ಉಡುಪಿ | ಹಿರಿಯ ಚಿಂತಕ, ವಿಮರ್ಶಕ ಜಿ. ರಾಜಶೇಖರ್ ನಿಧನ

Prasthutha|

ಚಿಂತಕ, ವಿಮರ್ಶಕ ಜಿ.ರಾಜಶೇಖರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜಶೇಖರ್, ಬುಧವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

- Advertisement -

ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ರಾಜಶೇಖರ್ ಅವರನ್ನ ಇತ್ತೀಚಿಗೆ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಾಡಿನ ಹಿರಿಯ ಸಾಕ್ಷಿ ಪ್ರಜ್ಞೆಯಂತಿದ್ದ ರಾಜಶೇಖರ್ ನಾಡಿನ ಸೌಹಾರ್ದತೆಗಾಗಿ ಜೀವಮಾನವಿಡೀ ಶ್ರಮಿಸಿ, ಫ್ಯಾಶಿಸ್ಟ್ ಶಕ್ತಿಯ ವಿರುದ್ಧ ಹೋರಾಡಿದವರು. 2019ರಿಂದ ಪ್ರೊಗ್ರೆಸಿವ್ ಸುಪ್ರನ್ ನ್ಯೂಕ್ಲಿಯರ್ ಪಾಲ್ಸಿ(ಪಾರ್ಕಿಂಸನ್ ಪ್ಲಸ್) ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದರು.
ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಜಶೇಖರ್ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅಸ್ವಸ್ಥರಾಗಿ ಪ್ರಜ್ಞೆ ಕಳೆದುಕೊಂಡ ಅವರನ್ನು ನಾಲ್ಕೈದು ದಿನಗಳ ಹಿಂದೆಯಷ್ಟೇ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.
1946, ಎಪ್ರಿಲ್ 3ರಂದು ಉಡುಪಿಯಲ್ಲಿ ಜನಿಸಿದ ರಾಜಶೇಖರ, ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ ಪಡೆದು ಕೆಲ ಕಾಲ ಶಿಕ್ಷಕರಾಗಿದ್ದರು. ಬಳಿಕ ಎಲ್ ಐಸಿಯಲ್ಲಿ ಸೇವೆಗೆ ಸೇರಿದರು.
ಜಿ. ರಾಜಶೇಖರ ಸಾಹಿತ್ಯ-ಸಮಾಜ-ರಾಜಕಾರಣ, ಕೋಮುವಾದವೂ ಸೇರಿದಂತೆ ಸಮಕಾಲೀನ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ಬರೆದಿದ್ದಾರೆ.
ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು. ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ), ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತ ಮಂತಾದವು ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ. ಜಿ.ರಾಜಶೇಖರ ಅವರು ಬರೆದ “ಬಹುವಚನ ಭಾರತ” ಕೃತಿ 2015ನೇ ಸಾಲಿನ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಆದರೆ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಹೇಳಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿ ದಿಟ್ಟತನ ಪ್ರದರ್ಶಿಸಿದ್ದರು.
“ಪ್ರಸ್ತುತ” ಪತ್ರಿಕೆಯ ಬಗ್ಗೆಯೂ ಅತೀವ ಕಾಳಜಿ ಹೊಂದಿದ್ದ ಜಿ.ರಾಜಶೇಖರ್ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಸಮಕಾಲೀನ ವಿಚಾರಗಳ ಬಗ್ಗೆ ಪತ್ರಿಕೆಗೆ ಲೇಖನಗಳನ್ನು ಕಳುಹಿಸಿಕೊಡುತ್ತಿದ್ದರು. ಮಾತ್ರವಲ್ಲ, ಪತ್ರಿಕೆ ನೀಡುವ ಗೌರವ ಧನವನ್ನು ಅವರು ನಯವಾಗಿಯೇ ತಿರಸ್ಕರಿಸುತ್ತಿದ್ದರು.

- Advertisement -

ಕೆಎಂ ಶರೀಫ್ ಸ್ಮಾರಕ ಪ್ರಶಸ್ತಿ-2021” ಸ್ವೀಕರಿಸಿದ್ದ ಜಿ.ರಾಜಶೇಖರ್
ಹಿರಿಯ ಪತ್ರಕರ್ತ, ಚಿಂತಕ ಹಾಗೂ ಪ್ರಸ್ತುತ ಪಾಕ್ಷಿಕದ ಪ್ರಥಮ ಪ್ರಧಾನ ಸಂಪಾದಕರಾಗಿದ್ದ ಕೆ.ಎಂ.ಶರೀಫ್ ಅವರ ಸ್ಮರಣಾರ್ಥ ಪ್ರಪ್ರಥಮ ಬಾರಿಗೆ ಕೊಡಮಾಡಿದ “ಕೆ.ಎಂ. ಶರೀಫ್ ಸ್ಮಾರಕ ಪ್ರಶಸ್ತಿ-2021”ಗೆ ಜಿ.ರಾಜಶೇಖರ್ ಭಾಜನರಾಗಿದ್ದರು. ತೀವ್ರ ಅನಾರೋಗ್ಯದ ನಡುವೆಯೂ, ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ರ ವಿಷ್ಣು ಅವರ ನೆರವಿನೊಂದಿಗೆ ಖುದ್ದು ಭಾಗಿಯಾಗಿ ಜಿ.ರಾಜಶೇಖರ್ ಅವರು ಪ್ರಶಸ್ತಿ ಸ್ವೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದು ಪ್ರಸ್ತುತ ಪತ್ರಿಕೆಯೊಂದಿಗೆ ಅವರಿಗಿದ್ದ ಪ್ರೀತಿ, ಕಾಳಜಿಗೆ ಒಂದು ನಿದರ್ಶನವಾಗಿದೆ.

ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ

ಜಿ.ರಾಜಶೇಖರ್ ಅಂತ್ಯಕ್ರಿಯೆ ಗುರುವಾರ ನಡೆಯಲಿದೆ.

ಅವರ ನಿಧನಕ್ಕೆ ಅನೇಕ ಗಣ್ಯರು, ಸಾಹಿತಿಗಳು, ರಾಜಕೀಯ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿ.ರಾಜಶೇಖರ್ ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಯಾಸಿರ್ ಪಾಶ, ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.



Join Whatsapp