ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಹೆಸರಿಗೆ ಕತ್ತರಿ: ಡಿ.ಕೆ. ಶಿವಕುಮಾರ್ ಕಿಡಿ

Prasthutha|

ಬೆಂಗಳೂರು: ಇಡೀ ರಾಷ್ಟ್ರದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಯಷ್ಟು ಬೇರೆ ಯಾರ ಪುತ್ಥಳಿಯೂ ಇಲ್ಲ. ಸಂವಿಧಾನದಲ್ಲಿ ನಮ್ಮ ಎಲ್ಲಾ ಧರ್ಮ, ಜಾತಿ, ಪದ್ಧತಿ, ಸಂಸ್ಕೃತಿಗೆ ಸಮಾನ ಹಕ್ಕು ಕೊಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

- Advertisement -

ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಹೆಸರನ್ನು ಅಳಿಸಿ ಹಾಕಿರುವ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿರುವ ಡಿಕೆಶಿ, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ನೇತತ್ವದ ಸಂವಿಧಾನ ಕರಡು ಸಮಿತಿ ರಚಿಸಿ, ಸಂವಿಧಾನ ರಚನೆ ಜವಾಬ್ದಾರಿ ವಹಿಸಿತ್ತು. ಕಳೆದ ಹಲವು ವರ್ಷಗಳಿಂದ ನಾವು ಈ ಸಂವಿಧಾನ ಒಪ್ಪಿ ಬದುಕುತ್ತಿದ್ದೇವೆ. 6 ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ಚನ್ನಣ್ಣ ವಾಲೀಕಾರ ಅವರು ಬರೆದಿದ್ದ ‘ನೀ ಹೋದ ಮರುದಿನ’ ಎಂಬ ಅಂಬೇಡ್ಕರರ ಬಗೆಗಿನ ಕವಿತೆಯನ್ನು ತೆಗೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸಮಾಜ ಸುಧಾರಕರ ಬಗ್ಗೆ ಹೇಳಲಾಗಿದೆ. ಅಲ್ಲಿ ಅಂಬೇಡ್ಕರರ ಬಗ್ಗೆಯೂ ಮಾಹಿತಿ ಇದೆ. ಆದರೆ ಈ ಹಿಂದಿನ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಅವರ ತಂದೆ, ತಾಯಿಯವರ ಹೆಸರುಗಳಿದ್ದವು. ಅಂಬೇಡ್ಕರ್ ಹುಟ್ಟಿದ ಸ್ಥಳ ಮತ್ತು ದಿನಾಂಕವಿತ್ತು. ಅದನ್ನೂ ಸಹ ತೆಗೆದುಹಾಕಲಾಗಿದೆ. ಅದೇ ಭಾಗದಲ್ಲಿ ಅಂಬೇಡ್ಕರರ ಬೃಹತ್ ಹೋರಾಟಗಳಾಗಿದ್ದ ಮಹಾಡ್ ಸತ್ಯಾಗ್ರಹ ಹಾಗೂ ಕಾಲಾರಾಂ ದೇಗುಲ ಪ್ರವೇಶ ಹೋರಾಟಗಳ ಪ್ರಸ್ತಾಪವನ್ನೂ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದರು.

- Advertisement -

9 ನೇ ತರಗತಿಯ ಸಮಾಜ ವಿಜ್ಞಾನದ‌ ನಮ್ಮ ಸಂವಿಧಾನ ಪಾಠದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗಿದೆ ಎಂದಿತ್ತು. ಈ ವಾಕ್ಯವನ್ನೂ ಈಗ ತೆಗೆದು ಹಾಕಲಾಗಿದೆ. ಇದಲ್ಲದೇ ಅಂಬೇಡ್ಕರ್ ಅವರ ಬಗ್ಗೆ ಇನ್ನೂ ಅನೇಕ ಅಂಶಗಳನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದನ್ನು ಹಿಂದೆಂದೂ ನಾನು ನೋಡಿಲ್ಲ. ಪಠ್ಯದಲ್ಲಿ ಆಗಿರುವ ಪ್ರಮಾದಗಳಿಗೆ ಬಿಜೆಪಿ ಸರ್ಕಾರವೇ ಕಾರಣ. ಬಸವಣ್ಣ, ಕುವೆಂಪು, ಬುದ್ಧ, ನಾರಾಯಣ ಗುರುಗಳು, ಮಹಾವೀರ ಜೈನ್, ಭಗತ್ ಸಿಂಗ್ ಸೇರಿದಂತೆ ಹಲವು ಮಹಾಂಫ್ ನಾಯಕರ ವಿಚಾರಗಳನ್ನು ಸರ್ಕಾರ ಕೈಬಿಟ್ಟಿದೆ ಇಲ್ಲವೇ ತಿರುಚಿದೆ. ಇದರಿಂದ ಸರ್ಕಾರದ ಮನಸ್ಥಿತಿ, ಮುಖವಾಡ ಬಯಲಾಗಿದೆ ಎಂದು ಬಿಜೆಪಿ ವಿರುದ್ಧ ಡಿಕೆಶಿ ಹರಿಹಾಯ್ದರು.

