ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಮ್ ಕೈದಿಗಳು ಹೊಡೆದಾಡಿ ಸಾಯಲಿ: ಸದನದಲ್ಲಿ ಶಾಸಕ ಯು.ಟಿ.ಖಾದರ್ ಹೇಳಿಕೆ

Prasthutha|

ಬೆಂಗಳೂರು: ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್ ಗಳಿವೆ. ಒಂದು ಸೆಲ್ ನಲ್ಲಿ ಹಿಂದೂ ಕೈದಿಗಳು, ಮತ್ತೊಂದು ಸೆಲ್ ನಲ್ಲಿ ಮುಸ್ಲಿಂ ಕೈದಿಗಳಿದ್ದಾರೆ. ಜೈಲಿನಲ್ಲೂ ಕೂಡ ತಾರತಮ್ಯ ನಡೆಯುತ್ತಿದೆ. ಇದನ್ನು ನಿಲ್ಲಿಸಿ, ಎಲ್ಲರನ್ನೂ ಒಟ್ಟಿಗೆ ಹಾಕಿ ಅಲ್ಲಿ ಅವರು ಹೊಡೆದಾಡಿ ಸಾಯಲಿ ಎಂದು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.

- Advertisement -

ವಿಧಾನಸಭೆಯಲ್ಲಿ ಶುಕ್ರವಾರ ಮಂಗಳೂರು ಜೈಲಿನ ಬಗ್ಗೆ ಪ್ರಸ್ತಾಪಿಸಿದ ಅವರು, ಜೈಲಿನಲ್ಲಿ ನೀವು ಈ ರೀತಿ ಮಾಡಿದರೆ, ಅವರು ಹೊರಗೆ ಬಂದು ಏನು ಮಾಡುತ್ತಾರೆ, ಅದೇ ಮೆಂಟಾಲಿಟಿ ಇಟ್ಟುಕೊಂಡು ಬಂದು ಹೊರಗೂ ಅದೇ ಮಾಡುತ್ತಾರೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅಲ್ಲದೆ, ಕ್ರಿಮಿನಲ್ ಭೇಟಿ ಮಾಡುವ ವಿಸಿಟರ್ ಗಳ ಮೇಲೆ ನಿಗಾ ವಹಿಸಲು ಕ್ರಮ ಜರುಗಿಸಿ ಎಂದು ತಿಳಿಸಿದ್ದಾರೆ.

ಪೊಲೀಸ್ ಬಂಧೀಖಾನೆ ಮಂಡಳಿ ವಿಧೇಯಕ ಕುರಿತು ಮಾತನಾಡಿದ ಯು.ಟಿ.ಖಾದರ್, ಗಲಾಟೆ ಮಾಡುವವರಿಗೆ ಎಲ್ಲಾ ಸೌಲಭ್ಯ ಸಿಗುತ್ತಿವೆ. ಜೈಲಿನಲ್ಲಿ ಬೇಕಾದಷ್ಟು ಸೌಲಭ್ಯಗಳಿರುತ್ತವೆ. ಅವರನ್ನು ರಕ್ಷಿಸಲು ರಾಜಕಾರಣಿಗಳೂ ಇದ್ದಾರೆ. ಬಿಡಿಸಿಕೊಂಡು ಬರಲು ಲಾಯರ್ ಸಿಗುತ್ತಾರೆ. ಉತ್ತಮ ಕೆಲಸ ಮಾಡುವವರಿಗೆ ಯಾರ ಬೆಂಬಲ ಕೂಡ ಸಿಗುವುದಿಲ್ಲ. ಇಂತಹ ಪರಿಸ್ಥಿತಿ ಸಮಾಜದಲ್ಲಿದೆ. ಇದರ ಬಗ್ಗೆ ನಾವು ಗಮನಹರಿಸಬೇಕಿದೆ. ವಿಧೇಯಕವನ್ನು ಆದಷ್ಟು ಕಠಿಣಗೊಳಿಸಬೇಕು ಎಂದು ಖಾದರ್ ಒತ್ತಾಯಿಸಿದರು.

