ಗುರುನಾನಕ್ ಅನುಯಾಯಿಗಳಿಗೆ ಸೋತ ಗೋಳ್ವಾಲ್ಕರ್ ಅನುಯಾಯಿಗಳು

Prasthutha|

ಪಂಜಾಬಿನ ರೈತರಿಗೆ ಒಂದು ವಿಶಿಷ್ಟ ಗುಣಧರ್ಮವಿದೆ. ಹಾಗೆಂದೇ ಅವರು ಇಡೀ ಭಾರತದ ಮಣ್ಣಿನ ಮಕ್ಕಳ ನೈಜ ಪ್ರತಿನಿಧಿಗಳಂತೆ ಕಾಣುತ್ತಾರೆ. ಮೊನ್ನೆ ಸುಖಾಂತ್ಯಗೊಂಡ ರೈತ ಚಳುವಳಿ ಸಿಖ್ಖರು ಭಾರತದಲ್ಲಿನ ದುರಾಡಳಿತಕ್ಕೆ ತಕ್ಕ ಪಾಠ ಕಲಿಸಿದ್ದಕ್ಕೆ ಬಹಳ ಸ್ಪಷ್ಟ ನಿದರ್ಶನ. ಭಾರತದ ಕೃಷಿ ಕ್ಷೇತ್ರವು ಅತ್ಯಂತ ಅಪಾಯದ ಸ್ಥಿತಿಯಲ್ಲಿದ್ದಾಗಲೆಲ್ಲ ಸಿಖ್-ಪಂಜಾಬಿ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕಿಳಿದರು. ಚಳುವಳಿಕಾರರ ಬಗ್ಗೆ ಪ್ರಭುತ್ವ, ಪ್ರಭುತ್ವ ಸಾಕಿದ ಮಾಧ್ಯಮಗಳು ಮತ್ತು ಇವನ್ನು ನಿಯಂತ್ರಿಸುವ ಅಸಾಂವಿಧಾನಿಕ ಬಲಪಂಥಿಯ ಶಕ್ತಿಗಳು ಹರಡಿದ ಎಲ್ಲ ಬಗೆಯ ಅಪಪ್ರಚಾರಗಳನ್ನು ನೀಗಿಕೊಂಡು, ಸರಕಾರ ಮತ್ತು ಸರಕಾರಿ ಪ್ರಾಯೋಜಿತ ಗೂಂಡಾಗಳು ನೀಡಿದ ಎಲ್ಲ ಬಗೆಯ ಕಿರುಕುಳಗಳನ್ನು ಸಂಯಮದಿಂದ ಸಹಿಸಿಕೊಂಡು ಹೋರಾಟವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ಶ್ರೇಯ ಪಂಜಾಬಿನ ರೈತರಿಗೆ ಸಲ್ಲಬೇಕು. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಅನ್ನದಾತನನ್ನು ಬಹಳ ಹಗುರವಾಗಿ ಪರಿಗಣಿಸಿತ್ತು.

- Advertisement -

ಸಿಖ್-ಪಂಜಾಬಿ ರೈತರು ಈ ವಿಷಯದಲ್ಲಿ ತಮಿಳುನಾಡಿನ ಹಿಂದುಳಿದ ವರ್ಗಗಳಿಗೆ ಸರಿಸಮಾನರಂತೆ ಕಾಣುತ್ತಾರೆ. ತಮಿಳು ಒಬಿಸಿಗಳು ದೆಹಲಿಯ ಮೀಸಲಾತಿ ವಿರೋಧಿ ಪ್ರವೃತ್ತಿಯನ್ನು ತಮ್ಮ ಪ್ರಬಲ ಹೋರಾಟಗಳ ಮೂಲಕ ಅನೇಕ ಬಾರಿ ಮಣಿಸಿದ್ದಾರೆ. ಅದೇ ರೀತಿ ದಲಿತರ ಹಕ್ಕುಗಳಿಗೆ ಚ್ಯುತಿ ಬಂದಾಗಲೆಲ್ಲ ಮಹಾರಾಷ್ಟ್ರದ ದಲಿತಬಂಧುಗಳು ಬೀದಿಗಿಳಿದು ಪ್ರಭುತ್ವವನ್ನು ಮಣಿಸಿದ್ದಾರೆ. ಪಂಜಾಬಿನ ಗುರುನಾನಕ್, ತಮಿಳುನಾಡಿನ ಪೆರಿಯಾರ್ ರಾಮಸಾಮಿ ಮತ್ತು ಮಹಾರಾಷ್ಟ್ರದ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಂದು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಬಹುತ್ವ ಸಂಸ್ಕೃತಿಯನ್ನು ರಕ್ಷಿಸುವ ಪ್ರಬಲ ಶಕ್ತಿಗಳನ್ನು ಸೃಷ್ಟಿಸಿದವರು ಎಂದರೆ ತಪ್ಪಾಗಲಿಕ್ಕಿಲ್ಲ. ದುರಂತವೆಂದರೆ ಬಸವಣ್ಣ ಕುವೆಂಪು, ಕನಕದಾಸ, ಶರೀಫರ ನೆಲವಾದ ಕನ್ನಡನಾಡಿನ ಜನಪರ ಸಂಘಟನೆಗಳು ಈ ಬಗೆಯ ಕೆಚ್ಚೆದೆಯ ಹೋರಾಟದ ಬದ್ಧತೆ ತೋರಿಸದಿರುವುದು.

ಈ ನೆಲದ ಅನ್ನದಾತನನ್ನು ಮುಗಿಸಲು ಕೃಷಿ ಕ್ಷೇತ್ರ ಹಾಗೂ ದೇಶದ ಬೃಹತ್ ಆಹಾರ ಧಾನ್ಯಗಳ ಮಾರುಕಟ್ಟೆ ಕಾರ್ಪೋರೇಟ್ ಕಳ್ಳರ ಮಡಿಲಿಗೆ ಹಾಕುವ ಉದ್ದೇಶದಿಂದ ಮೋದಿ ಸರಕಾರ ತಂದಿದ್ದ ಈ ಕರಾಳ ಕಾಯ್ದೆಗಳನ್ನು ವಿರೋಧಿಸಿ ದೇಶದ ಅನ್ನದಾತರು ಸಾರಿದ್ದ ಈ ಚಳುವಳಿ ಅಂತಿಮವಾಗಿ ಪ್ರಧಾನಿಯ ಕ್ಷಮೆಯಾಚನೆಯೊಂದಿಗೆ ಕೊನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುನಾನಕ್ ಅವರ ಜನ್ಮದಿನವಾದ ನವೆಂಬರ 19ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, ತಮ್ಮ ಸರ್ಕಾರವು ಸಂಸತ್ತಿನಲ್ಲಿ ಒಂದು ವರ್ಷದ ಹಿಂದೆ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುತ್ತಿದೆ ಎಂದು ಘೋಷಿಸಿದರು. ಕೋವಿಡ್-19 ಎರಡನೇ ಅಲೆಯ ಸಂದಿಗ್ಧ ಸಂದರ್ಭದಲ್ಲಿ ಪಂಜಾಬಿ ಸಿಖ್ ರೈತರು ಈ ಕರಾಳ ಕಾನೂನುಗಳ ವಿರುದ್ಧ ಯುದ್ಧವನ್ನು ಘೋಷಿಸಿ ಕೃಷಿ ಭ್ರಾತೃತ್ವವನ್ನು ದೆಹಲಿ ಗಡಿಯವರೆಗೆ ಸ್ಥಳಾಂತರಿಸಿದ್ದರು.

- Advertisement -

ರೈತರ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಅಂದಾಜು 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದರು. ರೈತರ ತ್ಯಾಗ, ಬಲಿದಾನಗಳಿಗೆ ಹೆದರಿದ ಮೋದಿ ಸರಕಾರ ಅನ್ನದಾತನೆದುರಿಗೆ ಮಂಡಿಯೂರಿತು. ಹೋರಾಟದ ಸಂದರ್ಭದಲ್ಲಿ ರೈತರ ವಿರುದ್ಧ ಹಲವಾರು ರೀತಿಯ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಯಿತು. ರೈತರಿಗೆ ಕೆಟ್ಟ ಹೆಸರು ತರಲೆಂದೇ ಅವಕಾಶವಾದಿ ಸಿಖ್ ರೈತರ ವೇಷದ ಮತ್ತು ನಿರಂಕಾರಿಗಳ ಒಂದು ಉಗ್ರಗಾಮಿ ಗುಂಪನ್ನು ಪುಸಲಾಯಿಸಿ ದೆಹಲಿಯ ಕೆಂಪು ಕೋಟೆಯನ್ನು ಏರಿಸಲಾಯಿತು. ರೈತ ಹೋರಾಟದ ವರದಿ ಮಾಡುತ್ತಿದ್ದ ಅನೇಕ ಪತ್ರಕರ್ತರು ಮತ್ತು ಬರಹಗಾರರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಯಿತು ಮತ್ತು ಅವರೆಲ್ಲ ಪೊಲೀಸ್ ಹೊಡೆತಗಳನ್ನು ಎದುರಿಸಿದರು. ಆದರೂ, ಬಿಜೆಪಿ ನೇತೃತ್ವದ ಸರಕಾರ ಮತ್ತು ಅದನ್ನು ನಿಯಂತ್ರಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಕಾರ್ಪೋರೇಟ್ ಕಳ್ಳರ ಪರ ಹಾಗು ರೈತರ ವಿರುದ್ಧವಾದ ತಮ್ಮ ಅಚಲ ನಿಲುವು ಸಡಿಲಿಸಿರಲಿಲ್ಲ.

