ಅರ್ಪಿತಾ ಮುಖರ್ಜಿಯ ಮತ್ತೊಂದು ನಿವಾಸದ ಮೇಲೆ ಇ.ಡಿ ದಾಳಿ; ತಡರಾತ್ರಿವರೆಗೂ ಮುಂದುವರಿದ ಹಣ ಎಣಿಕೆ ಪ್ರಕ್ರಿಯೆ

Prasthutha|

ಕಲ್ಕತ್ತ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮತ್ತೊಂದು ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದೆ.

- Advertisement -

20 ಕೋಟಿಗೂ ಹೆಚ್ಚು ನಗದು ಮತ್ತು ಮೂರು ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ತಡರಾತ್ರಿವರೆಗೂ ಹಣ ಎಣಿಕೆ ಪ್ರಕ್ರಿಯೆ ಮುಂದುವರೆದಿತ್ತು ಎಂದು ಜಾರಿ ನಿರ್ದೇಶನಾಲಯದ  ಮೂಲಗಳು ತಿಳಿಸಿವೆ.

ಜುಲೈ 23ರಂದು ಅರ್ಪಿತಾ ಅವರ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು 21 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದರು.

- Advertisement -

‘ಬೆಲ್‌ಘಾರಿಯಾದಲ್ಲಿರುವ ಅವರ ನಿವಾಸದಿಂದ ಹಣ ಜಪ್ತಿ ಮಾಡಲಾಗಿದ್ದು, ಮೊತ್ತವು ಸುಮಾರು ₹ 21.20 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಇದೇ ಸಮಯದಲ್ಲಿ ಚಿನ್ನದ ಗಟ್ಟಿ ಮತ್ತು ಕೆಲವು ಆಭರಣಗಳು ಸೇರಿ 3 ಕೆ.ಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ’ಎಂದು ಇ.ಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ಸಂಜೆ, ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿಯ ಬೆಂಗಾವಲಿನಲ್ಲಿ ಮುಖರ್ಜಿ ಅವರ ನಿವಾಸದ ಬೀಗವನ್ನು ಮುರಿದು, ಬೆಡ್‌ರೂಮ್‌ನ ಬೀಗವನ್ನು ತೆರೆದಾಗ ನೋಟಿನ ಕಂತೆಗಳು ಕಂಡು ಬಂದವು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ನೋಟುಗಳನ್ನು ಎಣಿಸಲು ಸಹಾಯಕ್ಕಾಗಿ ಕೋಲ್ಕತ್ತಾದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿದಾಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಾಲ್ವರು ಅಧಿಕಾರಿಗಳು ಹಣ ಎಣಿಕೆ ಯಂತ್ರಗಳೊಂದಿಗೆ ಬಂದಿರುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp