ಪತ್ನಿಯನ್ನು ಕೊಲೆಗೈದು ಬೆಡ್ ಶೀಟ್ ನಲ್ಲಿ ಶವ ಸುತ್ತಿಟ್ಟು ಪತಿ ಪರಾರಿ

Prasthutha|

ಬೆಂಗಳೂರು: ಬೆಡ್ ಶೀಟ್ ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಹೆಬ್ಬಗೋಡಿಯ ತಿರುಪಾಳ್ಯದ ವಿನಾಯಕ ನಗರದ ಬಿಲ್ಡಿಂಗ್ ಒಂದರ ಮೂರನೇ ಮಹಡಿಯಲ್ಲಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

- Advertisement -

ವಿಜಯಪುರ ಮೂಲದ ಶೃತಿ ಅಲಿಯಾಸ್ ಪವಿತ್ರಾ ಬಿರಾದಾರ (24) ಸಾವನ್ನಪ್ಪಿದ ಮಹಿಳೆ. ಅರವಿಂದ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದ ಪವಿತ್ರಾ ಕಳೆದ ನಾಲ್ಕು ವರ್ಷಗಳಿಂದ ತಿರುಪಾಳ್ಯದ ವಿನಾಯಕ ನಗರದಲ್ಲಿ ವಾಸವಾಗಿದ್ದರು.

ಇತ್ತೀಚೆಗೆ ಇಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಪದೇ ಪದೇ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಶೃತಿ ಸಾವಿನ ಬಳಿಕ ಪತಿ ಅರವಿಂದ್ ನಾಪತ್ತೆಯಾಗಿದ್ದು, ಆತನೇ ಹತ್ಯೆಗೈದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಕಳೆದ ಮೂರ್ನಾಲ್ಕು ದಿನಗಳಿಂದ ಅರವಿಂದ್ ಮತ್ತು ಶೃತಿ ಮನೆಯ ಹೊರಗೆ ಕಾಣಿಸಿಕೊಂಡಿರಲಿಲ್ಲ. ನಿನ್ನೆ ಸಂಜೆಯಿಂದಲೇ ಪಕ್ಕದ ಮನೆಯವರಿಗೆ ಕೊಳೆತ ವಾಸನೆ ಬಂದಿದೆ. ಮನೆಯಲ್ಲಿ ಇಲಿ ಅಥವಾ ಹೆಗ್ಗಣ ಸತ್ತಿರಬಹುದು ಎಂದು ತಿಳಿದಿದ್ದರು.

ಕೆಟ್ಟ ವಾಸನೆ ಹೆಚ್ಚಾದಾಗ ಅವರು ಶೃತಿ ಮನೆ ಹತ್ತಿರ ಬಂದಿದ್ದಾರೆ. ಚಿಲಕ ಮಾತ್ರ ಹಾಕಿದ್ದರಿಂದ ಬಾಗಿಲು ತೆಗೆದು ನೋಡಿದಾಗ ಬೆಡ್ ಶೀಟ್ ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಶೃತಿ ಶವ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಾಲ್ಕೈದು ದಿನಗಳ ಹಿಂದೆ ಕೊಲೆ ಮಾಡಿರುವುದರಿಂದ ಶವ ಗುರುತು ಸಿಗದ ಸ್ಥಿತಿಯಲ್ಲಿ ಕೊಳೆತು ಹೋಗಿತ್ತು. ಕೊಲೆ ನಡೆದ ದಿನವೂ ಪತಿ-ಪತ್ನಿ ನಡುವೆ ಜಗಳ ಉಂಟಾಗಿ, ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇತ್ತ ಅರವಿಂದ್ ಫೋನ್ ಸ್ವಿಚ್ಛ್ ಆಫ್ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲನೆ ನಡೆಸಿದ್ದು ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿ ಪರಾರಿಯಾಗಿರುವ ಅರವಿಂದ್ ಬಂಧನಕ್ಕೆ ಬಲೆ ಬೀಸಿದ್ದಾರೆ.



Join Whatsapp