ಶಿರಾಡಿ ಘಾಟ್ ನಲ್ಲಿ ರಾತ್ರಿ ವೇಳೆ ಲಾರಿ ಸೇರಿದಂತೆ ಬೃಹತ್ ವಾಹನಗಳ ಸಂಚಾರ ನಿಷೇಧ

Prasthutha|

ಮಂಗಳೂರು/ಹಾಸನ: ಭಾರೀ ಮಳೆಯಿಂದ ಭೂ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ರಸ್ತೆಯ ಶಿರಾಡಿ ಘಾಟ್ ರಸ್ತೆಯಲ್ಲಿ ಜುಲೈ 14ರಿಂದ ಮುಂದಿನ ಆದೇಶದವರೆಗೆ ಎಲ್ಲಾ ಸರ್ಕಾರಿ, ಖಾಸಗಿ ಬಸ್, ಕಾರು, ಜೀಪು, ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ರಾತ್ರಿ ಸಂಚಾರ ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.

- Advertisement -

ಶಿರಾಡಿ ಘಾಟ್ ನ ದೋಣಿಗಾಲ್-ಹೆಗ್ಗದ್ದೆವರೆಗಿನ ರಸ್ತೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ದೃಷ್ಟಿಯಿಂದ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಬೃಹತ್ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಈ ಸಂದರ್ಭದಲ್ಲಿ ವಾಹನಗಳು ಹಾಸನ-ಅರಕಲಗೂಡು-ಕುಶಾಲನಗರ-ಸಂಪಾಜೆ ಮಾರ್ಗದ ಮೂಲಕ ಹಾಗೂ ಹಾಸನ-ಬೇಲೂರು-ಮೂಡುಗೆರೆ ಚಾರ್ಮಾಡಿ ಘಾಟ್ ಮಾರ್ಗದ ಮೂಲಕ ಮಂಗಳೂರು ತಲುಪಬಹುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Join Whatsapp