ಟಿಕೆಟ್ ನೀಡಲು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದ ಮಾಜಿ ಸಂಸದ ಬಿ.ವಿ. ನಾಯಕ

Prasthutha|

ರಾಯಚೂರು: ಬಿಜೆಪಿ ವರಿಷ್ಠರು ಪುನರ್ ಮರುಪರಿಶೀಲಿಸಿ ನನಗೆ ಟಿಕೆಟ್ ನೀಡಬೇಕು. ಇಲ್ಲದೇ ಇದ್ದರೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಮಾಜಿ ಸಂಸದ,ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ವಿ ನಾಯಕ ಎಚ್ಚರಿಕೆ ನೀಡಿದ್ದಾರೆ‌.

- Advertisement -

ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ನಡೆದ ಬೆಂಬಲಿಗರ ಹಾಗೂ ಅಭಿಮಾನಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಈ ಎಚ್ಚರಿಕೆ ನೀಡಿದರು.

ನಮ್ಮ ಕುಟುಂಬದ ಇತಿಹಾಸದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದೆ. ಲೋಕಸಭಾ ಕ್ಷೇತ್ರದ ಪಕ್ಷದ ಟಿಕೆಟ್ ನೀಡುವ ಭರವಸೆ ನೀಡಿ ಪ್ರಚಾರ ಆರಂಭಸುವಂತೆ ಮುಖಂಡರು ಸೂಚಿಸಿದ್ದರು. ಆದರೆ, ಟಿಕೆಟ್ ನೀಡಲಿಲ್ಲ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿ ಇತ್ತು. ನಾನು ಅಲ್ಪ ಮತಗಳಿಂದ ಸೋಲು ಅನುಭವಿಸಿದರೂ ಪಕ್ಷದ ಸಂಘಟನೆ ಬಲಗೊಂಡಿತು. ವಾಸ್ತವದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಕಲ್ಪನೆಯನ್ನೂ ಮಾಡಿರಲಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ವಿರೋಧ ಪಕ್ಷ ನಾಯಕ ಆರ್.ಅಶೋಕ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟಿಕೆಟ್ ಭರವಸೆ ನೀಡಿದರು. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ನಿಮಗೆ ಟಿಕೆಟ್ ನೀಡಲಾಗುವುದು. ವಿಶ್ವಾಸ ಮೂಡಿಸಿದರು ಎಂದರು.

ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಮಾತನಾಡಿ, ಬಿಜೆಪಿ ಟಿಕೆಟ್ ಬದಲಾವಣೆ ಮಾಡಿ ಬಿ.ವಿ ನಾಯಕ ಅವರಿಗೆ ನೀಡಬೇಕು. ಇಲ್ಲದೇ ಇದ್ದರೆ ಕೆಟ್ಟ ಪರಿಣಾಮ ಪಕ್ಷ ಎದುರಿಸುಬೇಕಾಗುತ್ತದೆ ಎಂಬುವುದನ್ನು ಪಕ್ಷದ ರಾಜ್ಯ ನಾಯಕರು ಅರಿತುಕೊಳ್ಳಬೇಕು ಎಂದು ಎಚ್ಚರಿಸಿದರು.

ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ತಿಮ್ಮಾರೆಡ್ಡಿ ಬೋಗಾವತಿ, ಜಂಬಣ್ಣ, ಅನಿತಾ ಬಸವರಾಜ, ಶರಣಬಸವ ಜೋಳದಡಗಿ, ಅನಿಲ್ ಕುಮಾರ, ಗುರು ಉಪಸ್ಥಿತರಿದ್ದರು.

Join Whatsapp