ಪ್ರಸ್ತುತ ಬಿಜೆಪಿ ಸರಕಾರವನ್ನು ಬಲಪಂಥಿಯ ಕೋಮುವಾದಿ ಶಕ್ತಿಗಳು ಹಾಗು ಕಾರ್ಪೋರೇಟ್ ಕಳ್ಳೋದ್ಯಮಿಗಳು ನಿಯಂತ್ರಿಸುತ್ತಿವೆ. ನೆಲಮೂಲದ ಕೃಷಿ ಸಂಸ್ಕೃತಿಯನ್ನು ವೇದ ಕಾಲದಿಂದಲೂ ಈ ಆರ್ಯ ಪ್ರಣೀತ ಋಷಿ ಸಂಸ್ಕೃತಿ ವಿರೋಧಿಸಿಕೊಂಡೆ ಬಂದಿದೆ. ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಅಸಾಂವಿಧಾನಿಕ ಶಕ್ತಿಗಳು ಆಹಾರ-ಉತ್ಪಾದಿಸುವ ರೈತರ ಹಕ್ಕುಗಳಿಗಾಗಿ ನಡೆಯುತ್ತಿದ್ದ ಹೋರಾಟ ಮತ್ತು ಪಂಜಾಬಿ-ಸಿಖ್ ರೈತರ ಆತ್ಮಶಕ್ತಿಯನ್ನು ಅಲಕ್ಷಿಸಿದಷ್ಟೇ ಅಲ್ಲದೆ ಹೋರಾಟ ಹತ್ತಿಕ್ಕಲು ಎಲ್ಲ ಬಗೆಯ ಪ್ರಯತ್ನಗಳು ಮಾಡಿದವು. ತಾವು ಕಾರ್ಪೋರೇಟ್ ಕಳ್ಳರ ಪರ ಕೆಲಸ ಮಾಡುತ್ತಿರುವುದು ಪಂಜಾಬಿ-ಸಿಖ್ ರೈತರಿಗೆ ಅರ್ಥವಾಗುವುದಿಲ್ಲ ಎಂದು ಅವು ಭಾವಿಸಿದಂತಿತ್ತು. ಈ ಕಾನೂನುಗಳನ್ನು ರೂಪಿಸುವ ಮೂಲಕ ಇಡೀ ದೇಶದ ಕೃಷಿ ಉತ್ಪನ್ನಗಳ ಏಕಸ್ವಾಮ್ಯವನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರಿಸುವ ಹುನ್ನಾರ ಮೋದಿ ಸರಕಾರ ಮಾಡಿತ್ತು. ಈ ಕಳ್ಳೋದ್ಯಮಿಗಳು ದೇಶದ ಆರ್ಥಿಕತೆಯ ಪ್ರತಿಯೊಂದು ವಲಯದಲ್ಲಿ ಅನೈತಿಕವಾಗಿ ಹಣ ಗಳಿಸಲು ಬಯಸುತ್ತಾರೆ ಮತ್ತು ಜನರ ಬಡತನ ಹಾಗೂ ಕಷ್ಟಗಳ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಆದರೆ ಜನಪರವಾಗಿರಬೇಕಾದ ಸರಕಾರ ಉದ್ಯಮಿಗಳ ಪರವಾಗಿರುವುದು ದುಃಖದ ಸಂಗತಿಯಾಗಿದೆ.

