ಗುಜರಾತ್ ನಲ್ಲಿ ಗೆಲುವಿನ ಸಂಭ್ರಮ; ಸುದ್ದಿಯಾಗದ ಉಪಚುನಾವಣೆ ಫಲಿತಾಂಶ

Prasthutha|

ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಯ ಚುನಾವಣೆಯ ಫಲಿತಾಂಶದಂದೇ ಐದು ರಾಜ್ಯಗಳ 6 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯೂ ನಡೆದಿದೆ.

- Advertisement -

ಗುಜರಾತ್ ನಲ್ಲಿ ಭರ್ಜರಿ 156 ಸ್ಥಾನಗಳನ್ನು ಗೆದ್ದು ಸಂಭ್ರಮಿಸುತ್ತಿರುವ ಬಿಜೆಪಿಯು, ಐದು ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದೆ. ಉಪಚುನಾವಣೆಯ ಫಲಿತಾಂಶವು ಬಿಜೆಪಿಗೆ ದೊಡ್ಡ ಪೆಟ್ಟು ಕೊಡುವುದಿಲ್ಲವಾದರೂ, ಬಿಹಾರ, ಉತ್ತರ ಪ್ರದೇಶದ ತಲಾ ಒಂದೊಂದು ಕ್ಷೇತ್ರ ಹೊರತುಪಡಿಸಿ ಇತರ ಕಡೆ ಮತದಾರರು ಬಿಜೆಪಿಗೆ ಬೆಂಬಲ ನೀಡಿಲ್ಲ.

ಉತ್ತರ ಪ್ರದೇಶದ ಮೈನ್ಪುರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಪತ್ನಿ  ಡಿಂಪಲ್ ಯಾದವ್, ತನ್ನ ಪ್ರತಿಸ್ಪರ್ಧಿ ಬಿಜೆಪಿ ರಘುರಾಜ್ ಸಿಂಗ್ ಶಕ್ಯಾ ವಿರುದ್ಧ 2,88,461 ದಾಖಲೆ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

- Advertisement -

ಛತ್ತೀಸ್ ಘಡದ ಭಾನುಪ್ರತಾಪ್ಪುರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೋಜ್ ಮಾಂಡವಿ ಗೆಲುವು ದಾಖಲಿಸಿದ್ದು,  ಬಿಜೆಪಿಯ ಬ್ರಹ್ಮಾನಂದ ನೇತಮ್ ಅವರನ್ನು 21,171 ಮತಗಳ ಅಂತರದಿಂದ ಸೋಲಿಸಿದ್ದಾರೆ.

ರಾಜಸ್ಥಾನದ ಸರ್ದಾರ್ ಶಹರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಶರ್ಮಾ 91,357 ಮತಗಳನ್ನು ಗಳಿಸಿ, 25852 ಮತಗಳ ಅಂತರದಿಂದ ಬಿಜೆಪಿಯ ಅಶೋಕ್ ಕುಮಾರ್ ಅವರನ್ನು ಸೋಲಿಸಿದ್ದಾರೆ.

ಕುರ್ಹಾನಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿಯ ಕೇದಾರ್ ಪ್ರಸಾದ್ ಗುಪ್ತಾ ಅವರು ಜನತಾ ದಳದ (ಯುನೈಟೆಡ್) ಮನೋಜ್ ಸಿಂಗ್ ಅವರನ್ನು 3,649 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಒಡಿಶಾದ ಪದಂಪುರ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜು ಜನತಾ ದಳದ ಅಭ್ಯರ್ಥಿ(ಬಿಜೆಡಿ) ಬರ್ಶಾ ಸಿಂಗ್ ಬರಿಹಾ, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಪ್ರದೀಪ್ ಪುರೋಹಿತ್ ವಿರುದ್ಧ ಜಯಗಳಿಸಿದ್ದಾರೆ. ಗೆಲುವಿನ ಅಂತರ 42,679 ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಆದಿತ್ಯನಾಥ್ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಕತೌಲಿ ಮತ್ತು ರಾಂಪುರ್ ಕ್ಷೇತ್ರಕ್ಕೆ ಇಲ್ಲಿ ಚುನಾವಣೆ ನಡೆಸಲಾಗಿತ್ತು. ಇದರಲ್ಲಿ ಕತೌಲಿ ರಾಷ್ಟ್ರೀಯ ಲೋಕ ದಳ(ಆರ್ ಎಲ್ ಡಿ) ಪಾಲಾದರೆ, ರಾಂಪುರ್ ಬಿಜೆಪಿಗೆ ದಕ್ಕಿದೆ.

ಕತೌಲಿಯಲ್ಲಿ ಆರ್ ಎಲ್ ಡಿಯಿಂದ ಸ್ಪರ್ಧಿಸಿದ್ದ ಮದನ್ ಬಾಯಿ 22,143 ಮತಗಳ ಅಂತರದಿಂದ ಬಿಜೆಪಿಯ ರಾಜ್ ಕುಮಾರಿ ಅವರನ್ನು ಮಣಿಸಿದ್ದಾರೆ. ರಾಂಪುರ್ ಕ್ಷೇತ್ರದಲ್ಲಿ ಬಿಜೆಪಿಯ ಆಕಾಶ್ ಸಕ್ಸೇನಾ ಅವರು ಸಮಾಜವಾದಿ ಪಕ್ಷದ ಆಸಿಮ್ ರಾಜಾ ಅವರನ್ನು 34,136 ಮತಗಳ ಅಂತರದಿಂದ ಸೋಲಿಸಿದ್ದಾರೆ.

Join Whatsapp