ಹಿಂಡಲಗಾ ಜೈಲಿಗೆ ಗೃಹ ಸಚಿವ ದಿಢೀರ್ ಭೇಟಿ, ಪರಿಶೀಲನೆ

Prasthutha|

ಬೆಳಗಾವಿ: ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಬೆಳಗ್ಗೆ ಹಿಂಡಲಗಾ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ರಕ್ಷಣಾ ವ್ಯವಸ್ಥೆ ಪರಿಶೀಲಿಸಿ, ಕೈದಿಗಳ ಜತೆ ಸಂವಾದ ನಡೆಸಿದರು.

- Advertisement -

ಜೈಲಿನೊಳಗೆ ಮೊಬೈಲ್, ಗಾಂಜಾ ಹಾಗೂ ಮಾದಕ ವಸ್ತುಗಳ ಅಕ್ರಮ ಸರಬರಾಜು ತಡೆಯಲು ಜೈಲು ಸಿಬ್ಬಂದಿ ಕೈಗೊಂಡ ಕ್ರಮಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.

ಕಾರಾಗೃಹಗಳಲ್ಲಿ ಯಾವುದೇ ತರಹದ ಅಕ್ರಮ ಚಟುವಟಿಕೆಗಳಿಗೆ ಇಂಬು ನೀಡುವ ಜೈಲು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ಅವರು ಎಚ್ಚರಿಕೆ ನೀಡಿದರು.

- Advertisement -

  ಬೆಳಗಾವಿಯ ಕೇಂದ್ರ ಕಾರಾಗೃಹ, ಹಿಂಡಲಗಾ ಜೈಲಿಗೆ ಅನಿರೀಕ್ಷಿತ ಭೇಟಿ ನೀಡಿದ ನಂತರ ಜೈಲಿನ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಜೈಲಿನೊಳಗೆ ಅಕ್ರಮವಾಗಿ, ಮೊಬೈಲ್’ಗಳು ಹಾಗೂ  ಮಾದಕ ವಸ್ತುಗಳನ್ನು ಸರಬರಾಜು ತಪ್ಪಿಸಲು ಅತ್ಯಾಧುನಿಕ ತಪಾಸಣಾ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೂ ಕೆಲವು ಬಾರಿ ಸಿಬ್ಬಂದಿ ಕಣ್ಣು ತಪ್ಪಿಸಿ ನಿಷೇಧಿತ ಪದಾರ್ಥಗಳು ಜೈಲಿನೊಳಗೆ ಜಪ್ತಿ ಮಾಡಿರುವುದು ನಡೆದಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದ ಸಚಿವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಕಾರಾಗೃಹ ಭೇಟಿ ಸಮಯದಲ್ಲಿ ಸಚಿವರು, ಸಜಾ ಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳ ಜತೆ ಸಂಭಾಷಣೆ ನಡೆಸಿದರು ಹಾಗೂ ಮನವಿ ಪತ್ರ ಸ್ವೀಕರಿಸಿದರು.

ಜೈಲಿನ ಒಳಗಿರುವ ಟೈಲರಿಂಗ್ ಘಟಕ ಹಾಗೂ ಮರಗೆಲಸ ಘಟಕಗಳಿಗೆ ಭೇಟಿ ನೀಡಿದ ಸಚಿವರು, ಆಧುನಿಕ  ಉಪಕರಣಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅತಿ ಭದ್ರತಾ ಸೆಲ್’ಗಳು, ಆಸ್ಪತ್ರೆ ಹಾಗೂ ಕೈದಿಗಳೇ ನಿರ್ವಹಿಸುತ್ತಿರುವ ಎಫ್ ಎಂ ಸ್ಟೇಷನ್ , ಅಡುಗೆ ಮನೆ ಹಾಗೂ ಇನ್ನಿತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಕಾರಾಗೃಹದ ಪ್ರಾರ್ಥನಾ ಮಂದಿರದಲ್ಲಿ ಇರುವ ಸಾವರ್ಕರ್ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು.

Join Whatsapp