ದಿನದಿಂದ ದಿನಕ್ಕೆ ಸರಕಾರದ ವಿರುದ್ಧದ ರೈತರ ಕೋಪವು ಹೆಚ್ಚುತ್ತಾ ಹೋಗುತ್ತದೆ. ರೈತ ಚಳುವಳಿಯು ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಹಳ್ಳಿಗಳಿಗೆ ವಿಸ್ತಾರಗೊಳ್ಳುತ್ತದೆ. ತರುವಾಯ,ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಸಿಖ್ಖರನ್ನು ಹೊರತು ಪಡಿಸಿದ ಇನ್ನಿತರ ರೈತರು ಕೂಡ ಬೃಹತ್ ಪ್ರಮಾಣದಲ್ಲಿ ಪಂಜಾಬಿ-ಸಿಖ್ ರೈತರನ್ನು ಬೆಂಬಲಿಸಲಾರಂಭಿಸುತ್ತಾರೆ. ಉತ್ತರ ಪ್ರದೇಶ ಹಳ್ಳಿಗಾಡಿನ ಎಲ್ಲ ಸಮುದಾಯದ ರೈತರು ತಮ್ಮ ಉಳಿವಿಗಾಗಿ ದೊಡ್ಡ ರೀತಿಯಲ್ಲಿ ಸಂಘಟಿತರಾಗುತ್ತಾರೆ. ಮುಂಬರುವ ಯುಪಿ ಚುನಾವಣೆಗೆ ಹೆದರಿ ಸರಕಾರ ಮಂಡಿಯೂರುವ ಮೂಲಕ ಅಂತಿಮವಾಗಿ, ರೈತರಿಗೆ ವೀರೋಚಿತ ಜಯ ದೊರೆಯುತ್ತದೆ. ಪ್ರಧಾನಿ ಮೋದಿಯವರು ಕ್ಷಮೆಯಾಚಿಸಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿ ಅನ್ನದಾತನ ಮುಂದೆ ತಲೆಬಾಗುತ್ತಾರೆ. ಈ ಹೋರಾಟ ಮತ್ತು ಅದಕ್ಕೆ ದೊರೆತ ಅಭೂತಪೂರ್ವ ವಿಜಯವು ಹಿಂದುತ್ವದ ಶಕ್ತಿಗಳಿಗೆ ಸರಿಯಾಗಿ ಪಾಠ ಕಲಿಸಿದೆ. ಗುರು ನಾನಕ್ ಮತ್ತು ಗುರು ಗ್ರಂಥ ಸಾಹಿಬ್ ನಲ್ಲಿನ ಅವರ ಬೋಧನೆಗಳನ್ನು ಅತ್ಯಂತ ನಿಷ್ಠೆಯಿಂದ ಅನುಸರಿಸುವ ಸಿಖ್ ಸಮುದಾಯದಿಂದ ಹಿಂದುತ್ವದ ಶಕ್ತಿಗಳು ನೈತಿಕ ಪಾಠ ಕಲಿಯುವ ಅಗತ್ಯವಿದೆ.

ಗುರುನಾನಕ್ ಅವರು ಕೃಷಿಯೇ ದೇವರ ಮತ್ತು ಮಾನವ ಬದುಕಿನ ಜೀವಾಳ ಎಂದು ಬೋಧಿಸಿದರು. ಗುರುನಾನಕರ ಬೋಧನೆಗಳು 1925ರಲ್ಲಿ ಆರೆಸ್ಸೆಸ್ ಸ್ಥಾಪಿಸಿದ ಕೆ.ಬಿ.ಹೆಡಗೇವಾರ್ ಚಿಂತನೆಗಳಿಗಿಂತ ಸಂಪೂರ್ಣ ಭಿನ್ನ ಹಾಗು ಜನಪರವಾಗಿವೆ. ಗುರು ನಾನಕ್‌ ದೇವ್ ಅವರು ಮುಸ್ಲಿಂ ಆಳ್ವಿಕೆಯ ಸಂಕೀರ್ಣವಾದ ಹಿಂದೂ-ವರ್ಣ ವ್ಯವಸ್ಥೆಯ ದಬ್ಬಾಳಿಕೆಯ ಕಾಲಘಟ್ಟದಲ್ಲಿ ತಮ್ಮ ಜೀವನ್ಮುಖಿ ಆಧ್ಯಾತ್ಮಿಕ ವಿಚಾರಗಳನ್ನು ರೂಪಿಸಿದರು. ಅವರು 1469ರಲ್ಲಿ ಹಿಂದೂ ಬೇಡಿ ಖಾತ್ರಿ ಕುಲದ ಪಟ್ವಾರಿ ಕುಟುಂಬದಲ್ಲಿ ಜನಿಸಿದರು. ಕೃಷಿ ಉತ್ಪಾದನೆಯು ಮಾನವ ಕುಲದ ಉಳಿವಿನ ಜೀವನಾಡಿ ಎಂದು ಅವರು ಶೀಘ್ರದಲ್ಲೇ ಅರಿತುಕೊಂಡು ಏಕದೇವೋಪಾಸನೆಯನ್ನು ಬೋಧಿಸಿದರು. ಗುರುನಾನಕ್ ಅವರ ದೃಷ್ಟಿಯಲ್ಲಿ ದೇವರು ದುಷ್ಟರನ್ನು ಶಿಕ್ಷಿಸುವ ಯುದ್ಧ ವೀರನಾಗಿರಲಿಲ್ಲ. ಗುರುನಾನಕ್ ಅವರಿಗೆ ಒಂದು ರಾಷ್ಟ್ರವು ಮಾನವ ಸಂಕುಚಿತತೆಯ ಬಂಧನಕ್ಕೊಳಗಾದ ಭೂಮಿಯ ತುಂಡು ಆಗಿರಲಿಲ್ಲ. ಅದಕ್ಕಾಗಿಯೇ ಅವರ ಅನುಯಾಯಿಗಳು ದುಡಿಮೆಯ ಕೈಗಳನ್ನು ಹೊತ್ತು ಪ್ರಪಂಚದಾದ್ಯಂತ ನೆಲೆಸಿ ಕೃಷಿಯನ್ನು ಮಾಡುತ್ತ ಬದುಕುತ್ತಿದ್ದಾರೆ.

