ಹರ್ಯಾಣದಲ್ಲಿ  ಗೃಹ ಸಚಿವರ 2 ದಿನಗಳ ಸಮಾವೇಶ: ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ಕುರಿತು ಚರ್ಚೆ

Prasthutha|

ಬೆಂಗಳೂರು: ಅಖಿಲ ಭಾರತ ಗೃಹ ಸಚಿವರ ಸಮ್ಮೇಳನವು ಹರಿಯಾಣದ  ಸೂರಜ್ ಕುಂಡ್ ನಲ್ಲಿ ಅ.27-28ರಂದು ನಡೆಯಲಿದ್ದು, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ಕುರಿತಂತೆ ಗಂಭೀರ ಚರ್ಚೆ ನಡೆಯಲಿದೆ.

- Advertisement -

ಆಂತರಿಕ ಭದ್ರತೆ, ಸೈಬರ್ ಅಪರಾಧಗಳು ಮತ್ತು ನಿಯಂತ್ರಣ, ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಈ  ಸಮ್ಮೇಳನ ನಡೆಯಲಿದ್ದು, ರಾಜ್ಯದ ಗೃಹಸಚಿವ ಆರಗ ಜ್ಞಾನೇಂದ್ರ  ಪಾಲ್ಗೊಳ್ಳಲಿದ್ದಾರೆ.

- Advertisement -

ರಾಜ್ಯದಲ್ಲಿ ಅಪರಾಧಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ವೈಜ್ಞಾನಿಕ ಕ್ರಮಗಳು, ತನಿಖೆ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ  ಬಗ್ಗೆ  ಸಮ್ಮೇಳನದಲ್ಲಿ  ರಾಜ್ಯದಿಂದ ವಿಷಯ ಮಂಡನೆ ಮಾಡಲಾಗುವುದು.

ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರೂ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯ ಪೊಲೀಸ್ ಮುಖ್ಯಸ್ಥ  ಪ್ರವೀಣ್ ಸೂದ್ , ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ, ಅಪರಾಧ ಚಟುವಟಿಕೆಗಳ ನಿಯಂತ್ರಣ, ಅಪರಾಧ ಪತ್ತೆ, ಸೈಬರ್ ಕ್ರೈಂ ಮುಂತಾದ ವಿಷಯಗಳ ಬಗ್ಗೆ ತೆಗೆದುಕೊಂಡ ಕ್ರಮಗಳನ್ನು ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

 ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧಿಗಳು ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳದಂತೆ ಕ್ರಮ ಕೈಗೊಳ್ಳುವುದೂ ಸೇರಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ವಿಶೇಷ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ದೇಶದಲ್ಲಿಯೇ ಪ್ರಥಮ ಬಾರಿಗೆ, ಕರ್ನಾಟಕ ಸರಕಾರ ಅಪರಾಧ ಸ್ಥಳ ಪರಿವೀಕ್ಷಣಾ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದು, ವೈಜ್ಞಾನಿಕವಾಗಿ ಸಾಕ್ಷ್ಯ ಸಂಗ್ರಹ, ಸಾಕ್ಷ್ಯ ಸಂರಕ್ಷಣೆ ಹಾಗೂ ನ್ಯಾಯಾಲಯಕ್ಕೆ ಸಲ್ಲಿಕೆ ಪ್ರಕ್ರಿಯೆಗಳನ್ನು  ನಡೆಸಲು ವಿಶೇಷ ತರಬೇತಿ  ನೀಡಲಾಗಿದೆ. ಮಾದಕ ವಸ್ತುಗಳ ವಿರುದ್ಧ ರಾಜ್ಯದಲ್ಲಿ ಅಭಿಯಾನದ ರೂಪದಲ್ಲಿ ಕಠಿಣ ಕ್ರಮ ಕೈಗೊಂಡಿದ್ದು, ಯುವ ಪೀಳಿಗೆ ಮಾದಕ ವಸ್ತುಗಳ ಜಾಲಕ್ಕೆ ಬೀಳದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Join Whatsapp