ಅತ್ಯಾಚಾರಕ್ಕೆ ಯತ್ನಿಸಿದ್ದೇನೆ ಎಂಬುದು ಸುಳ್ಳು: ಆರೋಪ ತಳ್ಳಿಹಾಕಿದ ಕೆಜಿಎಫ್‌ ಬಾಬು

Prasthutha|

ಬೆಂಗಳೂರು: ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೇನೆ ಎಂಬುದು ಸುಳ್ಳು ಎಂದು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯುಸೂಫ್‌ ಷರೀಫ್‌ (ಕೆಜಿಎಫ್‌ ಬಾಬು) ತನ್ನ ಮೇಲಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.

- Advertisement -


ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಇಬ್ಬರು ಪತ್ನಿಯರು ಮತ್ತು ಮಕ್ಕಳ ಜತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿರುದ್ಧ ಸಚಿವ ಎಸ್.ಟಿ.ಸೋಮಶೇಖರ್‌ ಅಪಪ್ರಚಾರ ನಡೆಸಿದ್ದಾರೆ . ‘ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೇನೆ ಎಂಬುದು ಸುಳ್ಳು. ಬಿಲ್ಡರ್‌ ನವೀದ್‌ ಎಂಬುವನ ಚಿತಾವಣೆಯಿಂದ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಾರೆ’ ಎಂದರು.


‘ನನಗೆ ಪತ್ನಿ ಮತ್ತು ನನ್ನ ಮಗಳು ಎಂದರೆ ಪ್ರಾಣ. ನವೀದ್‌ ₹300 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದ. ಆದರೆ ಆತ ₹6 ಲಕ್ಷ ಕೊಟ್ಟು ಉಳಿದ ಹಣವನ್ನು ಕೊಡದೇ ಮೋಸ ಮಾಡಿದ್ದ. ಈ ಸಂಬಂಧ ನಮ್ಮಿಬ್ಬರ ಮಧ್ಯೆ ಮನಸ್ತಾಪವಾಗಿತ್ತು. ಆತ ನನ್ನ ಹೆಂಡತಿಯ ಬ್ರೈನ್‌ವಾಶ್‌ ಮಾಡಿ, ಹೆಂಡತಿ ಮತ್ತು ಮಗಳನ್ನು ಅಪಹರಣ ಮಾಡಿದ್ದ’ ಎಂದು ಹೇಳಿದರು.

- Advertisement -


‘ಹೆಂಡತಿ ಮತ್ತು ಮಗಳನ್ನು ಮೈಸೂರು, ಬೆಂಗಳೂರು, ತಮಿಳುನಾಡಿನಲ್ಲಿ ಸುಮಾರು ಆರು ತಿಂಗಳು ಬಚ್ಚಿಟ್ಟಿದ್ದ. ನನ್ನ ಹಣವನ್ನು ಹೊಡೆಯಲು ಈ ಕೃತ್ಯ ಮಾಡಿದ್ದ. ನನ್ನ ಮೇಲೆ ಕೌಟುಂಬಿಕ ದೌರ್ಜನ್ಯ ಕೇಸ್‌ ಹಾಕಿಸಿದರು. ₹1,000 ಕೋಟಿ ಪರಿಹಾರ ಕೇಳಿದರು. ಹೆಂಡತಿಗೆ ಬುದ್ದಿವಾದ ಹೇಳಿದೆ. ಬಳಿಕ ಹೆಂಡತಿ ಪ್ರಕರಣವನ್ನು ಹಿಂದಕ್ಕೆ ಪಡೆದಳು. ಇವೆಲ್ಲ ಮಾಡಿಸಿದ್ದು ನವೀದ್‌’ ಎಂದು ಯುಸೂಫ್‌ ಕಣ್ಣೀರು ಹಾಕಿದರು.


ಯುಸೂಫ್ ಪುತ್ರಿ ಮಾತನಾಡಿ, ‘ನನ್ನ ತಂದೆಯ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನಮ್ಮ ತಂದೆ ತುಂಬಾ ಒಳ್ಳೆಯವರು. ಅತ್ಯಾಚಾರಕ್ಕೆ ಯತ್ನಿಸಿದರು ಎಂಬ ಆರೋಪದಿಂದ ನೋವಾಗಿದೆ. ಸಚಿವರು ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ತಿಳಿಸಿದರು.

Join Whatsapp