ಜಾಮೀನು ರದ್ದುಗೊಳಿಸಲು ಕೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾದ ಬೆನ್ನಲ್ಲೇ ಹ್ಯಾಕರ್ ಶ್ರೀಕಿ ಹಾಜರು

Prasthutha|

ಬೆಂಗಳೂರು: ಖಾಸಗಿ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜಾಮೀನಿನ ಮೇರೆಗೆ ಬಿಡುಗಡೆಯಾಗಿ ನಾಪತ್ತೆಯಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಒಂದು ತಿಂಗಳ ಬಳಿಕ ಪೊಲೀಸರ ಮುಂದೆ ಪ್ರತ್ಯಕ್ಷನಾಗಿದ್ದಾನೆ.ಕಳೆದ ತಿಂಗಳು ಖಾಸಗಿ ಹೋಟೆಲ್ ನಲ್ಲಿ ತಂಗಿದ್ದ ಶ್ರೀಕಿ ಕ್ಷುಲ್ಲಕ ಕಾರಣಕ್ಕಾಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಸಂಬಂಧ ಜೀವನ ಭೀಮಾನಗರ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

- Advertisement -

ನಂತರ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಬಿಟ್ ಕಾಯಿನ್ ದಂಧೆಯ ಕಿಂಗ್ ಪಿನ್ ಶ್ರೀಕಿ ಪ್ರತಿ 15 ದಿನಕ್ಕೊಮ್ಮೆ ಠಾಣೆಗೆ ಬಂದು ಸಹಿ ಹಾಕಿ ಹೋಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಒಂದು ತಿಂಗಳು ಕಳೆದರೂ ಆತ ಪತ್ತೆಯಾಗಿರಲಿಲ್ಲ. ಆತನ ಮನೆಗೆ ಭದ್ರತೆ ಕೈಗೊಳ್ಳಲು ಪೊಲೀಸರು ಹೋದಾಗ ಆತ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.

ಅಲ್ಲಿಂದ ವಿಚಾರಣೆಗೆ ಪೊಲೀಸರ ಮುಂದೆ ಹಾಜರಾಗಿರಲಿಲ್ಲ. ಎರಡು ಬಾರಿ ಗೈರು ಹಾಜರಾದ ಕಾರಣ ಪೊಲೀಸರು ಜಾಮೀನು ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಂತೆ ನಿನ್ನೆ ಪೊಲೀಸರ ಮುಂದೆ ಮತ್ತೆ ಶ್ರೀಕಿ ಪ್ರತ್ಯಕ್ಷನಾಗಿದ್ದಾನೆ.ವಿಚಾರಣೆ ಹಾಜರಾದ ಶ್ರೀಕಿಯಿಂದ ಮಾಹಿತಿಯನ್ನು ಪಡೆದು ಸಹಿ ಹಾಕಿಸಿಕೊಂಡು ಮತ್ತೆ ಜ. 4 ರಂದು ಬರುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Join Whatsapp