ಸಿಖ್ಖರು ಕೇವಲ ಭಾರತೀಯ ಕೃಷಿ ಕ್ಷೇತ್ರವನ್ನು ಮಾತ್ರ ಒಂದು ಲಾಭದಾಯಕ ಉತ್ಪಾದನಾ ವಲಯವನ್ನಾಗಿಸಲಿಲ್ಲ, ಆದರ ಜೊತೆಗೆ ಅವರು ಕೆನಡಾ, ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೆ ಹೋಗಿ ಅದೇ ಪ್ರಯೋಗವನ್ನು ಮಾಡಿ ಯಶಸ್ವಿಯಾದರು. ಸಿಖ್ಖರು ಎಂದಿಗೂ ತಮ್ಮ ರಾಷ್ಟ್ರೀಯತೆಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ ಹಾಗೂ ಇತರ ಯಾರನ್ನೊ ರಾಷ್ಟ್ರದ್ರೋಹಿಗಳನ್ನಾಗಿ ಬಿಂಬಿಸುವ ಕ್ಷುಲ್ಲಕ ಕಾರ್ಯವನ್ನು ಮಾಡಲಿಲ್ಲ. ಪಂಜಾಬಿ-ಸಿಖ್ ರೈತ ಸಮುದಾಯ 10 ಜನ ಧರ್ಮ ಗುರುಗಳನ್ನು ಹೊಂದಿದ್ದರೂ, ಅವರ ಮೊದಲ ಗುರು ಗುರುನಾನಕ್ ಅವರು ಸಿಖ್ ಧರ್ಮದ ಮುಖ್ಯ ಮಾರ್ಗದರ್ಶಿ ಶಕ್ತಿಯಾಗಿದ್ದಾರೆ. ರಾಷ್ಟ್ರದ ಕೃಷಿ ಕ್ಷೇತ್ರವು ಕೇಂದ್ರ ಸರ್ಕಾರದಿಂದ ಅಪಾಯಕ್ಕೆ ಸಿಲುಕಿದಾಗಲೆಲ್ಲಾ ಸಿಖ್-ಪಂಜಾಬಿ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ಸಂಸದೀಯ ಬಹುಮತದ ದುರುಪಯೋಗದಿಂದ ನಾಶವಾಗುತ್ತಿದ್ದ ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವದ ಸಾಂವಿಧಾನಿಕ ತತ್ವವನ್ನು ಉಳಿಸಲು ಸಹಜವಾಗಿ ಈ ಬಾರಿ ಪಂಜಾಬಿ-ಸಿಖ್ ರೈತರು ಕಾರ್ಯೋನ್ಮುಖರಾಗಿ ಇಡೀ ರಾಷ್ಟ್ರವನ್ನು ಮತ್ತು ಭಾರತೀಯ ಕೃಷಿ ಕ್ಷೇತ್ರವನ್ನು ದುರ್ಬಲಗೊಳಿಸುವ ಸರಕಾರದ ಹಿಂದಿರುವ ಕಾರ್ಪೋರೇಟ್ ಕಳ್ಳರು ಮತ್ತು ಮತೀಯವಾದಿಗಳ ಹುನ್ನಾರವನ್ನು ವಿಫಲಗೊಳಿಸಿದ್ದಾರೆ.

