ಸಕ್ರಿಯ ರಾಜಕಾರಣಕ್ಕೆ ಎಸ್. ಎಂ. ಕೃಷ್ಣ ಗುಡ್ ಬೈ

Prasthutha|

ಬೆಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದಾರೆ.

- Advertisement -


ಸಕ್ರಿಯ ರಾಜಕಾರಣದಿಂದ ನಾನು ದೂರ ಸರಿಯುತ್ತಿದ್ದೇನೆ. ನಮ್ಮ ವಯಸ್ಸಿನ ಬಗ್ಗೆ ಅರಿವಿರಬೇಕು. 90 ರಲ್ಲಿ 50 ರ ತರಹ ನಟನೆ ಮಾಡಲು ಆಗಲ್ಲ. ಸಾರ್ವಜನಿಕ ಜೀವನದಿಂದ ದೂರ ಇರಬೇಕು ಎಂದು ತೀರ್ಮಾನ ಮಾಡಿದ್ದೇನೆ. ಹಾಗಾಗಿಯೇ ನಾನು ಎಲ್ಲೂ ಈಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮಗಳಿಗೆ ವಿವರ ನೀಡಿರುವ ಅವರು, ನಾನೇ ರಿಟೈರ್ ಆಗುವಾಗ ಭಾರತೀಯ ಜನತಾ ಪಕ್ಷ ನನ್ನನ್ನು ಕಡೆಗಣಿಸಿದೆ ಎಂಬ ಪ್ರಶ್ನೆ ಬರಲ್ಲ ಎಂದರು.


ರಾಜಕೀಯವಾಗಿ ನಿವೃತ್ತಿ ಬಗ್ಗೆ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದೀರಾ ಎಂಬ ಪ್ರಶ್ನೆಗೆ ಅವರು, ನನಗೆ ಪೆನ್ಶನ್ ಕೊಡಲ್ಲ. ಹೀಗಾಗಿ ಅವರ ಗಮನಕ್ಕೆ ತಂದಿಲ್ಲ. ನಾನೇ ಸ್ವಯಂ ಪ್ರೇರಿತರಾಗಿ ರಿಟೈರ್ (ನಿವೃತ್ತಿ) ಆಗುತ್ತಿರುವಾಗ ಇದರ ಬಗ್ಗೆ ಹೇಳಲ್ಲ. ವಯಸ್ಸಿಗೆ ಬೆಲೆ ಕೊಟ್ಟು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.

- Advertisement -


ಮೈಸೂರು ರಸ್ತೆಗೆ ಹೆಸರಿಡುವ ವಿಚಾರ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶ ಕಂಡ ಮಹಾನ್ ವ್ಯಕ್ತಿ. ಅಭಿವೃದ್ಧಿ ವಿಚಾರವಾಗಿ ಅನೇಕ ಕೆಲಸ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ದಶಪಥ ಹೆದ್ದಾರಿಗೆ ಇಡಲು ಕೆಂದ್ರ ಹೆದ್ದಾರಿ ಮತ್ತು ಜಲಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಅವರು ಏನು ಮಾಡ್ತಾರೆ ಎಂಬುದನ್ನು ನೋಡಬೇಕು ಎಂದು ಹೇಳಿದರು.


ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ವಿಧದ ರಾಜಕೀಯ ಜೀವನವನ್ನು ಅನುಭವಿಸಿರುವ ಎಸ್ಎಂ ಕೃಷ್ಣ 1999ರಿಂದ 2004ರ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ರಾಜ್ಯಸಭೆಗೆ ಆಯ್ಕೆಯಾದ ಅವರು ಕೇಂದ್ರ ಸಚಿವರಾಗಿ ಹಾಗೂ ನಂತರ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಎಸ್ ಎಂ ಕೃಷ್ಣ ಇದೀಗ ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

Join Whatsapp