ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಗ್ಯಾಸ್ ಟ್ಯಾಂಕರ್: ನಾಲ್ವರು ಸಾವು !

Prasthutha|

ಚಿತ್ರದುರ್ಗ: ಪಂಚರ್ ಆಗಿ ನಿಂತಿದ್ದ ಈರುಳ್ಳಿ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವ್ನಪ್ಪಿರುವ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ 40ರ ದೊಡ್ಡಸಿದ್ದವ್ವನಹಳ್ಳಿ ಬಳಿ‌ ನಡೆದಿದೆ.

- Advertisement -

ರಾಯಚೂರು ಜಿಲ್ಲೆಯ ಬಯಲಗುಡ್ಡ ಗ್ರಾಮದ ಹುಲುಗಪ್ಪ (22)ಲಾರಿ ಕ್ಲೀನರ್, ಕೊಪ್ಪಳ ಜಿಲ್ಲೆಯ ಬೆನಕನಾಳ್ ಗ್ರಾಮದ ಮಂಜುನಾಥ (25) ಲಾರಿ ಚಾಲಕ, ಹುಬ್ಬಳ್ಳಿ ತಾಲ್ಲೂಕಿನ ಚಬ್ಬಿ ಗ್ರಾಮದ ಲಾರಿ ಕ್ಲೀನರ್ ಸಂಜಯ್(20), ಬಿಜಾಪುರ ಜಿಲ್ಲೆಯ ಅರವಂಚಿ ಗ್ರಾಮದ ರೈತ ಶರಣಪ್ಪ ಅಪಘಾತದಲ್ಲಿ ಮೃತಪಟ್ಟವರು.

ಗದಗ ಜಿಲ್ಲೆಯ ರೈತ ಶರಣಪ್ಪ ಅವರು ತಮ್ಮ ಜಮೀನಿನಲ್ಲಿ ಬೆಳೆ ಈರುಳ್ಳಿಯನ್ನು ಬೆಂಗಳೂರಿಗೆ ಲಾರಿಯಲ್ಲಿ ಕೊಂಡೊಯ್ಯುವಾಗ ಇಂದು ‌ಮುಂಜಾನೆ 2 ಗಂಟೆ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಹತ್ತಿರ ಲಾರಿಯ ಟೈಯರ್ ಪಂಕ್ಚರ್ ಆಗಿದೆ. ಲಾರಿ ತುಂಬಾ ಈರುಳ್ಳಿ ಲೋಡ್ ಇದ್ದುದರಿಂದ ರಸ್ತೆಯ ಮಧ್ಯೆಯೇ ಲಾರಿಯನ್ನು ನಿಲ್ಲಿಸಿ ಟೈಯರ್ ಬದಲಾಯಿಸಲು ಹುಲುಗಪ್ಪ, ಮಂಜುನಾಥ, ಸಂಜಯ್ ಹಾಗೂ ಶರಣಪ್ಪ ಲಾರಿಯ ಪಕ್ಕದಲ್ಲಿ ನಿಂತಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಗ್ಯಾಸ್ ಟ್ಯಾಂಕರ್ ಈರುಳ್ಳಿ ತುಂಬಿದ್ದ ಲಾರಿಯ ಪಕ್ಕದಲ್ಲಿ ನಿಂತಿದ್ದ ನಾಲ್ಕು ಜನರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ಕು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

- Advertisement -

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಜಿ. ಭೇಟಿ ನೀಡಿದ್ದು, ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Join Whatsapp