November 13, 2020
ಎಲ್ಗಾರ್ ಪರಿಷದ್ ಪ್ರಕರಣ | ವರವರ ರಾವ್ ಗೆ ವೀಡಿಯೊ ಕರೆ ಮೂಲಕ ನಾನಾವತಿ ವೈದ್ಯರಿಂದ ಚಿಕಿತ್ಸೆ ಕೊಡಿಸಲು ಹೈಕೋರ್ಟ್ ಸೂಚನೆ

ಮುಂಬೈ : ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿರುವ ವರವರ ರಾವ್ ಅವರ ವೈದ್ಯಕೀಯ ಪರೀಕ್ಷೆಗೆ ವ್ಯವಸ್ಥೆ ಮಾಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ತಲೋಜ ಜೈಲು ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ರಾವ್ ಅವರಿಗೆ ಈ ಹಿಂದೆ ಚಿಕಿತ್ಸೆ ನೀಡಿದ್ದ ನಾನಾವತಿ ಆಸ್ಪತ್ರೆಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ವೀಡಿಯೊ ಕಾಲ್ ವ್ಯವಸ್ಥೆ ಮಾಡುವಂತೆ ಕೋರ್ಟ್ ಸೂಚಿಸಿದೆ. ವೀಡಿಯೊ ಕಾಲ್ ಮೂಲಕ ಚಿಕಿತ್ಸೆ ನೀಡುವುದು ಅಸಾಧ್ಯವೆಂದು ವೈದ್ಯರು ತಿಳಿಸಿದರೆ, ಸಾಧ್ಯವಾದಷ್ಟು ಬೇಗ ತಲೋಜ ಜೈಲಿಗೆ ಭೇಟಿ ನೀಡಲು ವೈದ್ಯರು ಮುಕ್ತರಾಗಿದ್ದಾರೆ. ನ.16ರೊಳಗೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ರಾವ್ ಅವರ ಪತ್ನಿ ಪೆಂಡ್ಯಾಲ ಹೇಮಲತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎ.ಕೆ. ಮೆನನ್ ಮತ್ತು ನ್ಯಾ. ಎಸ್.ಪಿ. ತಾವಡೆ ಈ ನಿರ್ದೇಶನಗಳನ್ನು ನೀಡಿದ್ದಾರೆ.