ನಾಳೆ ಸಚಿವಾಲಯ ಬಂದ್ ಗೆ ನೌಕರರ ಸಂಘ ಕರೆ; ಬಂದ್ ನಲ್ಲಿ ಪಾಲ್ಗೊಂಡರೆ ಕ್ರಮ ಎಂದ ಸರ್ಕಾರ

Prasthutha|

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘ ಶುಕ್ರವಾರ ಆಡಳಿತದ ಶಕ್ತಿ ಕೇಂದ್ರ ಸಚಿವಾಲಯದ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ವಿಧಾನಸೌಧ ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜತೆಗೆ ಈ ಬಂದ್ ಕಾನೂನು ಬಾಹಿರ ಎಂದು ರಾಜ್ಯ ಸರ್ಕಾರ ಹೇಳಿದೆ.

- Advertisement -

ಬಂದ್ ನಲ್ಲಿ ಪಾಲ್ಗೊಳ್ಳಬಾರದು. ಕಚೇರಿಗೆ ಹಾಜರಾಗುವವರನ್ನು ತಡೆಯುವುದು ಸರಿಯಲ್ಲ. ಇಂತಹ ಪ್ರಯತ್ನಗಳು ನಡೆದರೆ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ರಾಜ್ಯದ ಮುಖ್ಯಕಾರ್ಯರ್ಶಿ ಪಿ. ರವಿ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಸಚಿವರು ಮತ್ತುತರೆ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗ ಸಹ ಬಂದ್ ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಚಿವಾಲಯ ಬಂದ್ ಸಂಪೂರ್ಣ ಕಾನೂನು ಬಾಹಿರ ಮತ್ತು ಸ್ವಾರ್ಥಕ್ಕಾಗಿ ಮಾಡುತ್ತಿರುವ ಬಂದ್ ಇದಾಗಿದೆ ಎಂದು ಹೇಳಿದ್ದಾರೆ.

- Advertisement -

ಬಂದ್ ನಲ್ಲಿ ಪಾಲ್ಗೊಳ್ಳಬಾರದು ಎಂದು‌‌  ಸರ್ಕಾರ ಆದೇಶ ಜಾರಿಮಾಡಿದ್ದು, ಹೀಗಿರುವಾಗ ಸಿಬ್ಬಂದಿ/ನೌಕರರು ಇದನ್ನು ಪಾಲನೆ ಮಾಡಬೇಕೋ ಅಥವಾ ನೌಕರರ ಸಂಘದವರು ಹೇಳಿದಂತೆ ಸರ್ಕಾರ ನಡೆದು ಕೊಳ್ಳಬೇಕೋ ಎಂಬ ಗೊಂದಲವೂ ಸೃಷ್ಟಿಯಾಗಿದೆ. ಇದರ ಜತೆಗೆ ಸಾರ್ವಜನಿಕ ವಲಯಕ್ಕೆ ಈ ಬೆಳವಣಿಗೆ ತೊಂದರೆಯಾಗಿ ಪರಿಣಮಿಸಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಅವರ ಹಿತಾಸಕ್ತಿಗಾಗಿ  ಆಡಳಿತ ನಡೆಸಲು ಕೆಲವು ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಅದು ಅನಿವಾರ್ಯ ಕೂಡ. ಏಕೆಂದರೆ ಕೆ.ಪಿ.ಎಸ್ಸಿ, ಪೊಲೀಸ್ ಇತರೆ ನೇಮಕಾತಿಗಳ ಗೊಂದಲಗಳು ತಮಗೆ ತಿಳಿದಿದೆ.‌ ಆದಕಾರಣ ಸರ್ಕಾರ, ‌ಸಚಿವಾಲಯ, ನಿಗಮ, ಮಂಡಳಿಗಳಲ್ಲಿ ಗುತ್ತಿಗೆದಾರರು, ಹೊರಗುತ್ತಿಗೆ, ನಿಯೋಜನೆ, ಅನ್ಯಸೇವೆ ನಾನಾ ರೀತಿಯ ಸೇವೆಗಳಿಗೆ ಬಳಸಿಕೊಂಡಿರುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಇದರಿಂದ ಅನೇಕ ಕುಟುಂಬಗಳಿಗೆ ಉದ್ಯೋಗ ದೊರೆತು ಜೀವನಕ್ಕೆ ಸಹಾಯ ಆಗಿದೆ. ಆದರೆ ಸಚಿವಾಲಯ ನೌಕರರ ಸಂಘವು ಇದನ್ನು ವಿರೋಧಿಸಲು ಏನು ಹಕ್ಕಿದೆ ಎಂಬ ಪ್ರಶ್ನೆಯನ್ನು ಸಿಬ್ಬಂದಿ ಎತ್ತುತ್ತಿದ್ದಾರೆ.

