ಉಡುಪಿ: ಪ್ರಾರ್ಥನಾ ಕೇಂದ್ರದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ದಾಳಿ; ಉದ್ವಿಗ್ನ ಸ್ಥಿತಿ

Prasthutha|

ಉಡುಪಿ: ಪ್ರಾರ್ಥನಾ ಮಂದಿರದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಕಾರ್ಕಳದ ಕುಕ್ಕುಂದೂರು ಗ್ರಾಮದ ನಕ್ರೆ ಆನಂದಿ ಮೈದಾನದಲ್ಲಿ ನಡೆದಿದೆ. ಪ್ರಗತಿ ಸೆಂಟರ್ ಎಂಬ ಕಟ್ಟಡವೊಂದರಲ್ಲಿ ಪ್ರಾರ್ಥನಾ ನಿರತರಾಗಿದ್ದವರ ಮೇಲೆ ಏಕಾಏಕಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿದ್ದು, ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಕ್ಕೆ ಕಾರಣವಾಯಿತು.

- Advertisement -

ಸುಮಾರು 50ಕ್ಕೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳನ್ನ ಸೇರಿಸಿ ಬೆನೆಡಿಕ್ಟ್ ಎಂಬವರ ನೇತೃತ್ವದಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸಿದ್ದಾರೆ.

ದಾಳಿಯ ಸಂದರ್ಭ ಪ್ರಾರ್ಥನಾ ನಿರತರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿ ಪ್ರಾರ್ಥನಾ ನಿರತರಾಗಿದ್ದಕ್ಕಾಗಿ ಸಂಸ್ಥೆಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ದಾಳಿ ನಡೆಸಿದ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಪ್ರಾರ್ಥನಾ ನಿರತರು ದೂರಿದ್ದಾರೆ. ಪ್ರಗತಿ ಸೆಂಟರ್ ನಲ್ಲಿ ಹಿಂದೂಗಳನ್ನು ಸೇರಿಸಿ ಕ್ರೈಸ್ತ ಮಿಷನರಿಗಳು ಪ್ರಾರ್ಥನೆ ನಡೆಸುತ್ತಿದ್ದು, ಇದೊಂದು ಮತಾಂತರದ ಷಡ್ಯಂತ್ರವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.

Join Whatsapp