ವಾಮಮಾರ್ಗದಲ್ಲಿ ಇಡಿ ಕೆಲಸ ಮಾಡುತ್ತಿದೆ, ನಾವು ಅವರಿಗೆ ಹೆದರುವುದಿಲ್ಲ: ಸಿಎಂ ಸಿದ್ದರಾಮಯ್ಯ

Prasthutha|

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದುರ್ಬಲಗೊಳಿಸುವ ಯತ್ನ ನಡೆದಿದೆ. ಇಡಿಯವರ ಬೆದರಿಕೆಗಳಿಗೆ ನಾವು ಬೆದರುವುದಿಲ್ಲ. ಇಡಿ ತನಿಖೆ ನಡೆಸುವುದಕ್ಕೆ ನಮಗೆ ತಕರಾರಿಲ್ಲ. ಆದರೆ ನಮ್ಮ ಸರ್ಕಾರವನ್ನ ಗುರಿಯಾಗಿಸುವ ಕೆಲಸ ಮಾಡುತ್ತಿದೆ. ಕಾನೂನಿಗೆ ವಿರುದ್ಧವಾಗಿ ವಾಮಮಾರ್ಗವಾಗಿ ಇಡಿ ಕೆಲಸ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

- Advertisement -


ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಎಂ, ಡಿಸಿಎಂ ಹಾಘೂ ಮಾಜಿ ಸಚಿವ ಬಿ. ನಾಗೇಂದ್ರ ಹೆಸರೇಳುವಂತೆ ಕಿರುಕುಳ ಆರೋಪಕ್ಕೆ ಸಂಬಂಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಸಚಿವರಾದ ಡಾ.ಜಿ.ಪರಮೇಶ್ವರ್, ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಹೆಚ್.ಕೆ.ಪಾಟೀಲ್, ಭೈರತಿ ಸುರೇಶ್, ಲಾಡ್, ಕೆ.ಎನ್.ರಾಜಣ್ಣ, ಕೃಷ್ಣಭೈರೇಗೌಡ, ಎಂ.ಬಿ.ಪಾಟೀಲ್, ವೆಂಕಟೇಶ್, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ರಹೀಂ ಖಾನ್, ಎಂ.ಸಿ.ಸುಧಾಕರ್, ಶರಣಪ್ರಕಾಶ್ ಪಾಟೀಲ್ ಸೇರಿ ಹಲವರು ಭಾಗಿಯಾಗಿದ್ದಾರೆ. ಇಡಿ ಅಧಿಕಾರಿಗಳ ನಡೆ ಖಂಡಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.


ಪ್ರತಿಭಟನೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ತನಿಖೆ ಮಾಡುತ್ತಿದ್ದಾರೆ. ಒಂದೇ ಕೇಸ್ ನಲ್ಲಿ ಮೂರು ತನಿಖಾ ಸಂಸ್ಥೆ ವಿಚಾರಣೆ ಮಾಡುತ್ತಿವೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ನಾವು ಹೇಳ್ತಿಲ್ಲ. ವಿಪಕ್ಷದವರು 186 ಕೋಟಿ ದುರುಪಯೋಗ ಆಗಿದೆ ಅಂತಿದ್ದಾರೆ. ನಿಗಮದ ಹಣ ವರ್ಗಾಣೆ ಆಗಿರುವುದು 89.63 ಕೋಟಿ ರೂ. ಪ್ರಕರಣ ಸಂಬಂಧ ಈಗಾಗಲೇ 12 ಆರೋಪಿಗಳ ಬಂಧನವಾಗಿದೆ. ಅಧಿಕಾರಿಗಳು ಈಗಾಗಲೇ $34 ಕೋಟಿ ರಿಕವರಿ ಮಾಡಿದ್ದಾರೆ. ಶೇಕಡಾ 90ರಷ್ಟು ಎಸ್ಐಟಿ ಅಧಿಕಾರಿಗಳ ತನಿಖೆ ಮುಗಿದಿದೆ. ಬ್ಯಾಂಕ್ ಅಧಿಕಾರಿಗಳ ದೂರಿನ ಮೇರೆಗೆ ಸಿಬಿಐ ತನಿಖೆ ಮಾಡ್ತಿದೆ. ಆದ್ರೆ ಇಡಿ ತಂಡ ಸ್ವಯಂ ಪ್ರೇರಣೆಯಿಂದ ತನಿಖೆ ಮಾಡುತ್ತಿದೆ. ಪ್ರಕರಣ ಸಂಬಂಧ ಅಧಿಕಾರಿ ಕಲ್ಲೇಶ್ ರನ್ನು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಸಿಎಂ, ಡಿಸಿಎಂ, ಸಚಿವರ ಹೆಸರೇಳುವಂತೆ ಒತ್ತಡ ಹಾಕಿದ್ದಾರೆ ಎಂದರು.



Join Whatsapp