ನದಿಯಲ್ಲಿ ಮುಳುಗಿ ತಂದೆ-ಮಗ ಮೃತ್ಯು

Prasthutha|

ಮಾಗುಂಡಿ ಸಮೀಪ ಭದ್ರ ನದಿಯಲ್ಲಿ ಮುಳುಗಿ ತಂದೆ ಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

- Advertisement -

ಮೃತರನ್ನು ಮೂಡಿಗೆರೆ ಸಮೀಪದ ಹಂಡುಗುಳಿ ಗ್ರಾಮದ ಲೋಕೇಶ್(40 ವರ್ಷ) ಮತ್ತು ಅವರ ಮಗ ಸಾತ್ವಿಕ್(13 ವರ್ಷ) ಎಂದು ಗುರುತಿಸಲಾಗಿದೆ.

- Advertisement -

ಮಾಗುಂಡಿ ಸಮೀಪದ ಹುಯ್ಗೆರೆ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಗೆ ಸುಗ್ಗಿ ಹಬ್ಬಕ್ಕೆಂದು ಲೋಕೇಶ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ತೆರಳಿದ್ದರು.

ಮನೆಯ ಸಮೀಪದಲ್ಲೇ ಹರಿಯುತ್ತಿರುವ ಭದ್ರ ನದಿಯ ಬಳಿಗೆ ನಿನ್ನೆ ಸಂಜೆ ಸಂಬಂಧಿಕರು ತೆರಳಿದ್ದಾರೆ. ಸಂಜೆ ಸುಮಾರು 4 ರ ಸಮಯದಲ್ಲಿ ಹೊಳೆಯಲ್ಲಿ ಬಂಡೆಯೊಂದರ ಮೇಲೆ ನಿಂತಿದ್ದ ಸಾತ್ವಿಕ್ ಕಾಲು ಜಾರಿ ನೀರಿಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ಮಗನನ್ನು ರಕ್ಷಿಸಲು ತಂದೆ ಲೋಕೇಶ್ ಸಹ ನದಿಗೆ ಹಾರಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಕುಟುಂಬದವರ ಕಣ್ಣೆದುರೇ ಇಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ರಕ್ಷಿಸಲು ಸಂಬಂಧಿಕರು ನಡೆಸಿದ ಪ್ರಯತ್ನ ವಿಫಲವಾಗಿದೆ.

ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿ ಹಂಡುಗುಳಿ ಗ್ರಾಮಕ್ಕೆ ತರಲಾಗಿದೆ.

ಮೃತರ ಕುಟುಂಬ, ಸಂಬಂಧಿಕರು ಮತ್ತು ಗ್ರಾಮಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಪದೇ ಪದೇ ಮರುಕಳಿಸುತ್ತಿರುವ ಪ್ರಕರಣಗಳು :

ಇತ್ತೀಚೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ನದಿಯಲ್ಲಿ, ಕೆರೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಅಮೂಲ್ಯ ಜೀವಗಳು ತಮ್ಮ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಲೇ ಇವೆ.
ಇದೀಗ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಬಂದಿದ್ದು ಮಕ್ಕಳು ನೀರಿನಲ್ಲಿ ಈಜಲು, ಆಟವಾಡಲು ತೆರಳುವ ಸಂದರ್ಭ ಹೆಚ್ಚಾಗಿರುತ್ತವೆ. ಪೋಷಕರು ಈ ಬಗ್ಗೆ ಬಹಳ ಜಾಗೃತರಾಗಿದ್ದು ಮಕ್ಕಳಿಗೆ ಸೂಕ್ತ ಮುನ್ನೆಚ್ಚರಿಕೆ ನೀಡುವುದು ಒಳಿತು.

Join Whatsapp