- Advertisement -

ಇನ್ನು ಕೆಲವರು ಜೈಲಿಗೆ ಹೋಗಿ ಪಿ ಎಚ್ ಡಿ ತೆಗೆದುಕೊಂಡು ಬರುತ್ತಾರೆ. ಮೊದಲ ಸಲ ಜೈಲಿಗೆ ಹೋಗುವವರನ್ನು ಆಸ್ಪತ್ರೆಗೆ ಕಳುಹಿಸಿ ಅಲ್ಲಿ ಮನ ಪರಿವರ್ತನೆ ಮಾಡಬೇಕು. ಆದರೆ ನಾವು ಮೊದಲ ಸಲ ತಪ್ಪು ಮಾಡಿದವರನ್ನು ದೊಡ್ಡ ಜೈಲಿಗೆ ಕಳುಹಿಸಿದರೆ ಅವರಿಗೆ ಕ್ರಿಮಿನಲ್ ಗಳ ಪರಿಚಯ ಆಗುತ್ತದೆ. ಸಣ್ಣ ತಪ್ಪಿಗೆ ಜೈಲ್ ಗೆ ಹೋದವ ಕ್ರಿಮಿನಲ್ ಆಗಿ ಹೊರಬರುತ್ತಾರೆ.  ನಾವೆಲ್ಲ ವಿದೇಶಕ್ಕೆ ಹೋಗಿ ಸರ್ಟಿಫಿಕೇಟ್ ತಂದ ಮಾದರಿಯಲ್ಲಿ ಈಗಿನ ಕ್ರಿಮಿನಲ್ ಗಳು ಜೈಲಿಗೆ ಹೋಗಿ ಪಿ ಎಚ್ ಡಿ ಸರ್ಟಿಫಿಕೇಟ್ ತೆಗೆದುಕೊಂಡು ಹೊರಗೆ ಬರುತ್ತಾರೆ ಎಂದು ಹೇಳಿದರು.

ಹಾಗಾಗಿ ಜೈಲಿನಲ್ಲಿ ಎಲ್ಲ‌ ಸೌಲಭ್ಯ ಸಿಗಬಾರದು. ಒಂದು ಸಾರಿ ಜೈಲಿಗೆ ಹೋದರೆ ಮತ್ತೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬಂಧೀಖಾನೆ ತಿದ್ದುಪಡಿ ಬಗ್ಗೆ ಖಾದರ್ ಆಕ್ಷೇಪ ವ್ಯಕ್ತಪಡಿಸಿದರು.

ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್ ಗಳಿವೆ. ಒಂದು ಸೆಲ್ ನಲ್ಲಿ ಹಿಂದೂ ಕೈದಿಗಳಿದ್ದರೆ ಮತ್ತೊಂದು ಸೆಲ್ ನಲ್ಲಿ ಮುಸ್ಲಿಂ ಕೈದಿಗಳಿದ್ದಾರೆ. ಈ ತಾರತಮ್ಯ ಜೈಲಿನಲ್ಲೂ ನಡೆಯುತ್ತಿದೆ. ಇದನ್ನ ನಿಲ್ಲಿಸಿ, ಎಲ್ಲರನ್ನು ಮಿಕ್ಸ್ ಮಾಡಿ ಹಾಕಬೇಕು ಎಂದು ಸರ್ಕಾರಕ್ಕೆ ಶಾಸಕ ಯು ಟಿ ಖಾದರ್ ಸಲಹೆ ನೀಡಿದರು.

ಹಿಂದೂ, ಮುಸ್ಲಿಂ ಖೈದಿಗಳನ್ನು ಒಂದೇ ಸೆಲ್ ಗೆ ಹಾಕಬೇಕು. ಅವರನ್ನು ಯಾಕೆ ಬೇರೆ ಬೇರೆ ಸೆಲ್ ಗೆ ಕಳುಹಿಸಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಮಂಗಳೂರಲ್ಲಿ ಈ ರೀತಿಯ ಸಮಸ್ಯೆ ಉಂಟಾಗಿದೆ. ಜೈಲಿನಲ್ಲಿ ನೀವು ಈ ರೀತಿ ಮಾಡಿದರೆ ಅವರು ಹೊರಗೆ ಬಂದು ಏನ್ ಮಾಡುತ್ತಾರೆ..? ಅದೇ ಮೆಂಟಾಲಿಟಿ ಇಟ್ಟುಕೊಂಡು ಬಂದು ಹೊರಗೂ ಬಂದು ಅದೇ ಕೆಲಸ ಮಾಡುತ್ತಾರೆ. ಅವರನ್ನು ಅಲ್ಲೇ ಒಟ್ಟಿಗೆ ಹಾಕಿ, ಅಲ್ಲಿ ಅವರು  ಹೊಡೆದುಕೊಂಡು ಸಾಯಲಿ ಎಂದು ಖಾದರ್ ಹೇಳಿದರು.

ಅವರು ಜೈಲಿನಿಂದ ಹೊರಗೆ ಬಂದು ಗಲಾಟೆ ಮಾಡುವುದು ಬೇಡ. ಅವರು ಹೊರಗೆ ಬಂದರೆ ಅದನ್ನೇ ಮುಂದುವರಿಸುತ್ತಾರೆ. ಕ್ರಿಮಿನಲ್ ಭೇಟಿ ಮಾಡುವ ವಿಸಿಟರ್ ಗಳ ಮೇಲೆ ನಿಗಾ ವಹಿಸಲು ಕ್ರಮ ವಹಿಸಿಬೇಕು ಎಂದು ಸರ್ಕಾರಕ್ಕೆ ಶಾಸಕ ಖಾದರ್ ಸಲಹೆ ನೀಡಿದರು.

Join Whatsapp