ಹಿಂದೂಗಳ ಮತಗಳಿಕೆಗಾಗಿ ಬಿಜೆಪಿಯಿಂದ ದುಷ್ಟ ಪ್ರಯತ್ನ: ಸಿದ್ದರಾಮಯ್ಯ ವಾಗ್ದಾಳಿ

Prasthutha|

ಬೆಂಗಳೂರು : ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಜನಪರವಾಗಿ ಕೆಲಸ ಮಾಡಿಲ್ಲ, ನುಡಿದಂತೆ ನಡೆದಿಲ್ಲ. ಇದರ ಬದಲು ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ಇಟ್ಟು ಜಾತಿ, ಧರ್ಮದ ನಶೆಯನ್ನು ತುಂಬಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.ಜನರ ಗಮನ ಬೇರೆಡೆಗೆ ಸೆಳೆಯಲು ಹಿಜಾಬ್ ಹಾಕುವುದನ್ನೇ ವಿವಾದವಾಗಿ ಮಾರ್ಪಾಡು ಮಾಡಿದ್ದಾರೆ. ಈ ಹಿಜಾಬ್ ಅನ್ನು ಮುಸ್ಲಿಂ ಹೆಣ್ಣು ಮಕ್ಕಳು ಬಹಳ ವರ್ಷಗಳಿಂದ ಹಾಕುತ್ತಾ ಬಂದಿದ್ದರು, ಆದರೂ ಅದರ ಬಗ್ಗೆ ತಕರಾರು ತೆಗೆದು ತಮ್ಮ ಮತ ಕ್ರೋಢೀಕರಣಕ್ಕಾಗಿ ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

 ಪ್ರದೇಶ ಯುವ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ನಲಪಡ್ ಅವರು ಅಧಿಕಾರ ಸ್ವೀಕಾರ ಮಾಡಿದ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ದೇಶದ ಮಹಿಳೆಯರು, ದಲಿತರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಸಂಕಷ್ಟ ಎದುರಿಸುತ್ತಿದ್ದಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಜನತೆ ತಮ್ಮ ಮೇಲಿರುವ ಈ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಹಿಜಾಬ್ ಇವತ್ತು ನಿನ್ನೆ ಧರಿಸಲು ಆರಂಭ ಮಾಡಿದ್ದಲ್ಲ, ಖುರಾನ್ ನಲ್ಲೂ ಈ ಬಗ್ಗೆ ಉಲ್ಲೇಖವಿದೆ. ಈ ಹಿಜಾಬ್ ಅನ್ನು ಹೆಣ್ಣು ಮಕ್ಕಳು ಧರಿಸಿದರೆ ಬೇರೆಯವರಿಗೆ ಏನು ತೊಂದರೆ? ಒಬ್ಬ ಸರ್ಕಾರಿ ಕಾಲೇಜು ಪ್ರಿನ್ಸಿಪಾಲ್ ಹಿಜಾಬ್ ಧರಿಸಿದ ಹೆಣ್ಣು ಮಕ್ಕಳನ್ನು ಒಳಗೆ ಬಿಡದೆ ಕಾಲೇಜು ಗೇಟ್ ಹಾಕ್ತಾರೆ ಎಂದರೆ ಇದಕ್ಕಿಂತ ಅಮಾನವೀಯವಾದುದ್ದು ಏನಿದೆ? ಸಂವಿಧಾನದಲ್ಲಿ ನಂಬಿಕೆ ಇದ್ದರೆ ಸರ್ಕಾರ ಕೂಡಲೇ ಇವರನ್ನು ಅಮಾನತು ಮಾಡಬೇಕಿತ್ತು. ಸಮವಸ್ತ್ರದ ಹೆಸರಲ್ಲಿ ವಿದ್ಯಾರ್ಥಿಗಳ ಮನಸಲ್ಲಿ ದ್ವೇಷ ತುಂಬಿ ಅವರ ಭವಿಷ್ಯ ಹಾಳುಮಾಡಲು ಹೊರಟಿದ್ದಾರೆ. . ನಾವು ಶಾಲೆ, ಕಾಲೇಜಿಗೆ ಹೋಗುವಾಗ ಕೇಸರಿ ಶಾಲು ಧರಿಸಿ ಬಂದಿದ್ದನ್ನು ನಾನೆಲ್ಲೂ ನೋಡಿರಲಿಲ್ಲ, ಆದರೆ ಈಗ ಸಂಘ ಪರಿವಾರದವರು ತಾವೇ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಬಲವಂತವಾಗಿ ಕೇಸರು ಶಾಲು ಧರಿಸಿಕೊಂಡು ಹೋಗುವಂತೆ ಒತ್ತಡ ಹಾಕುತ್ತಿದ್ದಾರೆ. ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುವ ಮೂಲಕ ದೇಶಕ್ಕೆ ಅವಮಾನ ಮಾಡಿದ್ದಾರೆ. ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