ಈ ಮಹನೀಯರನ್ನು ನಾವು ಇಷ್ಟು ದಿನಗಳ ಕಾಲ ಗೌರವವಾಗಿ ಕಾಣುತ್ತಿದ್ದೆವು. ಆದರೆ ಈಗ ಪಠ್ಯ ಪುಸ್ತಕದಲ್ಲಿ ಅವರನ್ನು ಸಾಮಾನ್ಯರಂತೆ ಬಿಂಬಿಸಲಾಗಿದೆ. ಇಷ್ಟು ದಿನ ನಮ್ಮ ಸರ್ಕಾರಗಳು ಪರಿಶಿಷ್ಟ ಸಮುದಾಯದ ರಕ್ಷಣೆಗೆ ನಿಂತಿದ್ದವು. ವಾಲ್ಮೀಕಿ ಸಮುದಾಯ ನಮಗೆ ರಾಮಾಯಣ ಬರೆದು ಕೊಟ್ಟಿದೆ. ಇಂತಹ ಶ್ರೇಷ್ಠ ಸಮಾಜವನ್ನು ಕೀಳಾಗಿ ಕಾಣುತ್ತಿರುವುದರಿಂದ ನಮಗೆ ಬಹಳ ನೋವಾಗಿದೆ. ಇದನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದು ಕಿಡಿಕಾರಿದರು.

ತಮ್ಮ ಸಮಾಜದ ಗೌರವ, ಸ್ವಾಭಿಮಾನ ಕಾಪಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಎಲ್ಲಾ ಧರ್ಮಗಳ ಸಂಘಟನೆಗಳು, ಎಲ್ಲಾ ಹಿರಿಯ ಸ್ವಾಮೀಜಿಗಳು, ಮುಖಂಡರು ಧ್ವನಿ ಎತ್ತಬೇಕು. ಮುಖ್ಯಮಂತ್ರಿಗಳ ಆದೇಶವೇ ಬಹಳ ಗೊಂದಲದಲ್ಲಿದೆ. ಬಸವಣ್ಣನವರನ್ನೆ ಬಹಳ ಅಗೌರವದಿಂದ ಕಂಡಿದ್ದು, ಈಗ ಅದನ್ನು ಮರುಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.ಮುರುಘಾಮಠ, ಸಿದ್ದಗಂಗಾ ಮಠ, ಪಂಚಮಸಾಲಿ, ಆದಿ ಚುಂಚನಗಿರಿ ಮಠದ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಇದರ ವಿರುದ್ಧ ಧ್ವನಿ ಎತ್ತಿದ್ದು, ತಮ್ಮ ಸಮಾಜಗಳಿಗೆ ನ್ಯಾಯ ಸಿಗಲಿ ಎಂದು ಹೋರಾಟ ಮಾಡುತ್ತಿದ್ದಾರೆ. ಇವರ ಜತೆಗೆ ಸಾಹಿತಿಗಳು, ಚಿಂತಕರು ಈ ಸರ್ಕಾರದ ನಡೆ ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಪಕ್ಷದ ಅಧ್ಯಕ್ಷನಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಕೆಶಿ ಹೇಳಿದರು.

ನಿಮ್ಮ ಹೋರಾಟ ಮುಂದುವರಿಸಿ. ನಿಮ್ಮ ಜತೆ ನಾವಿರುತ್ತೇವೆ:

ರಾಜ್ಯಸಭೆ ಚುನಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಬೇರೆಯವರು ಏನು ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾವು ಆತ್ಮಸಾಕ್ಷಿ ಮತ ಹಾಗೂ ಜಾತ್ಯತೀತ ಭಾವನೆ ಹೊಂದಿರುವವರು ನಮಗೆ ಮತ ನೀಡಬೇಕು ಎಂದು ಕೇಳಿದ್ದೇವೆ. ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ ಹರಿಪ್ರಸಾದ್ ಹಾಗೂ ರಾಷ್ಟ್ರ ನಾಯಕರು ಸೇರಿ ಪಕ್ಷದಿಂದ 2ನೆ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆವು. ಕೆಲವು ಮಾಧ್ಯಮಗಳು ಖರ್ಗೆ ಅವರು ಜೆಡಿಎಸ್ ಜತೆ ಸಂಧಾನ ಮಾಡುತ್ತಿದ್ದಾರೆ ಎಂದು ವರದಿ ಮಾಡಿದ್ದು, ಇದು ಸತ್ಯಕ್ಕೆ ದೂರ. ಅವರು ಪಕ್ಷದ ಹಿರಿಯ ನಾಯಕರು, ಅವರಿಗೆ ಸಾಕಷ್ಟು ಜವಾಬ್ದಾರಿ ನೀಡಲಾಗಿದ್ದು, ಅವರು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಪಕ್ಷ ಏನು ಹೇಳಿದೆಯೋ ಅದನ್ನು ನಾವೆಲ್ಲರೂ ಒಟ್ಟಾಗಿ ಪಾಲಿಸುತ್ತಿದ್ದೇವೆ. ಅವರನ್ನು ಅನಗತ್ಯವಾಗಿ ಈ ವಿಚಾರದಲ್ಲಿ ಎಳೆದು ತರಬಾರದು’ ಎಂದರು.

ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ನಮ್ಮ ಗೌರವ ನಾವು ಉಳಿಸಿಕೊಳ್ಳಬೇಕು. ಯಾರು ಏನೇನು ಹೇಳಿದ್ದಾರೆ ಎಂಬುದನ್ನು ಮಾಧ್ಯಮಗಳು ಬಿತ್ತರಿಸಿವೆ. ಯಾರು ಯಾವ ಭಾಷೆ ಬಳಸಿದ್ದಾರೆ ಎಂಬುದನ್ನೂ ಜನ ನೋಡಿದ್ದಾರೆ. ನಾವು ಯಾರ ಹೆಸರನ್ನೂ ಹೇಳುವುದಿಲ್ಲ’ ಎಂದರು.

Join Whatsapp