ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದ ಕೇಂದ್ರ ಸರ್ಕಾರ

Prasthutha|

ನವದೆಹಲಿ: ಉದ್ಯಮಿ ಟಾಟಾ ಸಮೂಹದ ಸೈರುಸ್ ಮಿಸ್ತ್ರಿ ಅಪಘಾತದಲ್ಲಿ ಮೃತಪಟ್ಟ ಬಳಿಕ ಉಂಟಾದ ಚರ್ಚೆಯ ಬಳಿಕ, ಕಾರು ಪ್ರಯಾಣಿಕರ ಜೀವ ಉಳಿಸಲು ಮುಂಬರುವ ವರ್ಷದ ಅಕ್ಟೋಬರ್ ನಿಂದ ಎಲ್ಲಾ ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯಗೊಳಿಸಿ ಭಾರತ ಸರಕಾರವು ಸುತ್ತೋಲೆ ಹೊರಡಿಸಿದೆ.

- Advertisement -

ಇಲ್ಲಿಯವರೆಗೆ ಔನ್ನತ್ಯದ ಕಾರುಗಳು ಮಾತ್ರ ಆರು ಏರ್ ಬ್ಯಾಗ್ ಗಳನ್ನು ಹೊಂದಿದ್ದವು. ಭಾರತದ ರಸ್ತೆಗಳಲ್ಲಿ ಓಡಾಡುವ 90 ಶೇಕಡಾ ವಾಹನಗಳು ಈ ಅನುಕೂಲಗಳನ್ನು ಹೊಂದಿಲ್ಲ. ಹಾಗಾಗಿ ಅಪಘಾತವಾದಾಗ ಕಾರಿನಲ್ಲಿರುವ ಹೆಚ್ಚಿನವರು ಸಾವು ಕಾಣುತ್ತಿರುವ ದಾರುಣ ಸ್ಥಿತಿ ಇದೆ. ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿಯವರು ಟ್ವಿಟರ್ ಮೂಲಕ 2023ರ ಅಕ್ಟೋಬರ್ ನಿಂದ ಈ ನಿಯಮ ಕಡ್ಡಾಯ ಎಂದು ಹೇಳಿದ್ದಾರೆ.

ಮುಂಬೈ – ಅಹಮದಾಬಾದ್ ಹೆದ್ದಾರಿಯಲ್ಲಿ ಆದ ಸೈರುಸ್ ಮಿಸ್ತ್ರಿಯವರ ಸಾವು ರಸ್ತೆ ಸುರಕ್ಷತೆ ಬಗ್ಗೆ ದೇಶದೆಲ್ಲೆಡೆ ಚರ್ಚೆಯನ್ನು ಹುಟ್ಟು ಹಾಕಿದೆ. ಎಲ್ಲ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಅವುಗಳಲ್ಲಿ ಮೊದಲಿನದು. ಹಿಂದಿನ ಸೀಟಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳದೆ ಕುಳಿತಿದ್ದವರ ಕಾರಣಕ್ಕೆ 200 ಚಾಲಕರಿಗೆ ಮಹಾರಾಷ್ಟ್ರ ಪೊಲೀಸರು ಈಗಾಗಲೇ ದಂಡ ಹಾಕಿದ್ದಾರೆ.

- Advertisement -

ಆರು ಏರ್ ಬ್ಯಾಗ್ ಕಡ್ಡಾಯ ಮಾಡಲು 15 ತಿಂಗಳ ಕಾಲಾವಕಾಶ ನೀಡಿರುವುದಕ್ಕೆ ಕಾರಣ ಇದೆ. ಯಾಕೆಂದರೆ ಭಾರತದಲ್ಲಿ ಮೇಕ್ ಇನ್ ಇಂಡಿಯಾ ಆ ಪ್ರಮಾಣದಲ್ಲಿ ಇಲ್ಲ. 1.8 ಕೋಟಿಗೂ ಹೆಚ್ಚು ಕಾರು ಏರ್ ಬ್ಯಾಗ್ ತಯಾರಿಕೆ ಆಗಬೇಕಾಗಿದೆ. ಈಗಾಗಲೇ ಕಾರುಗಳಲ್ಲಿ ಎರಡು ಏರ್ ಬ್ಯಾಗ್ ಹೊಂದಿರುವುದು ಕಡ್ಡಾಯ. ಇನ್ನೂ ನಾಲ್ಕು ಸೇರಿಸಬೇಕೆಂದರೆ ಒಂದು ವಾಹನದವರು ರೂ. 6,000 ಹೆಚ್ಚುವರಿ ವ್ಯಯಿಸಬೇಕಾಗುತ್ತದೆ. ಆದರೆ ಇದು ಇನ್ನಷ್ಟು ಅವಘಡದ ಸಾವನ್ನು ತಡೆಯುತ್ತದೆ. 2020ರ ಒಂದು ವರ್ಷದಲ್ಲಿ ರಸ್ತೆ ಅಪಘಾತಗಳಲ್ಲಿ ಮಡಿದವರ ಸಂಖ್ಯೆ 39,000.

ಈ ವರ್ಷದ ಜನವರಿಯಲ್ಲೇ ಸರಕಾರವು ಆರು ಏರ್ ಬ್ಯಾಗ್ ಗಳ ಬಗ್ಗೆ ತೀರ್ಮಾನಿಸಿತ್ತು. ಸೈರುಸ್ ಮಿಸ್ತ್ರಿಯವರ ಸಾವು ಅದನ್ನು ಘೋಷಿಸುವಂತೆ ಮಾಡಿದೆ.

Join Whatsapp