ಜಾರಿ ನಿರ್ದೇಶನಾಲಯದಿಂದ ಓಮರ್ ಅಬ್ದುಲ್ಲಾ ವಿಚಾರಣೆ

Prasthutha|

ನವದೆಹಲಿ: 12 ವರ್ಷಗಳ ಹಿಂದೆ ಮುಂಬೈನಲ್ಲಿ ಜಮ್ಮು, ಕಾಶ್ಮೀರದ ಬ್ಯಾಂಕ್ ಕಟ್ಟಡವನ್ನು ಖರೀದಿಸಿದ್ದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಅರು ಗುರುವಾರ ಬೆಳಿಗ್ಗೆ ತನಿಖಾ ಸಂಸ್ಥೆಯ ಪ್ರಧಾನ ಕಚೇರಿಗೆ ಆಗಮಿಸಿದ್ದು, ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ಆರಂಭದಲ್ಲಿ ಜಾರಿ ನಿರ್ದೇಶನಾಲಯ ಈ ಪ್ರಕರಣವನ್ನು ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.

- Advertisement -

ಈ ಮಧ್ಯೆ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಅವರನ್ನು ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ ನಡೆಯನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಗುರುವಾರ ಖಂಡಿಸಿದೆ. ಇದು ಮಾಜಿ ಮುಖ್ಯಮಂತ್ರಿಗೆ ಮಾಡಿದ ಅವಮಾನ ಮತ್ತು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ನಿರಂತರ ದುರ್ಬಳಕೆ ಮಾಡಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದು ಅದು ಆರೋಪಿಸಿದೆ.

ತನಿಖೆಗೆ ಸಂಬಂಧಿಸಿದಂತೆ ಅಬ್ದುಲ್ಲಾ ಅವರ ಉಪಸ್ಥಿತಿ ಅಗತ್ಯ ಎಂಬ ಕಾರಣಕ್ಕಾಗಿ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಕೇಳಲಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಬಿಜೆಪಿಗೆ ವಿರೋಧ ವ್ಯಕ್ತಪಡಿಸುವ ಯಾವುದೇ ರಾಜಕೀಯ ಪಕ್ಷವನ್ನು ಇಡಿ, ಸಿಬಿಐ, ಎನ್.ಐ.ಎ, ಎನ್.ಸಿ.ಬಿ ಮೂಲಕ ಇಂದು ಗುರಿಯಾಗಿಸಲಾಗುತ್ತಿದೆ ಎಂದು ವಕ್ತಾರರು ಆತಂಕದಿಂದ ತಿಳಿಸಿದ್ದಾರೆ.

Join Whatsapp