ಲಿ ಹೋದ ಬಳಿಕ ಪಕ್ಷದ ಕಾರ್ಯಕ್ರಮ ಎಂದು ಗೊತ್ತಾಗಿ ವಾಪಸ್ ಮರಳಿದ್ದೂ ನಿಜ. ದಯವಿಟ್ಟು ಇದನ್ನು ವಿವಾದ ಮಾಡಬೇಡಿ. ನನ್ನ ಸಾಮಾಜಿಕ ಕೆಲಸದಲ್ಲಿ ಎಲ್ಲ ಪಕ್ಷದವರೂ ಸಹಾಯ ಮಾಡಿದ್ದಾರೆ. ಆದರೆ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ” ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

“ನನ್ನ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಎಲ್ಲ ಪಕ್ಷ, ಧರ್ಮಗಳಿಗೆ ಸೇರಿದವರೂ ನೆರವಾಗಿದ್ದಾರೆ. ಮುಂದೆಯೂ ನನಗೆ ಎಲ್ಲರ ಸಹಕಾರ ಬೇಕು. ನಾನು ಒಬ್ಬ ಸಾಮಾನ್ಯ ಮನುಷ್ಯ. ಇನ್ನು ಮುಂದೆಯೂ ಕಿತ್ತಳೆ ಹಾಜಬ್ಬನಾಗಿಯೇ ಉಳಿಯುತ್ತೇನೆ. ದಯವಿಟ್ಟು ಯಾರೂ ನನ್ನನ್ನು ತಪ್ಪು ತಿಳಿಯಬೇಡಿ” ಎಂದು ಅವರು ಮನವಿ ಮಾಡಿದ್ದಾರೆ.

Join Whatsapp