ವಿಪಕ್ಷ ನಾಯಕರ ಕಾರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದಿರುವುದು ಹೇಡಿಗಳ ಲಕ್ಷಣ: ದಿನೇಶ್ ಗುಂಡೂರಾವ್ ಕಿಡಿ

Prasthutha|

ಬೆಂಗಳೂರು: ಮಡಿಕೇರಿ ಭೇಟಿಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ಯುವ BJP ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದಿರುವುದು ಹೇಡಿಗಳ ಲಕ್ಷಣ. ಈ‌ ಕೃತ್ಯ ಅವರ ಹತಾಶೆ ತೋರಿಸುತ್ತಿದೆ. ಸಿದ್ದರಾಮಯ್ಯರವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ BJP ಇಂತಹ ಹೀನ ನಡೆ ಪ್ರದರ್ಶಿಸುತ್ತಿದೆ. ಇದೊಂದು ಸರ್ಕಾರಿ ಪ್ರಾಯೋಜಿತ ಗಲಭೆ ಎಂದು ಕಾಂಗ್ರೆಸ್ ಶಾಸಕ, ಎಐಸಿಸಿ ಸದಸ್ಯ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಿದ್ದಾರಾಮೋತ್ಸವ ದ ಭರ್ಜರಿ ಯಶಸ್ಸಿನ ಬಳಿಕ BJPಯವರಿಗೆ ನಡುಕ ಶುರುವಾಗಿದೆ‌. ಹಾಗಾಗಿ ಸಿದ್ದರಾಮಯ್ಯನವರ ಮೇಲಿನ ಅಸಹನೆಯಿಂದ ಕಾರ್ಯಕರ್ತರನ್ನು ಛೂ ಬಿಟ್ಟು ಘೇರಾವ್ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. BJPಯವರ ಈ ಷಡ್ಯಂತ್ರಕ್ಕೆ ಕಾಂಗ್ರೆಸ್ ಆಗಲಿ ಸಿದ್ದರಾಮಯ್ಯರಾಗಲಿ ಸೊಪ್ಪು‌ ಹಾಕುವುದಿಲ್ಲ ಎಂದು ಹೇಳಿದ್ದಾರೆ.

BJPಯವರು ಹೇಡಿಗಳಂತೆ ವರ್ತಿಸುವುದು ಬಿಡಲಿ. ಮಡಿಕೇರಿಯಲ್ಲಿ BJP ಕಾರ್ಯಕರ್ತರು ಗೂಂಡಾ ವರ್ತನೆ ತೋರಿಸಿದ್ದಾರೆ.

- Advertisement -

ವಿಪಕ್ಷ ನಾಯಕರಿಗೇ ಈ ರಾಜ್ಯದಲ್ಲಿ ಭದ್ರತೆ ಇಲ್ಲ. ಇನ್ನು ಜನಸಾಮಾನ್ಯರಿಗೆ ರಕ್ಷಣೆ ಎಲ್ಲಿ? ಇದು ಗಂಭೀರ ಸ್ವರೂಪದ ಭದ್ರತಾ ಲೋಪ. ಇಂತಹ ಕಿಡಿಗೇಡಿ‌ ಕೃತ್ಯ ನಡೆಸುವ ಮೂಲಕ ವಿಪಕ್ಷದ ಬಾಯಿ ಮುಚ್ಚಿಸಬಹುದು ಎಂದು ಸರ್ಕಾರ ಭಾವಿಸಿರಬಹುದು.

ಆದರೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದು ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದಿದ್ದಾರೆ.

ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿ, ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ವಿಪಕ್ಷೀಯ ನಾಯಕರಾದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆಯುವ ಮೂಲಕ ಅಗೌರವಯುತವಾಗಿ ನಡೆದುಕೊಂಡಿರುವ ಬಿಜೆಪಿ ಯುವ ಮೋರ್ಚಾದ ಗೂಂಡಾಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

40% ಭ್ರಷ್ಟಾಚಾರದಲ್ಲಿ ಮುಳುಗಿ ರಾಜ್ಯವನ್ನು ಸಂಪೂರ್ಣ ಕತ್ತಲಿಗೆ ಕೊಂಡೊಯ್ಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಸಂಪುಟದಲ್ಲಿರುವ ಸದಸ್ಯರೇ ಉಗಿಯುತ್ತಿದ್ದರೂ ಕೂಡಾ ಬುದ್ಧಿ ಬರುವಂತೆ ತೋರುತ್ತಿಲ್ಲ. ಆಡಳಿತ ನಡೆಸುವ ಯೋಗ್ಯತೆ ಇಲ್ಲದ ಇವರು ಜನಪರವಾಗಿ ಸಿದ್ದರಾಮಯ್ಯ ಅವರ ಮೇಲೆ ತೋರಿರುವ ವರ್ತನೆ ಅಕ್ಷರಶಃ ಖಂಡನೀಯ ಎಂದು ಹೇಳಿದ್ದಾರೆ.

ಇದು ಗೂಂಡಾ ರಾಜ್ಯದ ಮನಸ್ಥಿತಿಯ ಪ್ರತೀಕವಾಗಿದ್ದು, ಕೈಲಾಗದವನು ಮೈ ಪರಚಿಕೊಂಡ ಎಂಬತೆ ಬಿಜೆಪಿಗರು ತಮ್ಮ ಹತಾಶೆಯನ್ನು ಈ ರೀತಿಯಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳು ಮತ್ತು ಶೋಷಿತ ವರ್ಗಗಳ ಪರವಾದ ನಾಯಕರೆಂದರೆ ಈ ಮನುವಾದಿಗಳಿಗೆ ಸದಾ ಎಲ್ಲಿಲ್ಲದ ಅಸಹನೆ ಎಂಬುದಕ್ಕೆ ಇದೂ ಕೂಡಾ ಒಂದು ಉದಾಹರಣೆಯಾಗಿದೆ ಎಂದು ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.

“ಬಿಜೆಪಿಯ ಮನುವಾದಿಗಳಿಗೆ ಶೂದ್ರರು-ಹಿಂದುಳಿದವರೆಂದರೆ ಕೆಂಡದಂತಹ ಕೋಪ ಎಂಬುದಕ್ಕೆ ಇದೇ ಸಾಕ್ಷಿ. ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸಲಾಗುತ್ತಿಲ್ಲವೇ? ಹೀನ ಕೃತ್ಯಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಬಿಜೆಪಿಗರು ತೋರಿದ್ದಾರೆ! ಬಸವಣ್ಣ-ಸಂಗೊಳ್ಳಿರಾಯಣ್ಣ-ದಾಸ ಶ್ರೇಷ್ಠರನ್ನು ಕಂಡಂತಹ ಈ ನಾಡಿನಲ್ಲಿ ನಿಮ್ಮ ಕುತಂತ್ರಗಳು ನಡೆಯದು” ಎಂದು ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.

Join Whatsapp