ಯಾರದೋ ಮಗುವಿಗೆ ಅಪ್ಪನಾಗೋದು ಬೇಡ | ಪ್ರತಾಪ್ ಸಿಂಹ ವಿರುದ್ಧ ವ್ಯಂಗ್ಯವಾಡಿದ ಹೆಚ್. ವಿಶ್ವನಾಥ್

Prasthutha|

ಮೈಸೂರು : ಸಂಸದ ಪ್ರತಾಪ್ ಸಿಂಹ ಮೈಸೂರು-ಬೆಂಗಳೂರು ದಶಪಥ ಯೋಜನೆ ನಾನೇ ಮಾಡಿದ್ದು, ನಾನೇ ಕಟ್ಟಿದ್ದು ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾದ್ಯಮಗಳಲ್ಲಿ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಇದು ತಪ್ಪು ಎಂದು ತಮ್ಮದೇ ಪಕ್ಷದ ಸಂಸದ ಪ್ರತಾಪ್ ಸಿಂಹ ಅವರಿಗೆ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಸಂಸದನಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ಡಿಆರ್‌ಡಿಪಿ ಸಿದ್ದವಾಗಿತ್ತು. ಅಂದು ತಯಾರಾಗಿದ್ದ ಯೋಜನೆ ಇಂದು ಕಾರ್ಯರೂಪಕ್ಕೆ ಬಂದಿದೆ. ನೀನು ಈಗ ಬಂದು ಎಲ್ಲವನ್ನೂ ನಾನೇ ಮಾಡಿದ್ದು ಎಂದರೆ ಹೇಗೆ” ಎಂದು ಪ್ರಶ್ನಿಸಿದ್ದಾರೆ.

“ಮೊನ್ನೆ ಮೊನ್ನೆ ಹೊಸದಾಗಿ ಬಂದವರು ಈ ಯೋಜನೆಯನ್ನು ನಾನು ಜಾರಿಗೆ ತಂದೆ ಎಂದು ಹೇಳುವುದು ಸರಿಯಲ್ಲ. ಸಂಸದರಾಗಿ ನೀವು ಏನು ಮಾಡಿದ್ದೀರಿ ಎನ್ನುವುದನ್ನು ಜನರ ಮುಂದೆ ಹೇಳಿ. ಅದು ಬಿಟ್ಟು ಎಲ್ಲವನ್ನು ನಾನೇ ಮಾಡಿದ್ದೇನೆ ಎಂದು ಹೇಳುವುದು ಸರಿಯಲ್ಲ. ಬೇರೆಯವರು ಹೆತ್ತು, ಹೊತ್ತು ಬೆಳೆಸಿದ ಮಗುವೊಂದು ಶಾಲೆಗೆ ಹೋಗುವ ವೇಳೆ, ಆ ಮಗು ನನ್ನದು ಎಂದರೆ ಹೇಗೆ?” ಎಂದು ವ್ಯಂಗ್ಯವಾಡಿದ್ದಾರೆ.

- Advertisement -

“ಇನ್ನು ದಶಪಥ ವಿಚಾರದ ಬಗ್ಗೆ ಮಂಡ್ಯದ ಸಂಸದೆ ಸುಮಲತಾ ಅವರು ಹೇಳಿದ್ದು ಸರಿಯಾಗಿಯೇ ಇದೆ. ಇದು 10-12 ವರ್ಷಗಳಷ್ಟು ಹಿಂದಿನ ಯೋಜನೆ. ಇದನ್ನು ನಾನೇ ಮಾಡಿದ್ದು ಎಂದು ಎಷ್ಟು ದಿನ ಸುಳ್ಳು ಹೇಳುತ್ತೀರಾ ? ಸುಳ್ಳುಗಳನ್ನೆ ಬಂಡವಾಳ ಮಾಡಿ ಜನರನ್ನು ವಂಚಿಸಬೇಡಿ, ನೀವು ಏನಾದರೂ ಹೊಸ ಯೋಜನೆ ತಂದಿದ್ದರೆ” ಹೇಳಿ ಎಂದಿದ್ದಾರೆ.

Join Whatsapp