ಹೆಡ್ಗೆವಾರ್ ಅವರ ಆರೆಸ್ಸೆಸ್‌ ನ ಪರಧರ್ಮದ್ವೇಷಿ ಸಿದ್ಧಾಂತವು ಒಂದು ಕಡೆ ಸಂವಿಧಾನ ಹಾಗು ಪ್ರಜಾಪ್ರಭುತ್ವದ ಸಹಾಯ ಪಡೆದು ಬಲಶಾಲಿಯಾಗಿದ್ದರೂ ಅದೊಂದು ಈ ನೆಲದ ಬಹುತ್ವವನ್ನು ಒಪ್ಪಿಕೊಳ್ಳಲು ಬಯಸದ ಪ್ರತಿಗಾಮಿ ಸಂಘಟನೆ. ಸಂಘವು ಜನತಂತ್ರ ಮತ್ತು ಸಂವಿಧಾನವನ್ನು ದುರ್ಬಲಗೊಳಿಸಲು ಸದಾ ಹವಣಿಸುತ್ತದೆ. ಮತ್ತೊಂದೆಡೆಗೆ ಗುರುನಾನಕ್ ಅವರು ಎಂದಿಗೂ ಯಾವುದನ್ನೂ ವಿರೋಧಿಸುವ ಅಥವಾ ದ್ವೇಷಿಸುವ ಆಧ್ಯಾತ್ಮಿಕ ಅಥವಾ ಸಾಮಾಜಿಕ ಸಿದ್ಧಾಂತವನ್ನು ಪ್ರತಿಪಾದಿಸಲಿಲ್ಲ, ಆದರೆ ಹೆಡ್ಗೆವಾರ್‌ ಅವರು ಹಿಂದೂ ಧರ್ಮ, ಪರಂಪರೆ ಹಾಗು ಸಂಪ್ರದಾಯಗಳ ಹೆಸರಿನಲ್ಲಿ ಮುಸ್ಲಿಂ ವಿರೋಧಿ ಗೋಮಾಂಸ ಮತ್ತು ಮಾಂಸಹಾರ ವಿರೋಧಿ ಮತ್ತು ಸಮಾನತೆ-ವಿರೋಧಿ ಸಿದ್ಧಾಂತಗಳನ್ನು ಸ್ಥಾಪಿಸಿದರು. ಈಗ ಪಂಜಾಬಿ-ಸಿಖ್ ರೈತರು ಹಿಂದುತ್ವದ ಅಟ್ಟಹಾಸಕ್ಕೆ ತಡೆಯೊಡ್ಡಿದ್ದಾರೆ. ಸರ್ಕಾರದ ಅಕ್ರಮಗಳನ್ನು ವಿರೋಧಿಸಿ ಭಾರತದ ಕೃಷಿ ವಲಯವನ್ನು ಉಳಿಸಿದ ಪಂಜಾಬಿ-ಸಿಖ್ ರೈತರಿಗೆ ಇಡೀ ರಾಷ್ಟ್ರವು ಗೌರವಿಸಬೇಕಾಗಿದೆ.

ಭಾರತಿಯ ಸಂಸದೀಯ ವ್ಯವಸ್ಥೆಯಲ್ಲಿ ಸಿಖ್ಖರು ಕೂಡ ಅಕಾಲಿದಳವೆಂಬ ಧರ್ಮ-ಕೇಂದ್ರಿತ ರಾಜಕೀಯ ಪಕ್ಷವನ್ನು ಹೊಂದಿದ್ದಾರೆ. ಈ ರಾಜಕೀಯ ಪಕ್ಷವು ಸಿಖ್ ಧರ್ಮ ಗುರುಗಳು ಜಾರಿಗೆ ತಂದ ಸೈದ್ಧಾಂತಿಕ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಆದರೆ ಇತಿಹಾಸದ ಯಾವ ಕಾಲಘಟ್ಟದಲ್ಲೂ ಸಿಖ್ ಧರ್ಮೀಯರು ಎಂದಿಗೂ ಪಂಜಾಬ್‌ ನ ಇತರ ಧಾರ್ಮಿಕ ಸಮುದಾಯಗಳ ವಿರುದ್ಧ ಹೋರಾಡಿದ ಉದಾಹರಣೆಗಳಿಲ್ಲ. ಸಿಖ್ ಧರ್ಮೀಯರು ಪಂಜಾಬಿನ ಯಾವುದೇ ಸಮುದಾಯಗಳ ಆಹಾರದ ಹಕ್ಕುಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಸಿಖ್ ಧರ್ಮ 12ರಿಂದ 50 ವರ್ಷ ವಯಸ್ಸಿನ ಮಹಿಳೆಯರು ತಮ್ಮ ಗುರುದ್ವಾರಗಳಿಗೆ ಪ್ರವೇಶಿಸುವುದನ್ನು ಎಂದಿಗೂ ನಿರ್ಬಂಧಿಸಲಿಲ್ಲ. ಆದರೆ 2018ರಲ್ಲಿ ಕೇರಳದ ಶಬರಿಮಲೈ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧದ ವಿರುದ್ಧ ಬಂದ ನ್ಯಾಯಾಲಯದ ತೀರ್ಪನ್ನು ಕೂಡ ಸಂಘ ಗೌರವಿಸಲಿಲ್ಲ. ಸಂಘವು ನ್ಯಾಯಾಲಯದ ತೀರ್ಪಿಗೆ ವಿರೋಧವಾಗಿ ಹಿಂದೂ ಸಂಪ್ರದಾಯವನ್ನು ಗೌರವಿಸಬೇಕೆಂದು ದೇವಾಲಯದ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದನ್ನು ನಾವು ನೋಡಿದ್ದೇವೆ.

