ಜಿ.ಟಿ.ದೇವೆಗೌಡರ ಅಧ್ಯಕ್ಷತೆಯಲ್ಲಿ ಜೆಡಿಎಸ್ ನೂತನ ಕೋರ್ ಕಮಿಟಿ ರಚನೆ

Prasthutha|

ಬೆಂಗಳೂರು: ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೆಗೌಡರ ನಿರ್ದೇಶನದ ಮೇರೆಗೆ ಜೆಡಿಎಸ್ ಪಕ್ಷದ ಕೋರ್ ಕಮಿಟಿ ರಚನೆ ಮಾಡಲಾಗಿದೆ.

- Advertisement -

ಮುಂದಿನ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವುದು, ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ  ಜೆಡಿಎಸ್ ಪಕ್ಷದ ನೂತನ ಕಮಿಟಿ ರಚನೆ ಮಾಡಲಾಗಿದೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಶುಕ್ರವಾರ ನಡೆದ ನಾಯಕರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ  ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು, ಕೋರ್ ಕಮಿಟಿ ಅಧ್ಯಕ್ಷರಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಂಚಾಲಕರಾಗಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರನ್ನು ನೇಮಕ ಮಾಡಲಾಗಿದೆ ಎಂದರು.

- Advertisement -

ಆಗಸ್ಟ್ 7 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಕೋರ್ ಕಮಿಟಿಯ ಹೊಸ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು ಎಂದು ಅವರು ಹೇಳಿದರು.

ಕೋರ್ ಕಮಿಟಿಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಬಂಡೆಪ್ಪ ಕಾಶೆಂಪುರ್, ಹೆಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ,  ಸಿ.ಎಸ್.ಪುಟ್ಟರಾಜು, ಆಲ್ಕೋಡ್ ಹನುಮಂತಪ್ಪ, ಶಾಸಕರಾದ ನೇಮಿರಾಜ ನಾಯಕ್, ರಾಜೂಗೌಡ, ಬಿ.ಎಂ.ಫಾರೂಕ್, ಮಾಜಿ ಶಾಸಕರಾದ ಸುರೇಶ್ ಗೌಡ,  ಕೆ.ಎಂ.ತಿಮ್ಮರಾಯಪ್ಪ, ವೀರಭದ್ರಪ್ಪ ಹಾಲರವಿ, ಎಂ.ಕೃಷ್ಣಾರೆಡ್ಡಿ, ದೊಡ್ಡಪ್ಪ ಗೌಡ, ಕೆ.ಬಿ.ಪ್ರಸನ್ನ ಕುಮಾರ್, ಸುನೀತಾ ಚೌವ್ಹಾಣ್, ಸಿ.ವಿ.ಚಂದ್ರಶೇಖರ್, ಸುಧಾಕರ್ ಶೆಟ್ಟಿ, ಸೂರಜ್ ಸೋನಿ ನಾಯಕ್ ಸೇರಿ 21 ಸದಸ್ಯರಿದ್ದಾರೆ. ಕೋರ್ ಕಮಿಟಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ಆಗಸ್ಟ್ 20ರಿಂದ ರಾಜ್ಯ ಪ್ರವಾಸ:

ಪಕ್ಷ ಸಂಘಟನೆ, ಪಕ್ಷದ ಬಲವರ್ಧನೆ, ಮುಂಬರುವ ಲೋಕಸಭಾ ಚುನಾವಣೆ, ತಾ.ಪಂ, ಜಿ.ಪಂ, ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ.

ಆಗಸ್ಟ್ 20 ರಿಂದ ಸೆಪ್ಟೆಂಬರ್ 30ರ ವರೆಗೂ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಾಗುತ್ತದೆ. ಸೆಪ್ಟೆಂಬರ್ ನಲ್ಲಿ ವರದಿ ನೀಡಿದ ಬಳಿಕ ಪದಾಧಿಕಾರಿಗಳ ಬದಲಾವಣೆ ಆಗಲಿದೆ ಎಂದು ಇಬ್ರಾಹಿಂ ಅವರು ಹೇಳಿದರು.

ರಾಜ್ಯ ಸರ್ಕಾರದ ವೈಫಲ್ಯ ಬಗ್ಗೆ ಚರ್ಚೆ ಮಾಡಿದ್ದೇವೆ. ರೈತರು ಕಂಗಾಲಾಗಿದ್ದಾರೆ. ಕೃಷಿ ಸಚಿವರೇ ಹೇಳಿರುವಂತೆ ಮಳೆ ಬಾರದಿದ್ದರೆ, ಬಿತ್ತಿರೋ ಬೆಳೆ ಒಣಗುತ್ತದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟಿರುವುದರ ಬಗ್ಗೆಯೂ ಚರ್ಚೆಯಾಗಿದೆ. ಕೂಡಲೇ ಸರ್ವ ಪಕ್ಷದ ಸಭೆ  ಕರೆಯಬೇಕು ಎಂದು ಅವರು  ಆಗ್ರಹಿಸಿದರು.

ಜೆಡಿಎಸ್‌ ಪಕ್ಷಕ್ಕೆ ಜನ ಮತ ಕೊಟ್ಟಿಲ್ಲ. ಆದರೂ ಪಕ್ಷ ರೈತರ ಕೈಬಿಡಲ್ಲ ಅಂತ ಸಂದೇಶ ಕೊಡಲಿದ್ದೇವೆ. ನಾವೆಲ್ಲಾ ಒಗ್ಗಟ್ಟಾಗಿ ಪಕ್ಷ ಬಲಪಡಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ  ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಶಾಸಕ ಕೃಷ್ಣಾರೆಡ್ಡಿ, ದೊಡ್ಡಪ್ಪಗೌಡ ಎಸ್.ಪಾಟೀಲ್ ನರಿಬೋಳ ಉಪಸ್ಥಿತರಿದ್ದರು.

ನಂತರ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆದಿದ್ದು, ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಮುಂಬರುವ ಚುನಾವಣೆ ಸಂಬಂಧ ರಾಜ್ಯ ಪ್ರವಾಸದ ಬಗ್ಗೆ ಚರ್ಚೆ ನಡೆಯಿತು.

Join Whatsapp