ಬಿಹಾರ, ಉತ್ತರ ಪ್ರದೇಶದ ಜನರಿಗೆ ಅವಮಾನ ಆರೋಪ: ಪಂಜಾಬ್ ಸಿಎಂ ಚನ್ನಿ ವಿರುದ್ಧ ಎಫ್ಐಆರ್

Prasthutha|

ಪಾಟ್ನಾ: ಉತ್ತರ ಪ್ರದೇಶ ಮತ್ತು ಬಿಹಾರದ ಭಯ್ಯಾಗಳು ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ನೀಡಿದ ಹೇಳಿಕೆಯ ವಿರುದ್ಧ ಬಿಹಾರದ ಪಾಟ್ನಾದಲ್ಲಿ ಬಿಜೆಪಿಯ ಯುವ ಘಟಕ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಎಫ್ಐಆರ್ ದಾಖಲಾಗಿದೆ.

- Advertisement -

ಚನ್ನಿಯವರು ಚುನಾವಣಾ ಪ್ರಚಾರ ಜಾಥಾವೊಂದರಲ್ಲಿ ಮಾತನಾಡುತ್ತ, ಮುಖ್ಯವಾಗಿ ಆಮ್ ಆದ್ಮಿ ಪಕ್ಷದವರನ್ನು ಉದ್ದೇಶಿಸಿ ಉತ್ತರ ಪ್ರದೇಶ ಮತ್ತು ಬಿಹಾರದ ಭಯ್ಯಾಗಳಿಗೆ ಪ್ರವೇಶ ನೀಡಬೇಡಿ ಎಂದು ಹೇಳಿದ್ದನ್ನು ವಿವಾದ ಮಾಡಲಾಗಿದೆ.

ಪಾಟ್ನಾದ ಕಡಂಕೌನ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಮನೀಸ್ ಕುಮಾರ್ ಸಿಂಗ್ ದೂರು ದಾಖಲಿಸಿದ್ದರು.

- Advertisement -

“ಪಂಜಾಬ್ ಮುಖ್ಯಮಂತ್ರಿ ಪಂಜಾಬಿಗೆ ಉತ್ತರ ಪ್ರದೇಶ ಮತ್ತು ಬಿಹಾರದವರನ್ನು ಬರಲು ಬಿಡುವುದಿಲ್ಲ ಎಂಬ ಮಾದರಿಯ ಹೇಳಿಕೆ ನೀಡಿದ್ದಾರೆ. ಭಾರತದ ಯಾರು ಬೇಕಾದರೂ ದೇಶದೊಳಗೆ ಎಲ್ಲಿಗೆ ಬೇಕಾದರೂ ಹೋಗುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಪಂಜಾಬ್ ಮುಖ್ಯಮಂತ್ರಿ ತಮ್ಮ ಹೇಳಿಕೆಯಿಂದ ಬಿಹಾರ ಮತ್ತು ಉತ್ತರ ಪ್ರದೇಶದ ಜನರನ್ನು ಅವಮಾನಿಸಿದ್ದಾರೆ. ಚನ್ನಿ ಕ್ಷಮಾಪಣೆ ಕೇಳುವವರೆಗೆ ನಾವು ಪ್ರತಿಭಟಿಸುವೆವು” ಎಂದು ಮನೀಸ್ ಹೇಳಿದ್ದಾರೆ.

ನಾನು ಉತ್ತರ ಪ್ರದೇಶ ಮತ್ತು ಬಿಹಾರದ ಭಯ್ಯಾ ಎಂದು ನೀಡಿರುವ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ಚನ್ನಿ ಸ್ಪಷ್ಟನೆ ನೀಡಿದ್ದಾರೆ.

“ನನ್ನ ಹೇಳಿಕೆ ತಿರುಚಲಾಗಿದೆ. ಪಂಜಾಬಿಗೆ ಈಗಾಗಲೇ ಬಂದು ಬದುಕುತ್ತಿರುವ, ಹೋಗಿರುವ ಉತ್ತರ ಪ್ರದೇಶ, ಬಿಹಾರದ ವಲಸೆ ಕಾರ್ಮಿಕರು ಪಂಜಾಬಿನ ಅಭಿವೃದ್ಧಿಗೆ ತಮ್ಮ ಕಾಣಿಕೆ ನೀಡಿದ್ದಾರೆ.” ಎಂದು ಚನ್ನಿ ತಿಳಿಸಿದ್ದಾರೆ.

 ಪಂಜಾಬಿನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರ ನಡೆಯಲ್ಲಿ ಯು.ಪಿ., ಬಿಹಾರದ ಭಯ್ಯಾ ಎಂದು ಚನ್ನಿಯವರು ಹೇಳಿರುವುದು ಖಂಡನೀಯ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಚನ್ನಿಯವರು “ಪಂಜಾಬಿನ ಸೊಸೆ ಪ್ರಿಯಾಂಕಾ ಗಾಂಧಿಯವರು ಬಂದಿದ್ದಾರೆ, ಪಂಜಾಬನ್ನು ಆಳಲು ಬರುತ್ತಿರುವ ಉತ್ತರ ಪ್ರದೇಶ ಮತ್ತು ಬಿಹಾರದ ಭಯ್ಯಾಗಳಿಗೆ ಅವರು ಅವಕಾಶ ನೀಡುವುದಿಲ್ಲ” ಎಂದು ಹೇಳಿರುವುದೇ ಇದಕ್ಕೆಲ್ಲ ಮೂಲ. ಇದನ್ನು ಚನ್ನಿಯವರು ಹೇಳುವಾಗ ಪ್ರಿಯಾಂಕಾ ಪಕ್ಕದಲ್ಲೇ ನಗುತ್ತ ನಿಂತಿದ್ದರು.

Join Whatsapp