ಸಂವಿಧಾನಾತ್ಮಕ ಹುದ್ದೆಯಾದ ಸಚಿವರ ಕಚೇರಿಯಲ್ಲಿ ಸಚಿವಾಲಯದ ನೌಕರರರನ್ನೇ ನೇಮಿಸಬೇಕು ಎನ್ನುವ ಬೇಡಿಕೆ ಸಾಧುವಲ್ಲ. ಇದು  ಅಪ್ರಸ್ತುತವಾಗಿದ್ದು, ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಸಚಿವರ ಪರಮಾಧಿಕಾರ. ಎಲ್ಲಾ ಸರ್ಕಾರಿ ನೌಕರರಂತೆ ಇವರೂ ಸರ್ಕಾರಿ ನೌಕರರಾಗಿದ್ದು, ನಮ್ಮನ್ನೇ ನಿರ್ದಿಷ್ಟ ಹುದ್ದೆಗೆ ನೇಮಿಸಿಕೊಳ್ಳುವಂತೆ ಒತ್ತಡ ಹೇರುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ.

‌ಸಚಿವಾಲಯದಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಸಚಿವರ ಕಚೇರಿಗಳಲ್ಲಿ ಸಚಿವಾಲಯದ ನೌಕರರಿಗಿಂತಲೂ ಗುತ್ತಿಗೆ, ಹೊರಗುತ್ತಿಗೆ, ನಿಯೋಜಿತ, ಅನ್ಯಸೇವೆ ನೌಕರರು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತಿರುವುದನ್ನು ಸರ್ಕಾರ ಕೂಡ ಗಮನಿಸಿದೆ. ಸಚಿವಾಲಯದ ನೌಕರರ ಸಂಘವು ಮುಂದೆ ನಮಗೆ ಭವಿಷ್ಯ ಇಲ್ಲ ಎಂದು ಭಾವಿಸಿ ಅವೈಜ್ಞಾನಿಕ ಬಂದ್ ಗೆ ಕರೆ ಕೊಟ್ಟಿದೆ. ಈಗಾಗಲೇ ಸಚಿವಾಲಯದ ನೌಕರರು  ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳನ್ನು ನೌಕರಿ ‌ಸ್ಥಳ ಎಂಬುದನ್ನು ಮರೆತು ತಮ್ಮ ಪಿತ್ರಾರ್ಜಿತ ಆ‌‌‌ಸ್ತಿ ಎಂಬಂತೆ ದರ್ಪದಿಂದ ವರ್ತಿಸುತ್ತಿದ್ದಾರೆ. ವಿಧಾನಸೌಧದಲ್ಲಿ ವಾಹನ ಪಾರ್ಕಿಂಗ್ ಪಾಸು ವಿತರಣೆ, ಗುರುತಿನ ಚೀಟಿ ನೀಡಿಕೆ, ಇನ್ನೂ ಅನೇಕ ವಿಚಾರಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಆಡಳಿತ ಸುಧಾರಣಾ ಆಯೋಗ ಮತ್ತು ಸಚಿವ ಸಂಪುಟ ಉಪ ಸಮಿತಿ ಸಭೆಗಳ ಶಿಫಾರಸ್ಸು ಇವರಿಗೆ ಅಪಥ್ಯವಾಗಿದೆ. ಅರಣ್ಯ ಇಲಾಖೆ, ಪೋಲಿಸ್, ಇಂಧನ, ಅಗ್ನಿಶಾಮಕ ಇಲಾಖೆ ಹೀಗೆ ಕೆಲವೇ ಇಲಾಖೆಯಲ್ಲಿರುವ ಅನುಕಂಪ ಆಧಾರದ ‌ಹುದ್ದೆಯನ್ನು ಸಚಿವಾಲಯದ ನೌಕರರಿಗೆ ಏಕೆ ನೀಡಬೇಕು. ಕೂಡಲೇ ಇದನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ  ಎಲ್ಲಾ ಇಲಾಖೆಗಳಿಗೂ ಅನುಕಂಪದ ಆಧಾರದ ಹುದ್ದೆ ನೀಡುವುದನ್ನು ವಿಸ್ತರಣೆ ಮಾಡಬೇಕು. ಎಲ್ಲಾ ಸರ್ಕಾರಿ ನೌಕರರಿಗೆ ಇರುವಂತೆ ಸಚಿವಾಲಯದ ನೌಕರರನ್ನು ಏಕೆ ವರ್ಗಾವಣೆ ವ್ಯಾಪ್ತಿಗೆ ತಂದಿಲ್ಲ. ಇವರು  ಸಹ ಬೇರೆ ಸರ್ಕಾರಿ ನೌಕರರಂತೆ ಬೇರೇ ಬೇರೇ ಇಲಾಖೆ, ಆಯುಕ್ತಾಲಯ, ನಿರ್ದೇಶನಾಲಯ, ಜಿಲ್ಲಾಧಿಕಾರಿ ಕಚೇರಿ ಹೀಗೆ ಬೇರೆಡೆ ಕೆಲಸ ನಿರ್ವಹಿ‌ಸಲು ಸರ್ಕಾರ ಆದೇಶ ನೀಡುವ ಮೂಲಕ ‌ಎಲ್ಲಾ ಸರ್ಕಾರಿ ನೌಕರರಿಗೂ ಸಮಾನತೆ ದೊರಕಿಸಿಕೊಡಬೇಕು ಎನ್ನುವುದು ಇವರ ಬೇಡಿಕೆಯಾಗಿದೆ.

Join Whatsapp