- Advertisement -

ಸ್ವತಂತ್ರ ಭಾರತದಲ್ಲಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ. ಅವರು ಈ ಹಿಂದೆ ನೀಡಿದ್ದ ಭರವಸೆಗಳಾದ ರೈತರ ಆದಾಯ ದುಪ್ಪಟ್ಟು ಮಾಡುವ ಬಗ್ಗೆ, ಭ್ರಷ್ಟಾಚಾರ ತೊಲಗಿಸುವ ಬಗ್ಗೆ, ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಬಗ್ಗೆ ಮಾತನಾಡಬೇಕಿತ್ತು, ಸಬ್ ಕ ಸಾಥ್ ಸಬ್ ಕ ವಿಕಾಸ್ ಎಲ್ಲಿದೆ? ಇದೇ ಕಾರಣಕ್ಕೆ ಬಜೆಟ್ ಬಗ್ಗೆ ಮಾತನಾಡುವಾಗ ನಾನು ನರೇಂದ್ರ ಮೋದಿ ಅವರದು ಸಬ್ ಕ ವಿನಾಶ್ ಎಂದು ಹೇಳಿದ್ದೆ. ಎನ್.ಸಿ.ಆರ್.ಬಿ ವರದಿ ಪ್ರಕಾರ ದೇಶದಲ್ಲಿ 16,000 ಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶ ಯಾವತ್ತು ಇಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಸಮಸ್ಯೆ ಕಂಡಿರಲಿಲ್ಲ. ಇದಕ್ಕೆ ಪ್ರಧಾನಿಗಳು ಉತ್ತರ ಕೊಡಬೇಕೋ ಬೇಡ್ವೋ? ಎಂದು ಅವರು ಪ್ರಶ್ನಿಸಿದರು.

ಕೊವಿಡ್ ಸೋಂಕಿನಿಂದ ನಾಲ್ಕು ಲಕ್ಷ ಜನ ಸತ್ತಿದ್ದಾರೆ. ಈ ಸರ್ಕಾರಕ್ಕೆ ಆಮ್ಲಜನಕ ಕೊಡಲು ಆಗಿಲ್ಲ, ಬೆಡ್, ಔಷಧಿ, ಆಂಬುಲೆನ್ಸ್ ವ್ಯವಸ್ಥೆ ಮಾಡಲು ಆಗಿಲ್ಲ. ಕೊವಿಡ್ ನಿಂದ ಸತ್ತವರಿಗೆ ಸರಿಯಾಗಿ ಪರಿಹಾರವನ್ನು ಕೊಟ್ಟಿಲ್ಲ.ಬಿಜೆಪಿಯವರಿಗೆ ಯಾವ ಸಮಸ್ಯೆಗಳನ್ನು ಪರಿಹಾರ ಮಾಡುವುದು ಬೇಕಿಲ್ಲ. ಚುನಾವಣೆ ಬಂದಾಗ ಭಾವನಾತ್ಮಕ ವಿಷಯ ಮುಂದಿಟ್ಟು ಮತ ಕೇಳುತ್ತಾರೆ. ಚುನಾವಣೆಗೆ ವರ್ಷ ಇರುವಾಗಲೇ ಹಿಜಾಬ್ ವಿಚಾರ ಮುಂದಿಟ್ಟು ಮಕ್ಕಳ ಮನಸಲ್ಲಿ ದ್ವೇಷ ತುಂಬಿ, ಸಮಾಜ ಒಡೆಯಲು ಹೊರಟಿದ್ದಾರೆ. ಸಂಘ ಪರಿವಾರದವರು ಬರಿ ಉಡುಪಿ, ಮಂಗಳೂರು ಮಾತ್ರ ಅಲ್ಲ ಇಡೀ ರಾಜ್ಯವನ್ನು ಹಾಳು ಮಾಡುತ್ತಾರೆ. ರಾಜ್ಯಕ್ಕೆ ವಿಷ ಹಾಕಿದ್ದಾರೆ, ಬೆಂಕಿ ಹಚ್ಚಿದ್ದಾರೆ. ಕೆಂಪುಕೋಟೆ ಮೇಲೆ ಮುಂದೊಂದು ದಿನ ರಾಷ್ಟ್ರ ಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಗಳು. ದೇಶದ ಬಗ್ಗೆ ಇವರಿಗೆ ಗೌರವ ಎಲ್ಲಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರದ ಬಳಿ ಸಾಧನೆಯನ್ನು ತೋರಿಸಿ ಮತ ಕೇಳಲು ಸಾಧನೆಗಳೇ ಇಲ್ಲ. ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವ ಮೋದಿ ಅವರು ಇವತ್ತಿನ ವರೆಗೆ ಆ ಬಗ್ಗೆ ಉತ್ತರ ಕೊಟ್ಟಿಲ್ಲ, ಯಾವ ಕ್ರಮ ಕೈಗೊಂಡಿಲ್ಲ. ಈ ಸುಳ್ಳನ್ನು ಜನರಿಗೆ ಅರ್ಥ ಮಾಡಿಸಿ ಬಿಜೆಪಿಯವರನ್ನು ಸಮಾಜದೆದುರು ಬೆತ್ತಲುಗೊಳಿಸಬೇಕು. ಹೀಗಾಗಿ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ನ ಸಿದ್ಧಾಂತಗಳಲ್ಲಿ ಬದ್ಧತೆ ಮತ್ತು ಸಂವಿಧಾನದ ಅರಿವು ಹೊಂದಬೇಕು. ಸಂವಿಧಾನ ಮತ್ತು ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ನೀವೆಲ್ಲ ಒಗ್ಗೂಡಿ ಕೆಲಸ ಮಾಡಬೇಕು, ತಮ್ಮ ಎಲ್ಲಾ ಒಳ್ಳೆಯ ಕೆಲಸಗಳಿಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ಹೇಳಿದರು.



Join Whatsapp