ಮತಪಟ್ಟಿ ಹಗರಣ: ಬೆಂಗಳೂರಿನ ಎಲ್ಲಾ 28 ಚುನಾವಣಾಧಿಕಾರಿಗಳ ವಿರುದ್ಧ ಎಫ್’ಐಆರ್ ದಾಖಲಾಗಬೇಕು- ಡಿಕೆಶಿ

Prasthutha|

ಬೆಂಗಳೂರು: ನಾಳೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ಭೇಟಿಗೆ ಕಾಲಾವಕಾಶ ಕೇಳಿದ್ದೇವೆ. ಮತಪಟ್ಟಿ ಹಗರಣ ಸಂಬಂಧ ಪೊಲೀಸ್ ಅಧಿಕಾರಿಗಳು ಯಾವ ರೀತಿ ವಿಚಾರಣೆ ಮಾಡುತ್ತಾರೆ ಎಂದು ಕಾದು ನೋಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ದಾಖಲೆಗಳು ಇವೆ. ನಮಗೆ ಮೇಲಿನಿಂದ ಆದೇಶ ಬಂದ ಹಿನ್ನೆಲೆಯಲ್ಲಿ ನಾವು ಈ ಕೆಲಸ ಮಾಡಿದ್ದೇವೆ ಎಂದು ಚುನಾವಣಾಧಿಕಾರಿಗಳೇ ಒಪ್ಪಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.  ಈ ಅಕ್ರಮಕ್ಕೆ ಆದೇಶ ಕೊಟ್ಟ ಮೇಲಿನವರು ಯಾರು? ಕೆಳ ಮಟ್ಟದಲ್ಲಿರುವ ಒಂದಿಬ್ಬರನ್ನು ಬಂಧಿಸುವುದರಿಂದ ಪ್ರಕರಣ ಇತ್ಯರ್ಥವಾದಂತಲ್ಲ. ಯಾರು ಪ್ರಕರಣದ ರೂವಾರಿಗಳಾಗಿದ್ದಾರೋ, ಯಾರು ಕಿಂಗ್ ಪಿನ್’ ಗಳಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಭಾಗಿಯಾಗಿರುವ ಶಾಸಕರು, ಸಚಿವರ ಮಾತುಕತೆ, ಅವರ ವಹಿವಾಟಿನ ದಾಖಲೆಗಳು ನಮ್ಮ ಬಳಿ ಇವೆ ಎಂದರು.

ಬೆಂಗಳೂರಿನ ಎಲ್ಲಾ 28 ವಿಧಾನಸಭೆ ಕ್ಷೇತ್ರಗಳ ಚುನಾವಣಾಧಿಕಾರಿಗಳ ವಿರುದ್ಧ ಎಫ್’ಐಆರ್ ದಾಖಲಾಗಬೇಕು ಎಂದರು.

- Advertisement -

ಮಲ್ಲೇಶ್ವರಂನಲ್ಲಿ ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ನಾನು ಇಲ್ಲಿ ಈ ಬಗ್ಗೆ ಮಾತನಾಡುವುದಿಲ್ಲ. ಈ ಪ್ರಕರಣ ಮುಚ್ಚಿಹಾಕಲು ಪೊಲೀಸ್ ಅಧಿಕಾರಿಗಳು ಹೇಗೆ ಪ್ರಯತ್ನಿಸುತ್ತಿದ್ದಾರೆ ಎಂದು ನೋಡುತಿದ್ದೇವೆ ಈ ಹಿಂದೆ ರೇಪ್ ಪ್ರಕರಣ, 40% ಕಮಿಷನ್ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಹಾಗೂ ಯಡಿಯರಪ್ಪನವರು ಕ್ಲೀನ್’ ಚಿಟ್ ನೀಡಿದ್ದರು. ಅದೇ ರೀತಿ ಬಿ ರಿಪೋರ್ಟ್ ಬರೆದಿದ್ದಾರೆ. ಈ ಪ್ರಕರಣದಲ್ಲೂ ಹಾಗೆ ಮಾಡುವ ಅನುಮಾನವಿದೆ ಎಂದರು.