ರಾಜ್ಯದ ನಾಗರಿಕರ ಮಾನವ ಹಕ್ಕುಗಳ ಸಂರಕ್ಷಣೆಯ ವಿಷಯದಲ್ಲಿ ಪಂಜಾಬ್ ನ ಜನರು ಅಕಾಲಿದಳ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಅಂತಹ ಗಮನಾರ್ಹ ವ್ಯತ್ಯಾಸವನ್ನೇನೂ ಗುರುತಿಸಿಲ್ಲ. ಈ ಎರಡೂ ಪಕ್ಷಗಳು ತಮ್ಮ ಆರ್ಥಿಕ ಮತ್ತು ಆಡಳಿತಾತ್ಮಕ ಕಾರ್ಯಸೂಚಿಗಳಲ್ಲಿ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಕಾಂಗ್ರೆಸ್ ಮತ್ತು ಅಕಾಲಿದಳ ಅಲ್ಲಿನ ಜನರ ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಸದಾ ಮುಂದಿವೆ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಇಂತಹ ವ್ಯತ್ಯಾಸಗಳು ಸ್ವೀಕಾರಾರ್ಹವೇ ಆಗಿವೆ. ಆದರೆ ಈಗ, ಭಾರತ ಮಾತ್ರವಲ್ಲ, ಇಡೀ ಜಗತ್ತು ಒಂದೇ ಸಂವಿಧಾನದ ಪ್ರತಿಜ್ಞೆಯ ಹೊರತಾಗಿಯೂ ಮಾನವ ಹಕ್ಕುಗಳ ವಿಷಯಕ್ಕೆ ಬಂದಾಗ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದ ನಡುವಿನ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಾಗೆಂದು ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ನಾವು ಮರೆಯುವಂತಿಲ್ಲ. ಇಂದಿರಾ ಹೇರಿದ ಸಂವಿಧಾನ ವಿರೋಧಿ ಹಾಗೂ ಜನತಂತ್ರ ವಿರೋಧಿ ತುರ್ತು ಪರಿಸ್ಥಿತಿಯ ವಿರುದ್ಧ ಇಡೀ ದೇಶದ ಜನತಂತ್ರವಾದಿಗಳ ಜೊತೆಗೆ ಪಂಜಾಬಿ-ಸಿಖ್ ರೈತರು ಕೂಡ ಹೋರಾಡಿದ್ದನ್ನು ನಾವು ಮರೆಯುವಂತಿಲ್ಲ.

