ಮಸೀದಿ ಧ್ವಂಸದ ಕುರಿತು ವರದಿ ಮಾಡಿದ್ದ ಪತ್ರಕರ್ತರ ವಿರುದ್ಧ ಎಫ್ಐಆರ್: ಪ್ರತಿಕ್ರಿಯೆ ನೀಡುವಂತೆ ಯುಪಿ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Prasthutha|

ಲಕ್ನೋ: ಗರೀಬ್ ನವಾಝ್ ಮಸ್ಜಿದ್ ಧ್ವಂಸ ಪ್ರಕರಣದ ಬಗ್ಗೆ ವರದಿ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ಉತ್ತರ ಪ್ರದೇಶ ಸರ್ಕಾರ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ “ದಿ ವೈರ್” ಪತ್ರಕರ್ತರಾದ ಸಿರಾಜ್ ಅಲಿ ಮತ್ತು ಮುಕುಲ್ ಸಿಂಗ್ ಚೌಹಾಣ್ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಗುರುವಾರ ಯುಪಿ ಸರ್ಕಾರಕ್ಕೆ ಸೂಚನೆ ನೀಡಿದೆ.

- Advertisement -


ಉತ್ತರ ಪ್ರದೇಶದ ಬಾರಬಂಕಿಯ ಗರೀಬ್ ನವಾಝ್ ಮಸ್ಜಿದ್ ಅಕ್ರಮ ಧ್ವಂಸ ಕುರಿತು ಈ ಇಬ್ಬರು ಪತ್ರಕರ್ತರು ವರದಿ ಮಾಡಿದ್ದರು. ಈ ಕಾರಣ ಮುಂದಿಟ್ಟು ಇವರಿಬ್ಬರ ಮೇಲೆ ಐಪಿಸಿ ಸೆಕ್ಷನ್ 153, 153-ಎ, 505 (1) (ಬಿ), 120 ಬಿ, 34 ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು.


ನ್ಯಾಯಮೂರ್ತಿಗಳಾದ ರಮೇಶ್ ಸಿಂಗ್ ಮತ್ತು ಸರೋಜ್ ಯಾದವ್ ನೇತೃತ್ವದ ಪೀಠ, ಈ ಅರ್ಜಿಯ ಬಗ್ಗೆ ಅಕ್ಟೋಬರ್ 21ರಂದು ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ. ಎಫ್ಐಆರ್ ನಲ್ಲಿ ಈ ಇಬ್ಬರು ಪತ್ರಕರ್ತರಲ್ಲದೆ ಮಸೀದಿ ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ಅನೀಸ್, ಸ್ಥಳೀಯ ನಿವಾಸಿ ಮುಹಮ್ಮದ್ ನಯೀಮ್ ಹೆಸರು ಸೇರಿಸಲಾಗಿದೆ. ಮಹೇಂದ್ರ ಸಿಂಗ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

Join Whatsapp