ಈಗ ಕಾಂಗ್ರೆಸ್ ಮೇಲೆ ತಪ್ಪು ಹೊರಿಸಲು ಪ್ರಯತ್ನಿಸುತ್ತಿದ್ದಾರೆ. 2013 ರಿಂದ ಈ ಚಿಲುಮೆ ವ್ಯವಹಾರ ತನಿಖೆ ಮಾಡಿಸಲು ಮುಂದಾಗಿರುವ ಮುಖ್ಯಮಂತ್ರಿಗಳ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ನಾವು ಮತದಾರರ ಮಾಹಿತಿ ದುರ್ಬಳಕೆ ಮಾಡಿಕೊಂಡಿದ್ದರೆ ನಮಗೂ ಶಿಕ್ಷೆ ಆಗಲಿ ಎಂದರು.

ಬಿಜೆಪಿ ಸರ್ಕಾರ ಮತದಾರರ ಮಾಹಿತಿ ಪಡೆದು ಅದರ ದುರ್ಬಳಕೆ ಮಾಡಿಕೊಂಡಿದೆ. ಮತ ಮತ್ತು ಮತದಾರರನ್ನೇ ಮಾರಾಟ ಮಾಡಲು ಮುಂದಾಗಿದೆ. ಆ ಮೂಲಕ ಭ್ರಷ್ಟಾಚಾರ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ಪರಿಶಿಷ್ಟರ ಹೆಸರನ್ನು ಮತಪಟ್ಟಿಯಿಂದ ಕೈ ಬಿಡಲಾಗಿದೆ. ಮತಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ಒಬ್ಬರು, ಇಬ್ಬರು ಭಾಗಿಯಾಗಿಲ್ಲ. ಅನೇಕರು ಇದ್ದಾರೆ. ನಾವು ಇದರ ಭಾಗವಾಗಿದ್ದ ಹುಡುಗರ ಜತೆ ಮಾತನಾಡುತ್ತಿದ್ದೇವೆ. ಈ ಹಗರಣದಲ್ಲಿ ಎಷ್ಟು ಹಣ ಕಲೆ ಹಾಕಲಾಗಿದೆ ಎಂದೂ ಗೊತ್ತಿದೆ ಎಂದು ಡಿಕೆಶಿ ಹೇಳಿದರು.

ಪೊಲೀಸರು ಹೇಗೆ ತನಿಖೆ ಮಾಡುತ್ತಾರೆ, ಈ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮಧ್ಯಪ್ರವೇಶ ಮಾಡುತ್ತಾರಾ ಎಂದು ಕಾದು ನೋಡುತ್ತೇವೆ. ಅದರ ಆಧಾರದ ಮೇಲೆ ನಾವು ಮುಂದಿನ ಹೆಜ್ಜೆ ತೀರ್ಮಾನಿಸುತ್ತೇವೆ.  ಈ ಪ್ರಕರಣದಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿರುವ ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ‘ ಈಗ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ನನಗೂ ಇಲ್ಲ, ಸಿದ್ದರಾಮಯ್ಯ ಅವರಿಗೂ ಇಲ್ಲ. ಆ ಅಧಿಕಾರ ಏನಿದ್ದರೂ ಎಐಸಿಸಿಗೆ ಇದೆ. ಯಾವ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಅಲ್ಲಿರುವವರಿಗೆ ಉತ್ತೇಜನ ನೀಡಲು ಹೇಳಿರಬಹುದು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಹೈಕಮಾಂಡ್ ಗೆ ಮಾತ್ರ ಅಭ್ಯರ್ಥಿ ತೀರ್ಮಾನಿಸುವ ಅಧಿಕಾರ ಇದೆ ‘ ಎಂದು ತಿಳಿಸಿದರು.

Join Whatsapp