ಸಿಖ್ ಧರ್ಮೀಯರಿಂದ ಭಾರತದ ಪ್ರತಿಯೊಂದು ಧರ್ಮೀಯರು ಕಲಿಯಬೇಕಾದದ್ದು ಬಹಳಷ್ಟಿದೆ. ಸಮಾನತೆಯ ಸಮಾಜವನ್ನು ಸ್ಥಾಪಿಸಲು ಜನರಲ್ಲಿ ರಾಜಕೀಯದ ಮೂಲಕ ಆಧ್ಯಾತ್ಮಿಕ ನೈತಿಕತೆ ಬಿತ್ತಬೇಕಾಗುತ್ತದೆಯೇ  ಹೊರತು ಸಂಘ-ಬಿಜೆಪಿ ಪ್ರಣೀತ ಪರಧರ್ಮದ್ವೇಷದ ವಿಘಟನಕಾರಿ ಸಿದ್ಧಾಂತಗಳ ಮೂಲಕವಲ್ಲ. ರೈತರ ಚಳವಳಿ ಮತ್ತು ಅದರ ಅಭೂತಪೂರ್ವ ವಿಜಯವು ಭಾರತಿಯ ಜನತಂತ್ರದ ಖಿನ್ನತೆಯ ಪರಿಸ್ಥಿತಿಯಲ್ಲಿ ರಾಷ್ಟ್ರಕ್ಕೆ ಹೊಸ ಆತ್ಮವಿಶ್ವಾಸವನ್ನು ನೀಡಿದೆ. ಕಳೆದ ಒಂದು ವರ್ಷದಿಂದ ಇಡೀ ಜಗತ್ತು ಅಂತ್ಯವಿಲ್ಲದ ಒಂದು ಬೃಹತ್ ಚಳವಳಿಯನ್ನು ಎದುರು ನೋಡುತ್ತಿತ್ತು. ಕೊನೆಗೂ ಈ ಆಂದೋಲನ ತನ್ನ ಗೆಲುವಿನ ಗುರಿ ಮುಟ್ಟೇ ತೀರುತ್ತದೆ ಎಂದು ಆರೆಸ್ಸೆಸ್ ಮತ್ತು ಬಿಜೆಪಿ ಕೊನೆ ಘಳಿಗೆಯಲ್ಲಿ ಅರಿತುಕೊಂಡವು.

ದೆಹಲಿಯಲ್ಲಿ ನಡೆದ ರೈತರ ಆಂದೋಲನವು ಸಿಖ್ಖರು ಎಷ್ಟು ಶಾಂತಿಪ್ರಿಯಯರೆಂಬುದು ಇಡೀ ಜಗತ್ತಿಗೆ ತೋರಿಸಿದೆ. ರೈತರು ಗುರುದ್ವಾರಗಳಲ್ಲಿ ಹಸಿದ ಪ್ರತಿಯೊಬ್ಬರಿಗೂ ಹೇಗೆ ಆಹಾರವನ್ನು ನೀಡುತ್ತಾರೊ ಹಾಗೆ ಹೋರಾಟ ನಿರತ ರೈತರಿಗಷ್ಟೇ ಅಲ್ಲದೆ ತಮ್ಮ ಮೇಲೆ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಗೂ ಕೂಡ ದಿನನಿತ್ಯ ರಸ್ತೆಗಳಲ್ಲಿ ಆಹಾರವನ್ನು ಪೂರೈಸಿದರು. ಅದು ಸಿಖ್ಖರು ಗುರುನಾನಕ್ ಅವರ ಬೋಧನೆಯಿಂದ ಪಡೆದ ಗುಣ. ಭಾರತದಲ್ಲಿರುವ ಪ್ರತಿಯೊಂದು ಧರ್ಮವು ಇತರ ಧರ್ಮ ಮತ್ತು ಜೀವನ ವಿಧಾನಗಳನ್ನು ಹೇಗೆ ಗೌರವಿಸಬೇಕೆಂಬುದು ಸಿಖ್ ರೈತರು ಈ ಹೋರಾಟ ಕಾಲದಲ್ಲಿ ತೋರಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ದುಡಿಮೆಯ ಮೂಲಕ ದೇಶದ ಉತ್ಪಾದನೆ ಹೆಚ್ಚಿಸುವುದೇ ಧರ್ಮ ಎಂದು ಅವರು ತೋರಿಸಿದರು. ಇದು ಭಾರತೀಯರಾದ ನಾವೆಲ್ಲರೂ ಸಿಖ್ಖರಿಂದ ಕಲಿಯಬೇಕಾದ ಪಾಠವಾಗಿದೆ. ಆಹಾರ ಉತ್ಪಾದಕರಿಗೆ ಸಂಬಂಧಿಸಿದ ಯಾವುದೇ ನಿರ್ಣಯಗಳು ಆಹಾರ ಉತ್ಪಾದಕರಲ್ಲದವರು ನಿರ್ಧರಿಸಬಾರದು ಎನ್ನುವ ಸಂದೇಶವನ್ನು ಈ ಹೋರಾಟದಲ್ಲಿ ಗೆದ್ದ ಪಂಜಾಬಿ-ಸಿಖ್ ರೈತರು ನೀಡುವ ಮೂಲಕ ಇತಿಹಾಸ ಬರೆದಿದ್ದಾರೆ.

Join Whatsapp